ಕುಣಿಗಲ್ ಪುರಸಭೆ ಬಳಿ ಕಸ ಹಾಕಿ ಪ್ರತಿಭಟನೆ: ಸದಸ್ಯ ಅನಂದ್ಕುಮಾರ್ ಎಚ್ಚರಿಕೆ
Team Udayavani, Nov 7, 2021, 6:01 PM IST
ಕುಣಿಗಲ್: ಕುಣಿಗಲ್ ಪಟ್ಟಣದ 20 ನೇ ವಾರ್ಡ್ ಐಡಿಬಿಐ ಬ್ಯಾಂಕ್ ಪಕ್ಕ ಹಾಗೂ ಸರ್ಕಾರಿ ಬಾಲಕರ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ ಸಮೀಪ ರಸ್ತೆಯಲ್ಲಿ ಕಸ ವಿಲೇವಾರಿ ಮಾಡುವಂತೆ ಪುರಸಭೆಗೆ ಸಾಕಷ್ಟು ಭಾರಿ ಮನವಿ ಮಾಡಿದರೂ, ಕಸ ವಿಲೇವಾರಿ ಮಾಡುವಲ್ಲಿ ಆಡಳಿತ ಸಂಪೂರ್ಣ ವಿಫಲಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಪುರಸಭಾ ಸದಸ್ಯ ಅನಂದ್ಕುಮಾರ್(ಕಾಂಬ್ಲಿ) ಸೋಮವಾರ ವಾರ್ಡ್ ಕಸವನ್ನು ಪುರಸಭೆ ಬಳಿ ಹಾಕಿ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಭಾಗದ ಹಳೆಯ ರಾಷ್ಟ್ರೀಯ ಹೆದ್ದಾರಿ 48 ರ ಐಡಿಬಿಐ ಬ್ಯಾಂಕ್ ಪಕ್ಕದ ರಸ್ತೆ ಹಾಗೂ ಸರ್ಕಾರಿ ಬಾಲಕರ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ ರಸ್ತೆ ಸೇರಿದಂತೆ ಮೊದಲಾದ ಕಡೆ, ಕಳೆದ ಒಂದು ತಿಂಗಳಿನಿಂದ ಕಸದರಾಶಿ ಬಿದ್ದಿದೆ. ಆದರೆ ಅಧಿಕಾರಿಗಳು ಸ್ವಚ್ಛತೆಗೆ ಕ್ರಮಗೊಳ್ಳದ ಕಾರಣ, ಪರಿಸರ ಮಾಲಿನ್ಯ ಉಂಟಾಗಿ, ಜನರು ಕಸದ ವಾಸೆನೆಯಿಂದ ಮೂಗು ಮುಚ್ಚಿಕೊಂಡು ಹೋಗಬೇಕಾಗಿದೆ. ಇದಕ್ಕೆ ಪುರಸಭಾ ಮುಖ್ಯಾಧಿಕಾರಿ ಕೆ.ಪಿ.ರವಿಕುಮಾರ್, ಪರಿಸರ ಎಂಜಿನಿಯರ್ ಚಂದ್ರಶೇಖರ್ ಅವರ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿದರು.
ಇದನ್ನೂ ಓದಿ:ಗುಂಡ್ಲುಪೇಟೆ: ಲಾರಿ ಹರಿದು ಸ್ಕೂಟರ್ ನಲ್ಲಿದ್ದ ವಿದ್ಯಾರ್ಥಿನಿ ಸಾವು,ಇಬ್ಬರು ಪಾರು
20 ನೇ ವಾರ್ಡ್ ನಲ್ಲಿ ಪರಿಸರ ಮಾಲಿನ್ಯದಿಂದ ನಾಗರಿಕರಿಗೆ ಕಿರಿಕಿರಿಯಾಗಿದೆ. ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದರು.
ಪುರಸಭಾ ಆಡಳಿತ ವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯ ಅನಂದ್ಕುಮಾರ್ ನಾನು ಪುರ ಕಾರ್ಮಿಕನ ಮಗನಾಗಿರುವೆ ಸ್ವಚ್ಛತೆ ಹಾಗೂ ಕಸ ವಿಲೇವಾರಿ ಏನೆಂಬುದು ನಾನು ಅರಿತಿರುವೆ ಆದರೂ ಅಧಿಕಾರಿಗಳು ಸಬೂಬು ಹೇಳುವುದನ್ನು ನಿಲ್ಲಿಸಿ ಸ್ವಚ್ಛತೆಗೆ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ನ 8 ಸೋಮವಾರದಂದು ಈ ಭಾಗದ ನಾಗರಿಕರೊಂದುಗೂಡಿ ಬೆಳಗ್ಗೆ ವಾರ್ಡ್ ನಲ್ಲಿ ಬಿದ್ದಿರುವ ಕಸದ ರಾಶಿಯನ್ನು ಟ್ರ್ಯಾಕ್ಟರ್ನಲ್ಲಿ ತುಂಬಿಕೊಂಡು ಬಂದು ಪುರಸಭಾ ಕಚೇರಿ ಬಳಿ ಹಾಕಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.