ಹಿಜಾಬ್ ಪ್ರಕರಣದ ಹಿಂದಿರುವ ಶಕ್ತಿಗಳ ಬಗ್ಗೆ ತನಿಖೆಯಾಗಲಿ: ಬಿ.ಸಿ. ನಾಗೇಶ್
Team Udayavani, Feb 8, 2022, 9:30 PM IST
ಬೆಂಗಳೂರು: ಹಿಜಾಬ್ ಪ್ರಕರಣದ ಹಿಂದಿರುವ ಶಕ್ತಿಗಳ ಕುರಿತು ಸಮಗ್ರ ತನಿಖೆ ಆಗಬೇಕು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 5 ಸಾವಿರ ಕಾಲೇಜುಗಳಲ್ಲಿ ಕೇವಲ 12 ಕಾಲೇಜುಗಳಲ್ಲಿ ಮಾತ್ರ ಈ ರೀತಿಯ ಗಲಾಟೆ ಆಗಿದೆ. ಸರ್ಕಾರ ಎಲ್ಲ ಕಡೆಯೂ ಕ್ರಮ ಕೈಗೊಂಡಿದೆ. ಕೆಲವು ವಿದ್ಯಾರ್ಥಿಗಳು ಕೇವಲ ಹಿಜಾಬ್ಗ ಅವಕಾಶ ಕೇಳುತ್ತಿಲ್ಲ. ಐದು ಬಾರಿ ನಮಾಜ್ ಮಾಡಲೂ ಅವಕಾಶ ಕೇಳುತ್ತಿದ್ದಾರೆ. ಸರ್ಕಾರ ಯಾವ ಬೇಡಿಕೆಯನ್ನೂ ಒಪ್ಪಿಕೊಂಡಿಲ್ಲ ಎಂದರು.
ರಾಜ್ಯ ಸರ್ಕಾರ ಇದರಿಂದ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ಹಾಗೆ ಮಾಡುವುದಾಗಿದ್ದರೆ, ಒಂದು ತಿಂಗಳು ಉಡುಪಿಯ ಕಾಲೇಜಿನಲ್ಲಿ ನಡೆಯುತ್ತಿದ್ದ ಘಟನೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿರಲಿಲ್ಲ. ಕೆಲವು ರಾಜಕೀಯ ನಾಯಕರು ಈ ಘಟನೆಗೆ ತುಪ್ಪ ಸುರಿದು ಶಕ್ತಿ ತುಂಬಿದರು.
ಅದರಿಂದ ಎಲ್ಲ ಕಡೆಗೆ ಹರಡುವಂತಾಯಿತು. ಪಾಕಿಸ್ತಾನದ ಪರ ಎಂದು ಪ್ರಚೋದನಾತ್ಮಕ ವಿಚಾರ ಯಾರೂ ಹೇಳ ಬಾರದು. ಜೊತೆಗೆ ಇಂಥದ್ದು ಸಂವಿಧಾನದಲ್ಲಿ ಇದೆ ಎನ್ನುವುದನ್ನೂ ಕೂಡ ಯಾರೂ ಹೇಳಬಾರದು. ಈ ಘಟನೆಯ ಹಿಂದೆ ಎಸ್.ಡಿ.ಪಿ ಐ ಸಂಘಟನೆ ಇದರ ಹಿಂದೆ ಕೆಲಸ ಮಾಡಿದೆ ಎನ್ನೋದು ಕೆಲ ವರದಿಯಿಂದ ತಿಳಿದಿದೆ.
ಆದರೆ, ಇದರ ಬಗ್ಗೆ ತನಿಖೆ ಆಗಬೇಕು. ಇದರ ಹಿಂದೆ ಯಾರು ಯಾರಿದ್ದಾರೆ ಎನ್ನೋ ಬಗ್ಗೆ ತನಿಖೆ ಆಗಲಿ. ತನಿಖೆ ಆಗಬೇಕು ಎನ್ನುವ ಹಂತದಲ್ಲಿದೆ, ಆದೇಶ ಆಗಿಲ್ಲ ಎಂದು ಹೇಳಿದರು.
ಇನ್ನು ರಾಷ್ಟ್ರ ಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸಿದ್ದರೆ ಅದು ಖಂಡನೀಯ. ಅಲ್ಲಿಂದ ಅಧಿಕಾರಿಗಳ ವರದಿ ತರಿಸಿಕೊಂಡು ಮುಂದಿನ ತೀರ್ಮಾನ ಮಾಡುತ್ತೇವೆ. ಇಂಥ ಘಟನೆಗಳಿಂದ ಮಕ್ಕಳು ಖಂಡಿತ ಆತಂಕ್ಕೊಳಗಾಗುತ್ತಾರೆ ಎಂದು ಅವರು ಹೇಳಿದರು.