ಸಿಎಂ ಮೋದಿ ಸಿಟ್ಟು
ಮೋದಿಗೆ ವೋಟ್ ಹಾಕಿ, ನನ್ನತ್ರ ಸಮಸ್ಯೆ ತರ್ತೀರಾ ಎಂದ ಸಿಎಂ ಎಚ್ಡಿಕೆ
Team Udayavani, Jun 27, 2019, 5:19 AM IST
ರಾಯಚೂರು/ಬೆಂಗಳೂರು: ವೋಟ್ ಮಾತ್ರ ಮೋದಿಗೆ ಹಾಕ್ತೀರಿ, ಸಮಸ್ಯೆ ಮಾತ್ರ ನನ್ನತ್ರ ಹೇಳ್ತೀರಿ…
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಿಟ್ಟಿನಲ್ಲಿ ಹೇಳಿದ ಈ ಮಾತು ವಿವಾದಕ್ಕೆ ಕಾರಣವಾಗಿ, ಕಡೆಗೆ ಅವರೇ ಸ್ಪಷ್ಟೀಕರಣ ನೀಡಿದ ಪ್ರಸಂಗ ನಡೆದಿದೆ. ಈ ಹೇಳಿಕೆ ವಿರುದ್ಧ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸಿಎಂ ಅವರ ಕೊಳಕು ಮನಸ್ಸನ್ನು ತೋರಿಸುತ್ತದೆ ಎಂದು ಎಂದು ಬಣ್ಣಿಸಿದೆ.
ಕರೇಗುಡ್ಡದ ಗ್ರಾಮವಾಸ್ತವ್ಯಕ್ಕೆ ಆಗಮಿಸುವ ವೇಳೆ ಸಮೀಪದ ಯರಮರಸ್ ಅತಿಥಿಗೃಹದಲ್ಲಿ ತಂಗಿದ್ದ ಅವರು, ತುಂಗಭದ್ರಾ ಜಲಾಶಯದ ಹಂಗಾಮಿ ಕಾರ್ಮಿಕರು, ವೈಟಿಪಿಎಸ್ ಗುತ್ತಿಗೆ ಕಾರ್ಮಿಕರ ಸಮಸ್ಯೆಗಳ ಕುರಿತು ಟಿಯುಸಿಐ ಮುಖಂಡರೊಂದಿಗೆ ಚರ್ಚಿಸಿದರು. ಆದರೆ, ಮಾತುಕತೆ ಸಫಲವಾಗದ ಹಿನ್ನೆಲೆಯಲ್ಲಿ ಕಾರ್ಮಿಕರು ಸಿಎಂ ಚಲಿಸುತ್ತಿದ್ದ ಬಸ್ ಅಡ್ಡಲಾಗಿ ನಿಂತು ಪ್ರತಿಭಟನೆಗೆ ಮುಂದಾದರು. ಸುಮಾರು 15 ನಿಮಿಷಕ್ಕೂ ಅಧಿಕ ಕಾಲ ಹೋರಾಟ ಸ್ಥಗಿತಗೊಳಿಸಲು ನಡೆಸಿದ ಪ್ರಯತ್ನಗಳು ವಿಫಲವಾದವು. ಈ ವೇಳೆ ತಾಳ್ಮೆ ಕಳೆದುಕೊಂಡ ಸಿಎಂ ”ವೋಟ್ ಮಾತ್ರ ಮೋದಿಗೆ ಹಾಕ್ತೀರಾ. ಸೌಲಭ್ಯ ನನ್ನನ್ನು ಕೇಳ್ತಿರಾ. ಅವರನ್ನೇ ಕೇಳಿ ಹೋಗಿ” ಎಂದು ಟೀಕಿಸಿದರು.
ಇನ್ನು ಮೋದಿ ಬಗ್ಗೆ ಮಾತೇ ಆಡಲ್ಲ: ಕರೇಗುಡ್ಡಕ್ಕೆ ಆಗಮಿಸಿ ವೇದಿಕೆ ಕಾರ್ಯಕ್ರಮ ಶುರುವಾಗುವ ವೇಳೆಗೆ ಆ ಸುದ್ದಿ ಎಲ್ಲೆಡೆ ಸದ್ದು ಮಾಡಿರುವ ಸಂಗತಿ ಅರಿತ ಸಿಎಂ, ಭಾಷಣ ಆರಂಭಿಸುತ್ತಿದ್ದಂತೆ ಅದೇ ವಿಚಾರ ಪ್ರಸ್ತಾಪಿಸಿದರು. ನಾನು ಪ್ರಧಾನಿ ಮೋದಿ ಅವರ ಬಗ್ಗೆ ಮಾತನಾಡಿದ್ದೇ ತಪ್ಪಾ? ವೋಟ್ ಅವರಿಗೆ ಮಾಡಿ, ಸೌಲಭ್ಯ ನನ್ನ ಕೇಳಿದರೆ ತಪ್ಪೇ ಎಂದು ಕೇಳಿದ್ದನ್ನೇ ದೊಡ್ಡದಾಗಿ ಬಿಂಬಿಸಲಾಗುತ್ತಿದೆ. ಬೇಡ ಎಂದರೆ ಇನ್ನು ಮುಂದೆ ನಾನು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತನಾಡುವುದನ್ನೇ ಬಿಡುತ್ತೇನೆ ಎಂದರು.
ಅಲ್ಲಿಗೆ ಸುಮ್ಮನಾಗದ ಸಿಎಂ, ನನ್ನ ಎದುರು ಮೋದಿ ಮೋದಿ ಎಂದು ಕೂಗಿದರೆ ಏನು ಪ್ರಯೋಜನ. ನಿಮ್ಮ ಸಮಸ್ಯೆ ಆಲಿಸಿ ಇತ್ಯರ್ಥಪಡಿಸಬೇಕಾದವನು ನಾನೇ ಎಂದು ಹೇಳುವ ಮೂಲಕ ಮೋದಿ ಬಗೆಗಿನ ಅಸಮಾಧಾನ ಹೊರಹಾಕಿದರು.
ಕೊಳಕು ಮನಸ್ಸು: ಬಿಎಸ್ವೈ