ಜಮ್ಮು-ಕಾಶ್ಮೀರ ಗಡಿಯಲ್ಲಿ ಭಾರೀ ಗುಂಡಿನ ಕಾಳಗ; ಐವರು ಉಗ್ರರ ಸಾವು, 3 ಯೋಧರು ಹುತಾತ್ಮ
ಉಗ್ರರ ವಿರುದ್ಧ ಏಪ್ರಿಲ್ 3ರಿಂದ ಕಾರ್ಯಾಚರಣೆ ನಡೆದಿದ್ದು, ಭದ್ರತಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ಕಾಳಗ ಮುಂದುವರಿದಿದೆ.
Team Udayavani, Apr 5, 2020, 5:16 PM IST
ನವದೆಹಲಿ:ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯ ಕೇರಾನ್ ಸೆಕ್ಟರ್ ನಲ್ಲಿ ಭಾರತೀಯ ಸೇನಾಪಡೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಐವರು ಉಗ್ರರು ಸಾವನ್ನಪ್ಪಿದ್ದು, ಮೂವರು ಯೋಧರು ಹುತಾತ್ಮರಾಗಿರುವ ಘಟನೆ ಭಾನುವಾರ ನಡೆದಿದೆ.
ಗಡಿ ನುಸುಳಿ ಒಳಬರಲು ಯತ್ನಿಸಿದ್ದ ಉಗ್ರರ ವಿರುದ್ಧ ಏಪ್ರಿಲ್ 3ರಿಂದ ಕಾರ್ಯಾಚರಣೆ ನಡೆದಿದ್ದು, ಭದ್ರತಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ಕಾಳಗ ಮುಂದುವರಿದಿದ್ದು ಇಂದಿಗೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಅಲ್ಲದೇ ಇನ್ನೂ ಕಾರ್ಯಾಚರಣೆ ಮುಂದುವರಿದಿದೆ ಎಂದು ವರದಿ ತಿಳಿಸಿದೆ.
ಗಡಿನಿಯಂತ್ರಣ ರೇಖೆ ಸಮೀಪ ಭಾರೀ ಪ್ರಮಾಣದ ಹಿಮಪಾತ ಸುರಿಯುತ್ತಿದ್ದು, ಉಗ್ರರು ಗಡಿ ನುಸುಳಿ ಒಳಬರುವ ಸಂಚು ನಡೆಸಿದ್ದರು. ಕುಪ್ವಾರದ ಕೇರಾನ್ ಸೆಕ್ಟರ್ ನಲ್ಲಿ ಐವರು ಉಗ್ರರನ್ನು ಹೊಡೆದುರುಳಿಸಲಾಗಿತ್ತು. ಕಳೆದ 24 ಗಂಟೆಯಲ್ಲಿ ಭದ್ರತಾ ಪಡೆ ಒಟ್ಟು ಒಂಬತ್ತು ಉಗ್ರರನ್ನು ಹೊಡೆದುರುಳಿಸಿದೆ ಎಂದು ವರದಿ ವಿವರಿಸಿದೆ.