ಬೈಕ್ ಗೆ ನಾಯಿ ಕಟ್ಟಿ ರಾಕ್ಷಸೀಯ ಕೃತ್ಯ ಮೆರೆದಿದ್ದ ಆರೋಪಿ ಬಂಧನ
Team Udayavani, Apr 23, 2021, 4:11 PM IST
ಮಂಗಳೂರು : ಬೈಕ್ ಗೆ ನಾಯಿಯನ್ನು ಕಟ್ಟಿ ಅಮಾನವೀಯತೆಯಿಂದ ಎಳೆದೊಯ್ದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳಲ್ಲಿ ಒಬ್ಬನನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ನೀಲಪ್ಪ ಎಂಬಾತನನ್ನು ಸದ್ಯ ಪೊಲೀಸರು ಬಂಧಿಸಿದ್ದು, ಇನ್ನೊಬ್ಬ ಆರೋಪಿ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಶೀಘ್ರದಲ್ಲಿ ತಲೆ ಮರೆಸಿಕೊಂಡಿರುವ ಆರೋಪಿಯನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ನಗರ ಹೊರವಲಯದ ಸುರತ್ಕಲ್ ಸಮೀಪದ ಎನ್ ಐಟಿಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಯಿಯನ್ನು ಬೈಕ್ ಗೆ ಕಟ್ಟಿಕೊಂಡು ಹೋಗಿ ಅಮಾನವೀಯವಾಗಿ ವರ್ತಿಸಿದ್ದರು. ಮೂಕ ಪ್ರಾಣಿ ಮೇಲೆ ವಿಕೃತಿ ಮೆರೆದ ಈ ದೃಶ್ಯವನ್ನು ಹಿಂದೆ ಬರುತ್ತಿದ್ದ ಬೈಕ್ ಸವಾರರು ಚಿತ್ರೀಕರಿಸಿ ಪ್ರಾಣಿ ದಯಾ ಸಂಘದ ಜೊತೆ ಹಂಚಿಕೊಂಡಿದ್ದರು. ಅಲ್ಲದೆ ಈ ಸಂಬಂಧ ಸುರತ್ಕಲ್ ಠಾಣೆಗೆ ದೂರನ್ನೂ ನೀಡಲಾಗಿತ್ತು.
ಎ.15ರಂದು ರಾತ್ರಿ ಸುಮಾರು 8:30ಕ್ಕೆ ಬೈಕ್ ನ ಹಿಂದೆ ಹಗ್ಗದಲ್ಲಿ ನಾಯಿಯನ್ನು ಕಟ್ಟಿ ಇಬ್ಬರು ವೇಗವಾಗಿ ಸಾಗಿದ್ದಾರೆ. ಅದರ ಹಿಂದೆಯೇ ಇನ್ನೊಂದು ಶ್ವಾನ ಕೂಡ ಸ್ವಲ್ಪ ದೂರ ಓಡೋಡಿ ಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರ್ ಆಗುತ್ತಿದ್ದು, ಅಮಾನವೀಯವಾಗಿ ವರ್ತಿಸಿರುವ ವ್ಯಕ್ತಿಗಳಿಗೆ ನೆಟ್ಟಿಗರು ಶಪಿಸುತ್ತಿದ್ದಾರೆ.