ಕೋವಿಡ್-19 ಹಿನ್ನೆಲೆ ಆನ್ ಲೈನ್ ಮೂಲಕ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಪಾಠ ಪ್ರವಚನ
Team Udayavani, Apr 5, 2020, 5:46 PM IST
ಗಂಗಾವತಿ: ಕೋವಿಡ್-19 ಹರಡಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ನಿಂದ ಶಾಲೆಗಳಿಗೂ ರಜೆ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹತ್ತನೇಯ ತರಗತಿಯ ವಿದ್ಯಾರ್ಥಿಗಳ ಕಲಿಕೆಯಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳಲು ಗಂಗಾವತಿ ತಾಲೂಕಿನ ಸರಕಾರಿ ಪ್ರೌಢಶಾಲೆಯ ಮಕ್ಕಳಿಗೆ ಜೂಮ್ ಆ್ಯಪ್ ಬಳಸಿಕೊಂಡು ಆನ್ಲೈನ್ ನಲ್ಲಿ ವಿವಿಧ ವಿಷಯಗಳ ಕಲಿಕೆ ಸಂಬಂಧಿಸಿದಂತೆ ವಿಷಯ ಶಿಕ್ಷಕರು ಚರ್ಚಿಸುತಿದ್ದಾರೆ.
ಆನ್ ಲೈನ್ ಶಿಕ್ಷಣದ ಮೂಲಕ ವಿದ್ಯಾರ್ಥಿಗಳಲ್ಲಿ ಕಲಿಕೆಯ ನಿರಂತರತೆಯನ್ನು ಕಾಯ್ದುಕೊಳ್ಳುವುದರ ಜೊತೆಗೆ ಆತ್ಮಸ್ಥೈರ್ಯವನ್ನು ಹೆಚ್ಚಿಸಲು ಅನುಕೂಲವಾಗಿದೆ. ಈ ಆ್ಯಪ್ ಮುಲಕ ಪ್ರಶ್ನೆಗಳನ್ನು ಕೇಳುವುದು, ಸಂದೇಹಗಳನ್ನು ನಿವಾರಿಸಿಕೊಳ್ಳಲು ಅನುಕೂಲವಾಗಿದೆ. ಪಾಲಕರಿಗೂ ಮಕ್ಕಳ ಕಲಿಕೆಯ ನಿರಂತರತೆಗೆ ಸಹಾಯ ಮಾಡುತ್ತಿರುವ ಶಿಕ್ಷಕರುಗಳ ಕೆಲಸದಿಂದ ಸಂತೋಷಗೊಂಡಿದ್ದಾರೆ.
ಸದುಪಯೋಗಕ್ಕೆ ಮನವಿ: ಕೋವಿಡ್-19 ವೈರಸ್ ಹರಡದಂತೆ ಲಾಕ್ ಡೌನ್ ಹಿನ್ನೆಲೆಯಲ್ಲಿ 10ನೇ ತರಗತಿಯ ಮಕ್ಕಳು ವಿಷಯವಾರು ಹೆಚ್ಚಿನ ಅಭ್ಯಾಸಕ್ಕೆ ಅನುಕೂಲವಾಗಿದೆ. ಅಭ್ಯಾಸ ನಿರಂತರತೆ ಇರಲು ಶಿಕ್ಷಣ ಇಲಾಖೆ ಆನ್ ಲೈನ್ ಮೂಲಕ ವಿದ್ಯಾರ್ಥಿಗಳಿಗೆ ನಿರಂತರ ಕಲಿಕೆಯನ್ನು ಆಯಾ ವಿಷಯದ ಶಿಕ್ಷಕರ ಮೂಲಕ ಮನವರಿಕೆ ಮಾಡಿಕೊಡಲಾಗುತ್ತಿದೆ. ಪಾಲಕರು ತಮ್ಮ ಮೊಬೈಲ್ ಮೂಲಕ ಮಕ್ಕಳಿಗೆ ಈ ವಿಷಯದ ಕುರಿತು ತಿಳಿಸಿಕೊಡಬೇಕೆಂದು ಬಿಇಒ ಬಿ.ಸೋಮಶೇಖರ ಗೌಡ ಮನವಿ ಮಾಡಿದ್ದಾರೆ.
ಕೋವಿಡ್ 19 ಲಾಕ್ ಡೌನ್ ಕಾರಣದಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಮುಂದೂಡಲಾಗಿದ್ದು, ಮುಂದಿನ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ.