ಹಿಂಗಾರು ಆಗಮನ; ಹಲವೆಡೆ ಮಳೆ, ಕೃಷಿ ಚಟುವಟಿಕೆಗಳಿಗೆ ತೊಂದರೆ
Team Udayavani, Oct 31, 2022, 9:39 AM IST
ಮಂಗಳೂರು/ಉಡುಪಿ/ ಶಿರ್ವ: ಹಿಂಗಾರು ಮಾರುತದ ಪರಿಣಾಮ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ವಿವಿಧ ಕಡೆಗಳಲ್ಲಿ ರವಿವಾರ ಉತ್ತಮ ಮಳೆಯಾಗಿದೆ. ಮಂಗಳೂರು ನಗರದಲ್ಲಿ ಬೆಳಗ್ಗಿನ ವೇಳೆ ಉತ್ತಮ ಮಳೆಯಾಗಿತ್ತು. ಉಳಿದಂತೆ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು. ಮಂಗಳೂರಿನಲ್ಲಿ 32.6 ಡಿ.ಸೆ. ಗರಿಷ್ಠ ಮತ್ತು 24.4 ಡಿ.ಸೆ. ಕನಿಷ್ಠ ತಾಪಮಾನ ಇತ್ತು.
ಕೃಷಿ ಚಟುವಟಿಕೆಗಳಿಗೆ ತೊಂದರೆ
ಶಿರ್ವ, ಕುತ್ಯಾರು ಪರಿಸರದಲ್ಲಿ ರವಿವಾರ ಮಧ್ಯಾಹ್ನ ಸುರಿದ ಜೋರು ಮಳೆಗೆ ಭತ್ತದ ಕೊçಲು, ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿದ್ದು, ಕೃಷಿಕರು ಪರದಾಡುವಂತಾಯಿತು.
ದೀಪಾವಳಿ ಬಳಿಕ ಕುತ್ಯಾರು, ಕೇಂಜ, ಕುತ್ಯಾರು ಗುತ್ತು ಬೈಲುಗಳಲ್ಲಿ ಸುಮಾರು 5-6 ಯಂತ್ರಗಳಿಂದ ಭತ್ತದ ಕೊçಲು ಕಾರ್ಯ ಆರಂಭಗೊಂಡಿದ್ದು, ಮಧ್ಯಾಹ್ನ ಸುಮಾರು ಒಂದು ತಾಸು ಕಾಲ ಸುರಿದ ಅಕಾಲಿಕ ಮಳೆಗೆ ಗೋಣಿ ಚೀಲಗಳಲ್ಲಿ ತುಂಬಿಸಿದ್ದ ಭತ್ತ ಮತ್ತು ಗದ್ದೆಯಲ್ಲಿದ್ದ ಬೈಹುಲ್ಲು ಒದ್ದೆಯಾಗಿ ಕೃಷಿಕರು ತೊಂದರೆ ಪಡುವಂತಾಯಿತು.
ಉತ್ತಮ ಮಳೆ ಸಾಧ್ಯತೆ
ಹವಾಮಾನ ಇಲಾಖೆ ಅಧಿಕಾರಿ ಪ್ರಸಾದ್ ಪ್ರತಿಕ್ರಿಯಿಸಿ, ಹಿಂಗಾರು ಮಾರುತ ಸದ್ಯ ಸಕ್ರಿಯ ವಾಗಿದ್ದು, ದಕ್ಷಿಣ ಒಳನಾಡಿನ ಕೆಲ ಭಾಗಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಭಾಗದಲ್ಲಿ ಸಾಧಾರಣ ಮಳೆಯಾಗಬಹುದು. ಈ ಬಾರಿಯ ಹಿಂಗಾರು ಋತುವಿನಲ್ಲಿ ವಾಡಿಕೆಯ ಮಳೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ.
ಇದನ್ನೂ ಓದಿ : 15 ಸಾವಿರಕ್ಕೂ ಅಧಿಕ ಪೌಷ್ಟಿಕ ತೋಟ : ಪೌಷ್ಟಿಕ ತೋಟದಲ್ಲಿ ಏನೇನು ಇರಲಿದೆ?