2022ರ ಕೊಯಮತ್ತೂರು ಸ್ಫೋಟ: ಲಂಕೆಯ Easter ಸ್ಫೋಟದಂಥ ಕೃತ್ಯದ ಉದ್ದೇಶ
ಐಸಿಸ್ನಿಂದ ಪ್ರೇರಿತನಾಗಿದ್ದ ಬಾಂಬರ್-NIA ಚಾರ್ಜ್ಶೀಟ್ನಲ್ಲಿ ಉಲ್ಲೇಖ
Team Udayavani, Apr 22, 2023, 7:27 AM IST
ಕೊಯಮತ್ತೂರು/ನವದೆಹಲಿ: “ಕೊಯಮತ್ತೂರಿನ ಈಶ್ವರನ ದೇಗುಲ ಸಮೀಪ ಸಂಭವಿಸಿದ್ದ ಕಾರ್ ಬಾಂಬ್ ಸ್ಫೋಟದ ರೂವಾರಿಗಳಿಗೆ 2019ರಲ್ಲಿ ಶ್ರೀಲಂಕೆಯಲ್ಲಿ ಈಸ್ಟರ್ ದಿನದಂದು ಸಂಭವಿಸಿದ್ದ ಬಾಂಬ್ ಸ್ಫೋಟದ ರೂವಾರಿಯಿಂದ, ಉಗ್ರ ಸಂಘಟನೆ ಐಸಿಸ್ನಿಂದ ಬಾಂಬರ್ ಆಗಿದ್ದ ವ್ಯಕ್ತಿ ಉಗ್ರ ಸಂಘಟನೆ ಐಸಿಸ್ನಿಂದ ಪ್ರಭಾವಿತನಾಗಿದ್ದ”
– 2022ರ ಅ.23ರಂದು ಕೊಯಮತ್ತೂರಿನ ಉಕ್ಕಡಂ ಎಂಬಲ್ಲಿ ನಡೆದಿದ್ದ ಕಾರ್ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಎನ್ಐಎ ಆರು ಮಂದಿ ವಿರುದ್ಧ ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ಈ ಅಂಶವನ್ನು ಪ್ರಧಾನವಾಗಿ ಉಲ್ಲೇಖೀಸಲಾಗಿದೆ. ಈ ಘಟನೆಯಲ್ಲಿ ವಾಹನದಲ್ಲಿ ಸಾಗಿಸುವ ಸುಧಾರಿತ ಸ್ಫೋಟಕಗಳನ್ನು (ವಿ-ಐಇಡಿ) ಬಳಕೆ ಮಾಡಲಾಗಿತ್ತು. ಬಾಂಬರ್ ಆಗಿದ್ದ ಜಮೇಶ್ ಮುಬೀನ್ ಎಂಬಾತ ಸ್ಫೋಟದಲ್ಲಿ ಅಸುನೀಗಿದ್ದ.
ಚಾರ್ಜ್ಶೀಟ್ ಸಲ್ಲಿಸಿರುವ ಬಗ್ಗೆ ಎನ್ಐಎ ಹೇಳಿಕೆ ಬಿಡುಗಡೆ ಮಾಡಿದೆ. ಜಮೇಶ್ ಎಂಬಾತ ಐಸಿಸ್ನಿಂದ ಪ್ರಭಾವಿತನಾಗಿದ್ದ. ಜತೆಗೆ 2019ರಲ್ಲಿ ಶ್ರೀಲಂಕೆಯ ರಾಜಧಾನಿ ಕೊಲೊಂಬೋದಲ್ಲಿ ಈಸ್ಟರ್ ದಿನದಂದು ಸಂಭವಿಸಿದ್ದ ಬಾಂಬ್ ಸ್ಫೋಟದ ರೂವಾರಿ ಝಹರಾನ್ ಹಶೀಂನಿಂದ ಪ್ರಭಾವಿತನಾಗಿದ್ದನೆಂದು ಅದರಲ್ಲಿ ಉಲ್ಲೇಖೀಸಲಾಗಿದೆ. ಅದೇ ಮಾದರಿಯಲ್ಲಿ ಹಾನಿ ಉಂಟು ಮಾಡುವ ಉದ್ದೇಶವೂ ಜಮೇಶ್ಗೆ ಇತ್ತು ಎಂದು ತನಿಖಾ ಸಂಸ್ಥೆ ತಿಳಿಸಿದೆ.
ದೇಗುಲಗಳು, ಪಾರ್ಕ್ಗಳು, ಸರ್ಕಾರಿ ಕಚೇರಿಗಳನ್ನು ಗುರಿಯಾಗಿ ಇರಿಸಿಕೊಂಡು ದಾಳಿ ನಡೆಸುವ ಬಗ್ಗೆ ಕೈಬರಹದಲ್ಲಿ ಬರೆದ ಚೀಟಿ ಕೂಡ ಪತ್ತೆಯಾಗಿದೆ ಎಂದು ಎನ್ಐಎ ಹೇಳಿಕೊಂಡಿದೆ. ಇಸ್ಲಾಮಿಕ್ ಸ್ಟೇಟ್ ಖೊರೊಸಾನ್ ಪ್ರಾವಿನ್ಸ್ (ಐಎಸ್ಕೆಪಿ) ಉಗ್ರ ಸಂಘಟನೆಯ ಮುಖವಾಣಿಯಲ್ಲಿ ಕೂಡ ಕೃತ್ಯ ನಡೆಸಿದ್ದು ತಾನೆ ಎಂದು ಹೇಳಿಕೊಳ್ಳಲಾಗಿತ್ತು.
ತನಿಖಾ ಸಂಸ್ಥೆ ಮೊಹಮ್ಮದ್ ಅಜರುದ್ದೀನ್, ಮೊಹಮ್ಮದ್ ತಾಲ್ಹಾ, ಫಿರೋಸ್, ಮೊಹಮ್ಮದ್ ರಿಯಾಸ್, ನವಾಸ್ ಮತ್ತು ಅಫ್ಝರ್ ಖಾನ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ. ಅವರ ವಿರುದ್ಧ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ, ಐಪಿಸಿ, ಸ್ಫೋಟಕ ಕಾಯ್ದೆಯ ಅನ್ವಯ ಕೇಸು ದಾಖಲಿಸಲಾಗಿದೆ. 2022 ಅ.27ರಂದು ಎನ್ಐಎ ಪ್ರಕರಣದ ತನಿಖೆಯ ಹೊಣೆ ವಹಿಸಿಕೊಂಡಿತ್ತು.
ಕೊಯಮತ್ತೂರು ಘಟನೆಯ ಉದ್ದೇಶ ಏನು ಎನ್ನುವುದು ಚಾರ್ಜ್ಶೀಟ್ನಿಂದ ದೃಢಪಟ್ಟಿದೆ. ಡಿಎಂಕೆ ಹೇಳಿಕೊಂಡಿದ್ದಂತೆ ಅದು ಸಿಲಿಂಡರ್ ಸ್ಫೋಟ ಅಲ್ಲ. ತಮಿಳುನಾಡು ಬಿಜೆಪಿ ಘಟಕ ಕಳೆದ ವರ್ಷವೇ ಇದೊಂದು ಆತ್ಮಹತ್ಯಾ ದಾಳಿ ಎಂದು ಹೇಳಿತ್ತು.
~ ಕೆ.ಅಣ್ಣಾಮಲೈ, ತಮಿಳುನಾಡು ಬಿಜೆಪಿ ಅಧ್ಯಕ್ಷ