ಡಿಕೆಶಿ ವಿರುದ್ಧ ವ್ಯವಸ್ಥಿತವಾದ ಷಡ್ಯಂತ್ರ: ಪ್ರತಾಪ್ ಸಿಂಹ ಹೊಸ ಬಾಂಬ್
Team Udayavani, Oct 16, 2021, 2:15 PM IST
ಮೈಸೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಕಾಂಗ್ರೆಸ್ ನಾಯಕರ ಗುಸು ಗುಸು ಮಾತಿನ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಶನಿವಾರ ಹೊಸ ಬಾಂಬ್ ಸಿಡಿಸಿದ್ದು, ‘ಇದು ಸಿದ್ದರಾಮಯ್ಯನವರ ವ್ಯವಸ್ಥಿತವಾದ ಷಡ್ಯಂತ್ರ’ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ‘ಮಾಧ್ಯಮದವರ ಮುಂದೆಯೇ ಸಲೀಂ- ಉಗ್ರಪ್ಪ ಮಾತನಾಡಿದ್ದಾರೆ, ಡಿಕೆಶಿಯವರನ್ನ ರಾಜಕೀಯವಾಗಿ ಮುಗಿಸುವ ಷಡ್ಯಂತ್ರ ಇದು.ಸಲೀಂ ಅವರು ಈಗಿರುವ ಸ್ಥಾನಕ್ಕೆ ಕಾರಣ ಡಿಕೆಶಿ. ಉಗ್ರಪ್ಪನವರು ಚುನಾವಣೆ ಗೆಲ್ಲುತ್ತಾರೋ ಅನ್ನುವುದು ಜನರಿಗೆ ಗೊತ್ತಿದೆ. ಉಗ್ರಪ್ಪರನ್ನ ಸಂಸದರನ್ನಾಗಿ ಮಾಡಿದ್ದು ಡಿಕೆಶಿಯವರು. ಇಷ್ಟೆಲ್ಲ ಇದ್ದರೂ ಕೂಡ ಡಿಕೆಶಿ ಅವರನ್ನ ಟಾರ್ಗೆಟ್ ಮಾಡಲಾಗಿದ್ದು, ಇದಕ್ಕೆ ನೇರವಾದ ಕಾರಣವೇ ಸಿದ್ದರಾಮಯ್ಯ’ ಎಂದು ಗಂಭೀರ ಆರೋಪ ಮಾಡಿದರು.
‘ಸಿದ್ದರಾಮಯ್ಯ ಅವರಿಗೆ ರಾಷ್ಟ್ರ ರಾಜಕಾರಣಕ್ಕೆ ಬನ್ನಿ ಎಂದು ಹೈಕಮಾಂಡ್ ಹೇಳಿದೆ. ಇದರಿಂದ ಎಲ್ಲಿ ರಾಷ್ಟ್ರ ರಾಜಕಾರಣಕ್ಕೆ ಹೋಗಬೇಕಾಗುತ್ತದೋ ಎಂದು ಈ ರೀತಿ ಡಿಕೆಶಿ ಮೇಲೆ ಷಡ್ಯಂತ್ರ ಮಾಡಿದ್ದಾರೆ’ ಎಂದರು.
‘ಸಿದ್ದರಾಮಯ್ಯ ಎಲಿಮೆನೆಟರಿ ಆಗಿ ಕೆಲಸ ಮಾಡುತ್ತಿದ್ದಾರೆ.ದೆಹಲಿಗೆ ಬನ್ನಿ ಎಂದಾಗ ಸಿದ್ದರಾಮಯ್ಯ ವಿಚಲಿತರಾಗಿ ಹೀಗೆ ಮಾಡಿಸಿದ್ದಾರೆ.ಇದರಿಂದ ಕಾಂಗ್ರೆಸ್ ಸಂಪೂರ್ಣವಾಗಿ ನಾಶವಾಗುತ್ತದೆ.ಅನಾಯಾಸವಾಗಿ ಇದರ ಲಾಭ ಬಿಜೆಪಿಗೆ ಬರಲಿದೆ’ ಎಂದರು.
ಬೊಮ್ಮಾಯಿ ಅವರಿಂದ ಬಿಜೆಪಿಗೆ ಮತ್ತಷ್ಟು ಒಳ್ಳೆಯ ಹೆಸರು ಬಂದಿದೆ.ಎರಡು ಉಪಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ, ಯಾಕಂದರೆ ಇದಕ್ಕೆ ವಿರೋಧ ಪಕ್ಷದವರೇ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು.