ಬಾಗಲಕೋಟೆ ಒಂದೇ ದಿನ ದ್ವಿ ಶತಕ ಬಾರಿಸಿದ ಕೋವಿಡ್ ಸೋಂಕು
ಜಿಲ್ಲೆಯಲ್ಲಿ 2 ಸಾವಿರ ಗಡಿ ದಾಟಿದ ಸೋಂಕಿತರು | ಈ ವರೆಗೆ 54 ಜನ ಕೋವಿಡ್ಗೆ ಬಲಿ
Team Udayavani, Aug 3, 2020, 6:15 PM IST
ಬಾಗಲಕೋಟೆ : ಜಿಲ್ಲೆಯಲ್ಲಿ ಕೋವಿಡ್ ರಣಕೇಕೆ ಮುಂದುವರೆದಿದ್ದು, ಸೋಮವಾರ ಒಂದೇ ದಿನ ದ್ವಿ ಶತಕ ಬಾರಿಸಿದೆ. ಜಿಲ್ಲೆಯಲ್ಲೇ ಮೊದಲ ಬಾರಿಗೆ ಅತಿಹೆಚ್ಚು 209 ಜನರಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 2,153ಕ್ಕೆ ಏರಿಕೆಯಾಗಿದೆ.
ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಕೋವಿಡ್ ರಣ ಕೇಕೆ ಹಾಕುತ್ತಿದೆ. ಪ್ರತಿದಿನ ನೂರರ ಗಡಿ ದಾಟುತ್ತಿದ್ದ ಸೋಂಕಿತರ ಸಂಖ್ಯೆ, ಸೋಮವಾರ ರೋಬ್ಬರಿ 209 ಜನರಿಗೆ ದೃಢಪಟ್ಟಿದೆ. ಆ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2 ಸಾವಿರ ಗಡಿ ದಾಟಿದೆ.
ಇದನ್ನೂ ಓದಿ: ಕೋವಿಡ್ 19 ಕಳವಳ-ಆಗಸ್ಟ್ 03: 4752 ಹೊಸ ಪ್ರಕರಣಗಳು ; 4776 ಡಿಸ್ಚಾರ್ಜ್ ; 98 ಸಾವು
ಸಮುದಾಯಕ್ಕಿಳಿದ ಸೋಂಕು :
ಕಳೆದ ಒಂದು ವಾರದ ಕೋವಿಡ್ ವಿದ್ಯಮಾನ ಗಮನಿಸಿದರೆ ಜಿಲ್ಲೆಯಲ್ಲಿ ವೈರಸ್, ಸಮುದಾಯಕ್ಕೆ ವಿಸ್ತರಣೆಯಾಗಿದೆ ಎಂಬ ಮಾತು ಕೇಳಿ ಬರುತ್ತದೆ. ಹೀಗಾಗಿ ಜಿಲ್ಲಾಡಳಿತವೂ, ಜಿಲ್ಲೆಯಾದ್ಯಂತ ರ್ಯಾಂಡಮ್ ಆಗಿ ತಪಾಸಣೆಗೆ ಇಳಿದಿದೆ. ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರು, ಪೊಲೀಸರು, ಸೋಂಕಿತರು ಪತ್ತೆಯಾದ ಪ್ರದೇಶದ ಸುತ್ತಲಿನ ಜನರು, ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗೆ ಬರುವ ಲಕ್ಷಣ ಇರುವ ಜನರು, ಕೂಲಿ ಕಾರ್ಮಿಕರು, ಕೆಎಸ್ಆರ್ಟಿ ಸಿಬ್ಬಂದಿ, ಉಸಿರಾಟ ತೊಂದರೆ ಹಾಗೂ ಕೆಮ್ಮು-ನೆಗಡಿ-ಜ್ವರ ಕಂಡು ಬಂದ ವ್ಯಕ್ತಿಗಳ ತಪಾಸಣೆ ಮಾಡಲಾಗುತ್ತಿದೆ.
ರಾಂಡಮ್ ಆಗಿ ತಪಾಸಣೆ ಮಾಡುತ್ತಿರುವುದರಿಂದ, ಜಿಲ್ಲೆಯಲ್ಲಿ ನಿತ್ಯ ಸೋಂಕಿತರ ಸಂಖ್ಯೆಯೂ ಹೆಚ್ಚುತ್ತಿವೆ ಎಂದು ಡಿಎಚ್ಒ ಡಾ|ಅನಂತ ದೇಸಾಯಿ ಉದಯವಾಣಿಗೆ ತಿಳಿಸಿದ್ದಾರೆ.
54 ಜನ ಕೋವಿಡ್ಗೆ ಬಲಿ :
ಕೋವಿಡ್ ಗೆ ಈ ವರೆಗೆ 54 ಜನರು ಬಲಿಯಾಗಿದ್ದಾರೆ. ಅದರಲ್ಲಿ ಓರ್ವ ಸರ್ಕಾರಿ ವೈದ್ಯಾಧಿಕಾರಿ, ಓರ್ವ ಖಾಸಗಿ ವೈದ್ಯರನ್ನೂ ಕೋವಿಡ್ ಬಲಿ ಪಡೆದಿದೆ. 51 ಜನರು ಬಾಗಲಕೋಟೆ ಜಿಲ್ಲೆಯಲ್ಲಿ ಮೃತಪಟ್ಟರೆ, ಮೂವರು ಬೇರೆ ಬೇರೆ ಜಿಲ್ಲೆಯಲ್ಲಿ ಸೋಂಕಿನಿಂದ ಮೃತಪಟ್ಟಿದ್ದಾರೆ.