ಶಾ ಹಾಗೂ ಬಿಎಸ್ ವೈ ಶೀಘ್ರ ಗುಣಮುಖರಾಗಲೆಂದು ಸಚಿವ ಪ್ರಭು ಚವ್ಹಾಣ್ ವಿಶೇಷ ಪೂಜೆ
Team Udayavani, Aug 3, 2020, 6:35 PM IST
ಬೀದರ್ : ಕೇಂದ್ರ ಸಚಿವ ಅಮಿತ್ ಶಾ ಮತ್ತು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಕೋವಿಡ್-19 ನಿಂದ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಸ್ವಗ್ರಾಮ ಬೋಂತಿಯ ಘಮಸುಬಾಯಿ ತಾಂಡಾದ ಶ್ರೀ ಸಂತ ಸೇವಾಲಾಲ್ ಮಹಾರಾಜರು ಮತ್ತು ಇಚ್ಛಾಪೂರ್ತಿ ಮಾತಾ ಜಗದಂಬಾ ದೇವಸ್ಥಾನದಲ್ಲಿ ಹೋಮ, ಹವನ ಮತ್ತು ವಿಶೇಷ ಪೂಜೆ ನಡೆಸಿದರು.
ರಾಜ್ಯದಲ್ಲಿ ಕೋವಿಡ್ ಸೋಂಕು ಹರಡದಂತೆ ತಡೆಯಲು ಸಿಎಂ ನಿರಂತರವಾಗಿ ಎಲ್ಲ ಸಚಿವರು, ಉನ್ನತಮಟ್ಟದ ಅಧಿಕಾರಿಗಳ ಸಭೆ ನಡೆಸಿ, ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ, ಹತ್ತು ಹಲವಾರು ಕ್ರಮಗಳನ್ನು ವಹಿಸಿ ಸತತ ಪ್ರಯತ್ನ ವಹಿಸಿದ್ದಾರೆ. ರಾಜ್ಯದಲ್ಲಿ ಸೋಂಕು ಹರಡದಂತೆ ಕ್ರಮವಹಿಸಿದ್ದರು. ಈ ಸಂದರ್ಭದಲ್ಲಿ ಎದುರಾದ ಎಲ್ಲ ಸವಾಲುಗಳನ್ನು ಸಿಎಂ ಎಲ್ಲ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸೇರಿ ಸಮರ್ಥವಾಗಿ ಎದುರಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಕೋವಿಡ್ 19 ಕಳವಳ-ಆಗಸ್ಟ್ 03: 4752 ಹೊಸ ಪ್ರಕರಣಗಳು ; 4776 ಡಿಸ್ಚಾರ್ಜ್ ; 98 ಸಾವು
ಸಿಎಂ ಬಿಎಸ್ವೈ ಅಧಿಕಾರ ಸ್ವೀಕರಿಸಿದ ದಿನಗಳಿಂದ ಹಿಡಿದು ಹತ್ತು ಹಲವಾರು ಸವಾಲುಗಳನ್ನು ಎದುರಿಸುತ್ತಲೇ ರಾಜ್ಯವನ್ನು ಪ್ರಗತಿ ಪಥದತ್ತ ಕೊಂಡೊಯ್ಯಲು ಶತಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬರದ ಛಾಯೆ ಆವರಿಸಿದಾಗ, ಆನಂತರ ಅತಿವೃಷ್ಟಿ ಬಂದಾಗಲೂ ಕುಗ್ಗದೇ, ರಾಜ್ಯದ ಜನರ ಹಿತ ಕಾಯಲು ಶ್ರಮ ವಹಿಸಿದ್ದಾರೆ. ಆದ್ದರಿಂದ ಸಿಎಂ ಕೋವಿಡ್ ನಿಂದ ಬೇಗ ಗುಣಮುಖರಾಗಬೇಕು ಎಂದು ಸಚಿವ ಪ್ರಭು ಚವ್ಹಾಣ್ ಅವರು ದೇವರಲ್ಲಿ ಪ್ರಾರ್ಥಿಸಿದ್ದಾರೆ.