ಮಂಡ್ಯ :ಅಂಬರೀಷ್ ಅಭಿಮಾನಿಗಳಿಂದ ಅಂಬಿ ಗುಡಿ ನಿರ್ಮಾಣ:ದರ್ಶನ್, ಸುಮಲತಾರಿಂದ ಪುತ್ಥಳಿ ಅನಾವರಣ
Team Udayavani, Nov 24, 2020, 2:09 PM IST
ಮಂಡ್ಯ: ಮಾಜಿ ಸಚಿವ, ಚಿತ್ರನಟ ರೆಬಲ್ ಸ್ಟಾರ್ ಅಂಬರೀಷ್ ಅವರ ಜೀವನ ಚರಿತ್ರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಸಲುವಾಗಿ ಅಂಬರೀಷ್ ಅಭಿಮಾನಿಗಳು ಇಡೀ ರಾಜ್ಯದಲ್ಲೇ ಮೊದಲ ಗುಡಿ ನಿರ್ಮಾಣ ಮಾಡಿ ಆರಾಧ್ಯ ದೈವವಾಗಿ ಪೂಜಿಸಲು ಮುಂದಾಗಿದ್ದಾರೆ.
ಮದ್ದೂರು ತಾಲೂಕಿನ ಹೊಟ್ಟೆಗೌಡನದೊಡ್ಡಿ ಗ್ರಾಮದಲ್ಲಿ 2ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದ ಅಂಗವಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ನೆನಪಿನಲ್ಲಿ ಗುಡಿಯೊಂದನ್ನು ಕಟ್ಟುವ ಮೂಲಕ ಅಂಬರೀಷ್ ಅವರ ಹೆಸರು ಅಜರಾಮರವಾಗಿ ಉಳಿಸಲು ಮುಂದಾಗಿದ್ದಾರೆ.
8 ಲಕ್ಷ ರೂ. ವೆಚ್ಚ:
ಅಂಬರೀಷ್ ಅವರು ಕಂಚಿನ ಪುತ್ಥಳಿ ನಿರ್ಮಾಣ ಮಾಡುವ ಜೊತೆಗೆ 8 ಲಕ್ಷ ರೂ. ವೆಚ್ಚದಲ್ಲಿ ಗುಡಿಯನ್ನು ನಿರ್ಮಿಸಿ ಅಭಿಮಾನಿಗಳು ಅಭಿಮಾನ ಮೆರೆಯುವ ಜತೆಗೆ ಅವರ ಸಾಧನೆ, ಚರಿತ್ರೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ: ಬಸವಕಲ್ಯಾಣ: ಟಿಕೆಟ್ ಆಕಾಂಕ್ಷಿಗಳಿಂದ ಡಿಕೆ ಶಿವಕುಮಾರ್ ಗೆ ಭರ್ಜರಿ ಸ್ವಾಗತ
ಚಿತಾಭಸ್ಮಕ್ಕೆ ಒಂದು ವರ್ಷಗಳ ಕಾಲ ಪೂಜೆ:
ಅಂಬರೀಷ್ ಅವರು ನಿಧನರಾದ ವೇಳೆ ಚಿತಾಭಸ್ಮವನ್ನು ಗ್ರಾಮಕ್ಕೆ ತಂದು ಒಂದು ವರ್ಷಗಳ ಕಾಲ ಪೂಜಿಸಿ ನಂತರ ಗುಡಿ ಹಾಗೂ ಪುತ್ಥಳಿ ನಿರ್ಮಾಣ ಮಾಡಿದ್ದಾರೆ.
ಪುತ್ಥಳಿ ಅನಾವರಣ:
ಮಂಗಳವಾರ ಅಂಬರೀಷ್ ನಿಧನ ಹೊಂದಿ ಇಂದಿಗೆ 2 ವರ್ಷಗಳು ತುಂಬಿವೆ. ಈ ಹಿನ್ನೆಲೆಯಲ್ಲಿ ಹೊಟ್ಟೇಗೌಡನದೊಡ್ಡಿಯಲ್ಲಿ ನಿರ್ಮಿಸಿದ್ದ ಅಂಬಿ ಗುಡಿ ಹಾಗೂ ಪುತ್ಥಳಿಯನ್ನು ನಟರಾದ ದರ್ಶನ್, ಅಂಬಿ ಪುತ್ರ ಅಭಿಷೇಕ್ಗೌಡ, ಸಂಸದೆ ಸುಮಲತಾಅಂಬರೀಷ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ನಟ ದೊಡ್ಡಣ್ಣ ಗುಡಿಯನ್ನು ಅಭಿಮಾನಿಗಳ ಸಮ್ಮುಖದಲ್ಲಿ ಲೋಕಾರ್ಪಣೆಗೊಳಿಸಿದರು.
ವಿವಿಧ ಕಾರ್ಯಕ್ರಮಗಳು:
ಅಂಬರೀಷ್ ಅಭಿಮಾನಿಗಳ ಸಂಘದ ತಾಲೂಕು ಅಧ್ಯಕ್ಷ ನಾಗೇಶ್ ನೇತೃತ್ವದಲ್ಲಿ ಈಗಾಗಲೇ ಹಲವು ಕಾರ್ಯಕ್ರಮಗಳು ಅಂಬಿ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಮಿಕೊಂಡಿದ್ದಾರೆ. ರಕ್ತದಾನ, ಆರೋಗ್ಯ ಶಿಬಿರ, ಸಸಿ ವಿತರಣೆ ಇನ್ನಿತರೆ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಮಾದರಿಯಾಗಿದ್ದಾರೆ.
ನಟನ ನೋಡಲು ಅಭಿಮಾನಿಗಳ ದಂಡು:
ನೆಚ್ಚಿನ ನಟ ದರ್ಶನ್ ನೋಡಲು ಅಭಿಮಾನಿಗಳ ದಂಡೇ ನೆರೆದಿತ್ತು. ಗ್ರಾಮಕ್ಕೆ ಆಗಮಿಸಿದ ಅವರನ್ನು ರೋಡ್ ಶೋ ಮೂಲಕ ವಿವಿಧ ಜಾನಪದ ಕಲಾತಂಡಗಳೊoದಿಗೆ ಕರೆತರಲಾಯಿತು. ಈ ಸಂದರ್ಭದಲ್ಲಿ ನಟ ದರ್ಶನ್ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು.