ದೇವೇಗೌಡರು ಪ್ರಧಾನಿಯಾಗಿದ್ದಾಗ ಕಾಶ್ಮೀರದಲ್ಲಿ ಬ್ಲಾಸ್ಟ್ ನಡೆದಿರಲಿಲ್ಲ: ಕುಮಾರಸ್ವಾಮಿ
Team Udayavani, Apr 19, 2019, 4:58 PM IST
ಹುಬ್ಬಳ್ಳಿ : “ಪಿಎಂ ಮೋದಿ ಹೇಳುತ್ತಾರೆ : ನಾನು ದೇಶಪ್ರೇಮಿ ಅಲ್ಲ ಅಂತ; ದೇಶಪ್ರೇಮವನ್ನು ನಾನು ಮೋದಿ ಅವರಿಂದ ಕಲಿಯಬೇಕಾಗಿಲ್ಲ. ದೇವೇಗೌಡರು ದೇಶದ ಪ್ರಧಾನಿಯಾಗಿದ್ದಾಗ ಕಾಶ್ಮೀರದಲ್ಲಿ ಒಂದೇ ಒಂದು ಬ್ಲಾಸ್ಟ್ ಆಗಿರಲಿಲ್ಲ. ಇದು ನಮ್ಮ ಪರಂಪರೆ. ಆದುದರಿಂದ ನೀವು ನನ್ನನ್ನು ಬ್ರಾಂಡ್ ಮಾಡಬೇಡಿ; ನಿಮಗೆ ಆ ಹಕ್ಕಿಲ್ಲ’ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಪ್ರಧಾನಿ ಮೋದಿಗೆ ತಿರುಗೇಟು ನೀಡಿದ್ದಾರೆ.
ಎರಡು ದಿನಗಳ ಹಿಂದಷ್ಟೇ ನಡೆದಿದ್ದ ರಾಲಿಯಲ್ಲಿ ಮಾತನಾಡುತ್ತಾ ಮೋದಿ ಅವರು, ಕರ್ನಾಟಕದಲ್ಲಿನ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಕೂಟದ ವೋಟ್ ಬ್ಯಾಂಕ್ ಪಾಕಿಸ್ಥಾನದ ಬಾಲಾಕೋಟ್ನಲ್ಲಿದೆಯಾ ? ಎಂದು ಪ್ರಶ್ನಿಸಿದ್ದರು.
‘ಕಳೆದ ಬಾರಿಯ ಲೋಕಸಭಾ ಚುನಾವಣೆಯ ವೇಳೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಭ್ರಷ್ಟಾಚಾರ ಮುಕ್ತ ಸರಕಾರವನ್ನು ನೀಡುವೆವು ಎಂದು ಹೇಳಿತ್ತು. ಹಾಗಿದ್ದರೆ ಮೋದಿ ಅವರು ಟೀ ಮಾರಿಕೊಂಡು ಪಕ್ಷವನ್ನು ಶ್ರೀಮಂತಗೊಳಿಸಿದರಾ ? ಭ್ರಷ್ಟಾಚಾರ ಮುಕ್ತ ಬಿಜೆಪಿ ಸರಕಾರ ಎನ್ನುವುದು ಕೇವಲ ಫೇಕ್’ ಎಂದು ಕುಮಾರಸ್ವಾಮಿ ಹೇಳಿದರು.
‘ಕಾರವಾರದಲ್ಲಿ ಒಬ್ಬ ಬಿಜೆಪಿ ನಾಯಕನಿಂದ 78 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ಈ ಹಣ ಎಲ್ಲಿಂದ ಬಂತು ?’ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ಮೋದಿ ಅವರು ಕರ್ನಾಟದಲ್ಲಿನ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರಕಾರದ್ದು ಕೊನೆಯಿಲ್ಲದ ಡ್ರಾಮಾ ಎಂದು ಲೇವಡಿ ಮಾಡಿದ್ದರು. ಇದಕ್ಕೆ ಉತ್ತರವಾಗಿ ಕುಮಾರಸ್ವಾಮಿ ತಮ್ಮ ದೋಸ್ತಿ ಸರಕಾರ ಮಜಬೂತ್ ಸರಕಾರ ಎಂದು ಹೇಳಿದರು.