ಸಂಪುಟ ಸರ್ಕಸ್: ಯಾರಿಗೆ ಜಾಕ್ಪಾಟ್?- ಇಂದು ಸಿದ್ದು-ಡಿಕೆಶಿ ಪ್ರಮಾಣವಚನ
ಇಂದು ಹೊಸ ಸರಕಾರದ ಪ್ರಮಾಣ ವಚನ 24ರಿಂದ 28 ಸಚಿವರು ಸಂಪುಟ ಸೇರ್ಪಡೆ ಸಾಧ್ಯತೆ
Team Udayavani, May 20, 2023, 7:30 AM IST
ಬೆಂಗಳೂರು: ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹುದ್ದೆಯ ಹಗ್ಗಜಗ್ಗಾಟದ ಬಳಿಕ ಈಗ ಸಚಿವ ಸಂಪುಟ ರಚನೆ ಕಸರತ್ತು ಪ್ರಾರಂಭವಾಗಿದ್ದು, ಮೊದಲ ಹಂತದಲ್ಲಿ 24ರಿಂದ 28 ಸಚಿವರು ಸಂಪುಟ ಸೇರ್ಪಡೆಯಾಗುವ ನಿರೀಕ್ಷೆ ಇದೆ. ಸಚಿವ ಸ್ಥಾನಕ್ಕಾಗಿ ದಿಲ್ಲಿಯಲ್ಲಿ ಕಾಂಗ್ರೆಸ್ನ ಘಟಾನುಘಟಿ ನಾಯಕರು ಲಾಬಿ ಪ್ರಾರಂಭಿಸಿದ್ದಾರೆ. ಇದರ ಜತೆಗೆ ಸ್ಪೀಕರ್ ಸ್ಥಾನಕ್ಕೆ ಹಿರಿಯರನ್ನು ಒಪ್ಪಿಸುವುದು ಕೂಡ ಸವಾಲಾಗಿ ಪರಿಣಮಿಸಿದೆ.
ಸಚಿವ ಸಂಪುಟ ರಚನೆ ಹಿನ್ನೆಲೆಯಲ್ಲಿ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ವಿಶೇಷ ವಿಮಾನದಲ್ಲಿ ಗುರುವಾರ ಬೆಳಗ್ಗೆ ದಿಲ್ಲಿಗೆ ಪ್ರಯಾಣ ಬೆಳೆಸಿದರು. ಕೆಲವು ಶಾಸಕರೂ ಜತೆಗಿದ್ದರು. ಸಚಿವ ಸ್ಥಾನಕ್ಕೆ ಲಾಬಿ ನಡೆಸುವುದಕ್ಕಾಗಿ ಕೆಲವು ಶಾಸಕರು ಶಾಸಕಾಂಗ ಪಕ್ಷದ ಸಭೆಗೂ ಬಾರದೆ ದಿಲ್ಲಿಯಲ್ಲೇ ಉಳಿದುಕೊಂಡರೆ ಇನ್ನು ಕೆಲವರು ಸಭೆ ಮುಕ್ತಾಯವಾಗುತ್ತಿದ್ದಂತೆ ದಿಲ್ಲಿಗೆ ಹಾರಿದ್ದಾರೆ.
ಜಾತಿ ಹಾಗೂ ಜಿಲ್ಲಾವಾರು ಸಮೀಕರಣ ಆಧರಿಸಿ ಸಂಪುಟ ರಚನೆಗೆ ಕಸರತ್ತು ಪ್ರಾರಂಭವಾಗಿದೆ. ಕಾಂಗ್ರೆಸ್ ಮೂಲಗಳ ಪ್ರಕಾರ ಸಿದ್ದರಾಮಯ್ಯ ಬಣಕ್ಕೆ 11, ಡಿ.ಕೆ. ಶಿವಕುಮಾರ್ ಬಣಕ್ಕೆ 10 ಸಚಿವ ಸ್ಥಾನ ಲಭಿಸಲಿದ್ದು, ಬಾಕಿ ಉಳಿದಿರುವ 12 ಸ್ಥಾನಗಳನ್ನು ಹೈಕಮಾಂಡ್ ವಿವೇಚನೆಗೆ ಬಿಡುವ ಸಾಧ್ಯತೆ ಇದೆ. ದಿಲ್ಲಿಗೆ ಆಗಮಿಸುತ್ತಿದ್ದಂತೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುಜೇìವಾಲಾ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಜತೆಗೆ ಸಭೆ ನಡೆಸಿದರು. ಇದಾದ ಬಳಿಕ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ತೆರಳಿ ಚರ್ಚೆ ನಡೆಸಲಾಯಿತು. ಅದಾಗಿಯೂ ಸಂಪುಟಕ್ಕೆ ಯಾರನ್ನು ಸೇರಿಸಬೇಕು, ಯಾರು ಬೇಡ ಎಂಬ ಬಗ್ಗೆ ಗೊಂದಲ ಪರಿಹಾರವಾಗದ ಹಿನ್ನೆಲೆಯಲ್ಲಿ ಸಂಜೆ ಇನ್ನೊಂದು ಸುತ್ತಿನ ಚರ್ಚೆ ನಡೆಯಿತು.
ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪದಗ್ರಹಣ ಸಮಾರಂಭಕ್ಕಾಗಿ ಕಂಠೀರವ ಕ್ರೀಡಾಂಗಣ ಸಜ್ಜಾಗಿದೆ.
ಶನಿವಾರ ಮಧ್ಯಾಹ್ನ 12.30ಕ್ಕೆ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಡಿಸಿಎಂ ಆಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದು, ಅವರೊಂದಿಗೆ 25ರಿಂದ 28 ಸಚಿವರಿಗೂ ಪ್ರತಿಜ್ಞಾವಿಧಿ ಬೋಧಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಇದನ್ನು ಕಾಂಗ್ರೆಸ್ ಕರ್ನಾಟಕದಲ್ಲಿ ತನ್ನ ಶಕ್ತಿ ಪ್ರದರ್ಶನದ ವೇದಿಕೆಯನ್ನಾಗಿಸಿ ಕಹಳೆ ಮೊಳಗಿಸಲು ಸಿದ್ಧತೆ ನಡೆಸಿದ್ದು, ಲಕ್ಷಾಂತರ ಜನರು ಸೇರುವ ನಿರೀಕ್ಷೆ ಇದೆ.
ವಿಪಕ್ಷಗಳ ಶಕ್ತಿ ಪ್ರದರ್ಶನ
ಶನಿವಾರ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ಪ್ರಿಯಾಂಕಾ ವಾದ್ರಾ, ರಾಹುಲ್ ಗಾಂಧಿ ಸಾಕ್ಷಿಯಾಗಲಿದ್ದಾರೆ. ಇವರಲ್ಲದೆ ವಿವಿಧ ರಾಜ್ಯಗಳ ಸಿಎಂಗಳಾದ ಎಂ.ಕೆ. ಸ್ಟಾಲಿನ್, ನಿತೀಶ್ ಕುಮಾರ್, ಹೇಮಂತ್ ಸೊರೇನ್, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್; ಉದ್ಧವ್ ಠಾಕ್ರೆ, ಅಖೀಲೇಶ್ ಯಾದವ್, ಫಾರೂಕ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ, ಸೀತಾರಾಂ ಯೆಚೂರಿ, ಡಿ. ರಾಜಾ ಮತ್ತಿತರರು ಆಗಮಿಸಲಿದ್ದಾರೆ. ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿದ್ದು, ವಿಪಕ್ಷಗಳ ಶಕ್ತಿ ಪ್ರದರ್ಶನಕ್ಕೂ ಈ ಕಾರ್ಯಕ್ರಮ ವೇದಿಕೆಯಾಗಲಿದೆ.
ಸಂಭಾವ್ಯ ಸಚಿವರು
ಸಂಪುಟದಲ್ಲಿ ಲಿಂಗಾಯತ, ಪರಿಶಿಷ್ಟ ಜಾತಿ, ವಾಲ್ಮೀಕಿ ಹಾಗೂ ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ಲಭಿಸುವ ಸಾಧ್ಯತೆ ಇದೆ. ಕುರುಬ ಹಾಗೂ ಒಕ್ಕಲಿಗ ಸಮುದಾಯಕ್ಕೆ ತುಸು ಕಡಿಮೆ ಅವಕಾಶ ಲಭಿಸಬಹುದು ಎಂದು ಹೇಳಲಾಗುತ್ತಿದೆ. ಸಂಭಾವ್ಯರ ಪಟ್ಟಿಯಲ್ಲಿ ಡಾ| ಪರಮೇಶ್ವರ, ಆರ್.ವಿ. ದೇಶಪಾಂಡೆ, ಎಂ.ಬಿ. ಪಾಟೀಲ್, ಶರಣಪ್ರಕಾಶ್ ಪಾಟೀಲ್, ಈಶ್ವರ ಖಂಡ್ರೆ, ಎಸ್.ಎಸ್. ಮಲ್ಲಿಕಾರ್ಜುನ, ಲಕ್ಷ್ಮೀ ಹೆಬ್ಟಾಳ್ಕರ್, ಲಕ್ಷ್ಮಣ ಸವದಿ, ಸತೀಶ್ ಜಾರಕಿಹೊಳಿ, ರಾಜಾ ವೆಂಕಟಪ್ಪ ನಾಯಕ, ಇ. ತುಕಾರಾಂ, ಚಲುವರಾಯಸ್ವಾಮಿ, ನರೇಂದ್ರಸ್ವಾಮಿ, ಪ್ರಿಯಾಂಕ್ ಖರ್ಗೆ, ಕೆ.ಎಚ್. ಮುನಿಯಪ್ಪ, ಶಿವರಾಜ ತಂಗಡಗಿ, ಎಚ್.ಸಿ. ಮಹದೇವಪ್ಪ, ಸಂತೋಷ್ ಲಾಡ್, ಯು.ಟಿ. ಖಾದರ್, ತನ್ವೀರ್ ಸೇಠ್, ಹ್ಯಾರೀಸ್/ ಜಮೀರ್, ರಹೀಂಖಾನ್/ ಸಲೀಂ ಅಹ್ಮದ್, ಮಧು ಬಂಗಾರಪ್ಪ, ಕೃಷ್ಣ ಭೈರೇಗೌಡ, ದಿನೇಶ್ ಗುಂಡೂರಾವ್, ಕೆ.ಜೆ. ಜಾರ್ಜ್, ರಾಮಲಿಂಗಾ ರೆಡ್ಡಿ, ಟಿ.ಬಿ. ಜಯಚಂದ್ರ/ಕೆ.ಎನ್. ರಾಜಣ್ಣ, ಬಿ.ಕೆ. ಹರಿಪ್ರಸಾದ್ (ವಿಧಾನ ಪರಿಷತ್ ಸದಸ್ಯ) ಸ್ಥಾನ ಪಡೆಯುವ ಸಾಧ್ಯತೆಗಳಿವೆ.
ಇಂದೇ ಗ್ಯಾರಂಟಿಗಳಿಗೆ ಅಸ್ತು?
ಪ್ರಮಾಣವಚನ ಸಮಾರಂಭ ಮುಗಿದ ಬಳಿಕ ಮಧ್ಯಾಹ್ನ ನೂತನ ಸಚಿವ ಸಂಪುಟದ ಮೊದಲ ಸಭೆ ನಡೆಯಲಿದೆ. ಈ ಸಭೆಯಲ್ಲೇ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿರುವ ಐದು ಗ್ಯಾರಂಟಿಗಳ ಜಾರಿಗೆ ಅಧಿಕೃತ ಮುದ್ರೆಯೂ ಬೀಳುವ ಸಾಧ್ಯತೆಯಿದೆ. ಈಗಾಗಲೇ ಅಧಿಕಾರಿಗಳಿಗೆ ಸಂಪುಟ ಸಭೆಯ ಅಜೆಂಡಾ ಸಿದ್ಧಪಡಿಸಲು ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.