ಬೆಂಗಳೂರು : ಪೂರ್ವ ಭಾಗದಲ್ಲಿ ಭರ್ಜರಿ ಮಳೆ, 10 ಮರಗಳು ಧರೆಗೆ
Team Udayavani, Jun 4, 2022, 10:27 PM IST
ಬೆಂಗಳೂರು: ನಗರದ ಪೂರ್ವ ವಲಯದಲ್ಲಿ ಶನಿವಾರ ಸಂಜೆ ಭರ್ಜರಿ ಮಳೆಯಾಗಿದೆ. ಉಳಿದೆಡೆ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಿದೆ. ಪಶ್ಚಿಮ ಭಾಗದಲ್ಲಿ ಮಳೆಗಿಂತ ಗಾಳಿಯ ವೇಗ ಹೆಚ್ಚಾಗಿದ್ದರಿಂದ ಸುಮಾರು 8ರಿಂದ 10 ಕಡೆ ಮರಗಳು ಉರುಳಿರುವ ಬಗ್ಗೆ ವರದಿಯಾಗಿದೆ.
ಪೂರ್ವ ಭಾಗದ ಕೆ.ಆರ್. ಪುರದಲ್ಲಿ 44.5 ಮಿಮೀ ಮಳೆಯಾಗಿದೆ. ಮಹದೇವಪುರ ಹಾಗೂ ದೊಡ್ಡನೆಕ್ಕುಂದಿಯಲ್ಲಿ ತಲಾ 33 ಮಿಮೀ ಮಳೆಯಾಗಿದೆ. ಪರಿಣಾಮ, ಪೂರ್ವಭಾಗದಲ್ಲಿ ಶನಿವಾರ ಬೈಕ್ ಸವಾರರು ಸಂಚರಿಸಲು ಪರದಾಡುವಂತಾಯಿತು.
ನಗರದ ಕೇಂದ್ರ ಭಾಗವಾದ ಮೆಜೆಸ್ಟಿಕ್, ಮಾರ್ಕೆಟ್, ಹಲಸೂರು, ಕಾರ್ಪೋರೇಷನ್, ಚಿಕ್ಕಪೇಟೆ, ಮಲ್ಲೇಶ್ವರ, ರಾಜಾಜಿನಗರ, ಶಾಂತಿನಗರ ಸೇರಿದಂತೆ ಹಲವೆಡೆ ಶನಿವಾರ ಸಂಜೆ ಜಿಟಿ ಜಿಟಿ ಮಳೆಯಾಗಿದೆ.
ಎಲ್ಲೆಲ್ಲಿ ಎಷ್ಟು ಮಳೆ?
ದಾಸನಪುರ 16 ಮಿಮೀ, ಆಲೂರು 8.5, ಹುಸ್ಕೂರು 10.5, ಮಾದನಾಯಕನಹಳ್ಳಿ 13, ಅಡಕೆಮಾರನಹಳ್ಳಿ 12.5, ಹಸೆರುಘಟ್ಟ 19.5, ಅರಕೆರೆ 17, ಶಿವಕೋಟೆ 13, ಸೊನ್ನೇನಹಳ್ಳಿ 13.5, ಐಟಿಸಿ ಜಾಲ 21.5, ಹುಣಸೆಮಾರನಹಳ್ಳಿ 16.5, ಸಿಂಗನಾಯಕನಹಳ್ಳಿ 29.5, ಚಿಕ್ಕಬಣಾವರ 10, ಬಾಗಲಗುಂಟೆ 20, ಹೂಡಿ 23, ಹೊರಮಾವು 10.5, ಎಚ್ಎಎಲ್ 20, ರಾಮೂರ್ತಿನಗರ 13.5, ಮಹದೇವಪುರ 33, ವರ್ತೂರು 21, ದೊಡ್ಡನೆಕ್ಕುಂದಿ 33, ಮಾರತ್ತಹಳ್ಳಿ 13, ವಿಜ್ಞಾನನಗರ 8 ಮಳೆಯಾಗಿದೆ.
ದಕ್ಷಿಣ ವಲಯದ ರಾಜರಾಜೇಶ್ವರಿ ನಗರ, ಕುಮಾರಸ್ವಾಮಿ ಹಾಗೂ ಸಾರಕ್ಕಿಯಲ್ಲಿ ತಲಾ 1 ಮಿಮೀ, ಕೋರಮಂಗಲ 3 ಮಿಮೀ ಮತ್ತು ಚಾಮರಾಜನಗರ 1.5 ಮಿಮೀ ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ (ಕೆಎಸ್ಎನ್ಡಿಎಂಸಿ) ತಿಳಿಸಿದೆ.
ಇದನ್ನೂ ಓದಿ : ಪೆರ್ಲ : ಪ್ರೀತಿಸಿ ವಿವಾಹವಾದ ಯುವ ದಂಪತಿ ನೇಣು ಬಿಗಿದು ಆತ್ಮಹತ್ಯೆ
8 ಮರಗಳು ಧರೆಗೆ:
ನಗರದಲ್ಲಿ ಮಳೆ ಮತ್ತು ಬಿರುಗಾಳಿ ಬೀಸಿದ್ದರಿಂದ ಮರಗಳು ಉರುಳಿ ಬಿದ್ದಿದ್ದು, ಮರದ ಕೊಂಬೆಗಳು ಮುರಿದು ಬಿದ್ದಿವೆ.
ಕೆ.ಆರ್. ಪುರದ ವಿಜಯ ಬ್ಯಾಂಕ್ ಕಾಲೋನಿ, ಕುಂದನಹಳ್ಳಿಯ ಎಇಸಿಐ ಲೇಔಟ್, ಜಯನಗರ 4ನೇ ಬ್ಲಾಕ್, ಅತ್ತಿಗುಪ್ಪೆ, ಆಸ್ಟಿನ್ಟೌನ್ನ ಜಸ್ಮಾ ಭವನ, ಮಲ್ಲಸಂದ್ರ, ಗೆಳೆಯರ ಬಳಗದ ಎಜಿಬಿ ಬಡಾವಣೆ ಸೇರಿದಂತೆ ಹಲವೆಡೆ ಮರಗಳು ಉರುಳಿ ಬಿದ್ದಿವೆ ಎಂದು ಬಿಬಿಎಂಪಿ ಸಹಾಯವಾಣಿ ಮಾಹಿತಿ ನೀಡಿದೆ.