ಭವಿಷ್ಯದ ಲಾಭಕ್ಕಾಗಿ ಬಿಜೆಪಿ ತ್ಯಾಗದ ಮಾರ್ಗ!
ಧರ್ಮೇಗೌಡರಿಂದ ತೆರವಾದ ಸ್ಥಾನ ಜೆಡಿಎಸ್ಗೆ ಬಿಟ್ಟುಕೊಡಲು ನಿರ್ಧಾರ
Team Udayavani, Feb 3, 2021, 6:40 AM IST
ಬೆಂಗಳೂರು: ಜೆಡಿಎಸ್ ಜತೆಗೆ ನಿಕಟವಾಗುವತ್ತ ಒಂದೊಂದೇ ಹೆಜ್ಜೆ ಇಡುತ್ತಿರುವ ಬಿಜೆಪಿ, ಭವಿಷ್ಯದ ಲಾಭದ ಲೆಕ್ಕಾಚಾರದಲ್ಲಿ ಈಗ ವಿಧಾನಪರಿಷತ್ನಲ್ಲಿ “ತ್ಯಾಗ ಮಾರ್ಗ’ ಅನುಸರಿಸುತ್ತಿದೆ.
ಪರಿಷತ್ತಿನಲ್ಲಿ ಹೆಚ್ಚು ಸದಸ್ಯರನ್ನು ಹೊಂದಿ ದ್ದರೂ ಜೆಡಿಎಸ್ಗೆ ಸಭಾಪತಿ ಸ್ಥಾನ ಬಿಟ್ಟು ಕೊಡಲು ನಿರ್ಧರಿಸಿರುವ ಬಿಜೆಪಿ, ಖಾಲಿ ಇರುವ ಒಂದು ಸ್ಥಾನವನ್ನೂ ಜೆಡಿಎಸ್ಗೆ ಬಿಟ್ಟುಕೊಡಲು ನಿರ್ಧರಿಸಿದೆ.
ಏನಿದು ತ್ಯಾಗ?
ವಿಧಾನಸಭೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಹೊಂದಿದೆ. ಪರಿಷತ್ತಿನ ಉಪಸಭಾಪತಿಯಾಗಿದ್ದ ಎಸ್.ಎಲ್. ಧರ್ಮೇ ಗೌಡರ ನಿಧನದಿಂದ ತೆರವಾಗಿರುವ ಒಂದು ಸ್ಥಾನವನ್ನು ಅನಾ ಯಾಸವಾಗಿ ಗೆಲ್ಲುವ ಅವಕಾಶವನ್ನೂ ಬಿಜೆಪಿ ಹೊಂದಿದೆ. ಆದರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ನಡುವಿನ ಮಾತು ಕತೆಯ ಹಿನ್ನೆಲೆಯಲ್ಲಿ ಜೆಡಿಎಸ್ಗೆ ಸಭಾಪತಿ ಸ್ಥಾನದ ಜತೆಗೆ ಖಾಲಿ ಇರುವ ಒಂದು ವಿಧಾನ ಪರಿಷತ್ ಸ್ಥಾನವನ್ನು ಬಿಟ್ಟು ಕೊಡಲು ತೀರ್ಮಾ ನಿಸಲಾಗಿದೆ ಎಂಬ ಮಾತು ಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ.
ಭವಿಷ್ಯದ ರಾಜಕೀಯ ಲೆಕ್ಕಾಚಾರ
2023ರ ಚುನಾವಣೆಯಲ್ಲೂ ಯಾವುದೇ ಪಕ್ಷ ಸರಳ ಬಹುಮತ ಪಡೆಯುವ ಸಾಧ್ಯತೆ ಕಡಿಮೆಯಿದ್ದು, ಆ ಹಿನ್ನೆಲೆಯಲ್ಲಿ ಜೆಡಿಎಸ್ ಅನ್ನು ಈಗಿನಿಂದಲೇ ಜತೆ ಯಲ್ಲಿಟ್ಟುಕೊಳ್ಳುವ ಲೆಕ್ಕಾಚಾರವನ್ನು ಬಿಜೆಪಿ ಹೈಕಮಾಂಡ್ ಹಾಕಿಕೊಂಡಿದೆ ಎನ್ನಲಾಗಿದೆ.
ಆಕಾಂಕ್ಷಿಗಳಿಗೆ ನಿರಾಸೆ?
ಉಪ ಸಭಾಪತಿಯಾಗಿದ್ದ ಎಸ್.ಎಲ್. ಧರ್ಮೇಗೌಡ ನಿಧನದ ಅನಂತರ ಖಾಲಿಯಾಗಿದ್ದ ಸ್ಥಾನದ ಮೇಲೆ ಬಿಜೆಪಿಯ ಹಲವು ಆಕಾಂಕ್ಷಿಗಳು ಕಣ್ಣಿಟ್ಟು, ಪರಿಷತ್ ಪ್ರವೇಶ ಪಡೆ ಯಲು ತಮ್ಮ ಬಯೋಡೇಟಾ ಸಿದ್ಧಪಡಿಸಿ ಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಕೇಂದ್ರ ಎಸ್ಸಿ-ಎಸ್ಟಿ ಆಯೋಗದ ಮಾಜಿ ಸದಸ್ಯ ಜಗದೀಶ್ ಹಿರೇಮನಿ, ಆರ್ಎಸ್ಎಸ್ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಾ| ನಿರಂತರ ಗಣೇಶ್ ಸೇರಿದಂತೆ ಹಲವರು ಖಾಲಿ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ ಎನ್ನಲಾಗಿದೆ.