ಮಂಡ್ಯ: ಮಹಿಳೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ; ಪೊಲೀಸರಿಂದ ಇಬ್ಬರ ಬಂಧನ
Team Udayavani, Feb 8, 2021, 9:59 PM IST
ಮಂಡ್ಯ: ಮದ್ದೂರು ಪಟ್ಟಣದ ವಿವಿ ನಗರದ ಮಹಿಳೆಯನ್ನು ಅತ್ಯಾಚಾರ ಎಸಗಿ, ಕೊಲೆ ಪ್ರಕರಣ ಬೇಧಿಸಿರುವ ಮದ್ದೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ರಾಮನಗರ ತಾಲೂಕಿನ ಹೊಂಬೇಗೌಡನದೊಡ್ಡಿ ಗ್ರಾಮದ ಎಚ್.ಆರ್.ಮನುಕುಮಾರ್(23) ಹಾಗೂ ಸಿ.ರಮೇಶ್(29) ಬಂಧಿತ ಆರೋಪಿಗಳು.
ಹಣ ದೋಚಲು ಅನೈತಿಕ ಸಂಬಂಧ:
ಮಹಿಳೆಯ ಬಳಿ ಇದ್ದ ಚಿನ್ನಾಭರಣ ಹಾಗೂ ಹಣ ದೋಚುವ ಉದ್ದೇಶದಿಂದ ಆರೋಪಿಗಳು ಮೃತ ಮಹಿಳೆ ಪೂರ್ಣಿಮಾ ಜತೆ ಅನೈತಿಕ ಸಂಬಂಧ ಬೆಳೆಸಿದ್ದಾರೆ. ಅದರಂತೆ ಫೆ.2ರಂದು ಆರೋಪಿಗಳು ಮೃತ ಮಹಿಳೆಯ ಮನೆಗೆ ಬಂದಿದ್ದಾರೆ. ಆಗ ಆರೋಪಿ ಮನುಕುಮಾರ್ ಮಹಿಳೆ ಜತೆ ದೈಹಿಕ ಸಂಪರ್ಕ ನಡೆಸಿ, ನಂತರ ಆಕೆಯ ಬಾಯಿಗೆ ಬಟ್ಟೆ ತುರುಕಿ, ಆಕೆಯ ಕೈಕಾಲುಗಳನ್ನು ಮಂಚಕ್ಕೆ ಕಟ್ಟಿ, ಮುಖಕ್ಕೆ, ಕುತ್ತಿಗೆ ಬೆಡ್ಶೀಟ್ ಹಾಗೂ ಸ್ವೇಟರ್ನಿಂದ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.
ಇದನ್ನೂ ಓದಿ:ಕೃಷಿ ಕಾನೂನು ಅನಿವಾರ್ಯತೆ ಪ್ರತಿಭಟನಾಕಾರರಿಗೆ ಅರ್ಥ ಮಾಡಿಸಬೇಕು :ಕಟೀಲ್
ನಂತರ ಆಕೆಯ ಕೊರಳಲ್ಲಿದ್ದ ಚಿನ್ನದ ಮಾಂಗಲ್ಯ ಸಮೇತ ಚಿನ್ನದಂತಿದ್ದ ರೋಲ್ಗೋಲ್ಡ್ ಚಿನ್ನದ ಸರ, ಕೈಗಳಲ್ಲಿದ್ದ ರೋಲ್ಗೋಲ್ಡ್ 4 ಬಳೆ, ಮೊಬೈಲ್ ಹಾಗೂ 4500 ರೂ. ನಗದು ತೆಗೆದುಕೊಂಡು ಪರಾರಿಯಾಗಿದ್ದರು ಎಂದು ತನಿಖೆಯಿಂದ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಪತ್ತೆಗೆ ತಂಡ ರಚನೆ:
ಆರೋಪಿಗಳ ಪತ್ತೆಗೆ ಎಸ್ಪಿ ಕೆ.ಪರಶುರಾಮ, ಎಎಸ್ಪಿ ಧನಂಜಯ ಮಾರ್ಗದರ್ಶನದಲ್ಲಿ ಮಳವಳ್ಳಿ ಡಿವೈಎಸ್ಪಿ ನೇತೃತ್ವದಲ್ಲಿ ಮೂರು ಪ್ರತ್ಯೇಕ ತಂಡ ರಚಿಸಲಾಗಿತ್ತು. ಅದರಂತೆ ಸಿಪಿಐ ಕೆ.ಆರ್.ಪ್ರಸಾದ್ ನೇತೃತ್ವದ ತಂಡ ಭಾನುವಾರ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಬಂಧಿತರಿಂದ ಚಿನ್ನದ ಮಾಂಗಲ್ಯ ಜತೆಗೆ ರೋಲ್ಗೋಲ್ಡ್ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಮೋಟಾರ್ ಸೈಕಲ್ನ್ನು ವಶಪಡಿಸಿಕೊಂಡಿದ್ದಾರೆ.