Budget: ಕರಾವಳಿ ಗ್ಯಾರಂಟಿಗಿಲ್ಲ ಮನ್ನಣೆ
Team Udayavani, Jul 8, 2023, 7:18 AM IST
ಮಂಗಳೂರು: ಕರಾವಳಿ ಮೀನು ಗಾರರಿಗೆ ವಿವಿಧ ಸೌಲಭ್ಯ, ಕೃಷಿಕರಿಗೆ ಪಿಕಪ್ ವಾಹನಕ್ಕೆ ಸಾಲ ಹೊರತುಪಡಿಸಿ ಸಸಿಹಿತ್ಲುವನ್ನು ಅಂತಾ ರಾಷ್ಟ್ರೀಯ ಸರ್ಫಿಂಗ್ ತಾಣವನ್ನಾಗಿಸಲು ಕ್ರಮ, ಜಿಲ್ಲೆಯೂ ಸೇರಿ ಕರಾವಳಿಯ ಪ್ರವಾ ಸೋದ್ಯಮ ಅಭಿವೃದ್ಧಿಗೆ ಕಾರ್ಯಪಡೆ ರಚನೆ, ವಿಪತ್ತಿನಿಂದ ರಕ್ಷಣೆಗಾಗಿ ಕ್ರಮ ಕೈಗೊಳ್ಳುವಂತಹ ಜಿಲ್ಲೆಗಳ ಪಟ್ಟಿಯಲ್ಲಿ ದ.ಕ. ಜಿಲ್ಲೆಯೂ ಸೇರ್ಪಡೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಜೆಟ್ನಲ್ಲಿ ಜಿಲ್ಲೆಗೆ ಸಿಕ್ಕ ಪ್ರಮುಖವಾದದು ಇಷ್ಟೇ. ಆದರೆ ಕರಾವಳಿ ಗ್ಯಾರಂಟಿಯೆಂಬ ಹತ್ತಂಶದ ಪ್ರಣಾಳಿಕೆಗಳ ಭರವಸೆಯ ಯಾವ ಅಂಶವೂ ಬಜೆಟ್ನ ಭಾಗವಾಗಿಲ್ಲ. ಕರಾವಳಿ ಅಭಿವೃದ್ಧಿ ಪ್ರಾಧಿಕಾರ ರಚನೆ (2,500 ಕೋಟಿ ರೂ. ಅನುದಾನ ಸಹಿತ)ಯೂ ಸೇರಿಲ್ಲ.
ಗುಡ್ಡಗಾಡು ಪ್ರದೇಶಗಳ ರೈತರ ಕೃಷಿ ಉತ್ಪನ್ನ ಮತ್ತು ಪರಿಕರಗಳ ಸಾಗಾಣಿಕೆಗಾಗಿ ಪಿಕ್ಅಪ್ ವ್ಯಾನ್ ಖರೀದಿಸಲು 7 ಲಕ್ಷ ರೂ. ವರೆಗಿನ ಸಾಲವನ್ನು ಶೇ. 4ರ ಬಡ್ಡಿ ದರದಲ್ಲಿ ವಿತರಿಸುವ ಪ್ರಸ್ತಾವ ಕೆಲವು ಕೃಷಿಕರಿಗೆ ನೆರವಾಗಲಿದೆ.
ರಾಷ್ಟ್ರೀಯ ವಿಪತ್ತು ಉಪಶಮನ ನಿಧಿ
ಯಿಂದ ದ.ಕ. ಜಿಲ್ಲೆ ಸಹಿತ ಐದು ಜಿಲ್ಲೆಗಳಿಗೆ 721ಕೋಟಿ ರೂ.ನಲ್ಲಿ ಭೂಕುಸಿತ ಹಾಗೂ ನೆರೆ ಅಪಾಯ ಪರಿಹಾರ ಕಾರ್ಯ ಕೈಗೊಳ್ಳಲಾಗುವುದು.
ರಾಜೀವ್ ಗಾಂಧಿ ಆರೋಗ್ಯ ವಿ.ವಿ. ದ.ಕ. ಜಿಲ್ಲೆ ಸಹಿತ ಆರು ಜಿಲ್ಲೆಗಳಲ್ಲಿ ತಮ್ಮ ಅತ್ಯಾಧುನಿಕ ಸ್ಕಿಲ್ ಲ್ಯಾಬ್ಗಳನ್ನು ಹಾಗೂ ಒಳಾಂಗಣ ಕ್ರೀಡಾ ಸೌಲಭ್ಯಗಳನ್ನು ಆರಂಭಿಸಲಿದೆ. ಉತ್ಪಾದನೆ ಹಾಗೂ ರಫ್ತು ಆಧರಿತ ಕೈಗಾರಿಕ ಕ್ಲಸ್ಟರ್ ಅಭಿವೃದ್ಧಿ ಉಳಿದವು.
ಸಸಿಹಿತ್ಲು ಬೀಚ್ನ್ನು ಅಂತಾರಾಷ್ಟ್ರೀಯ ಸರ್ಫಿಂಗ್ ತಾಣವನ್ನಾಗಿಸುವುದಕ್ಕಾಗಿ ಪಿಪಿಪಿ ಆಧಾರ ದದಲ್ಲಿ ಯೋಜನೆ ರೂಪಿಸಲಾಗುವುದು. ದ.ಕ., ಉಡುಪಿ, ಉತ್ತರ ಕನ್ನಡ ಜಿಲ್ಲೆಗಳನ್ನೊಳ ಗೊಂಡ ಕರಾವಳಿಯ ಬೀಚ್ ಟೂರಿಸಂ ಅಭಿವೃದ್ಧಿಗೆ ಕಾರ್ಯಪಡೆ ರಚನೆಯನ್ನು ಘೋಷಿಸಿದೆ.
ದ.ಕ. ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಈ ವರ್ಷ ಪೂರ್ಣಗೊಂಡು ಎಲ್ಲ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸಲಿದೆ. ಧರ್ಮಸ್ಥಳ, ಕೊಡಗು ಚಿಕ್ಕಮಗಳೂರಿನಲ್ಲಿ ಪುಟ್ಟ ವಿಮಾನ ನಿಲ್ದಾಣ(ಏರ್ಸ್ಟ್ರಿಪ್)ಗಳನ್ನು ನಿರ್ಮಿಸಲು ಮುಂದಾಗಿರುವುದರಿಂದ ಟೂರಿಸಂ, ಕೈಗಾರಿಕಾ ವಲಯಕ್ಕೆ ಉತ್ತೇಜನ ಸಿಗಬಹುದು.
ಕಾಲಮಿತಿ ಹೊರತುಪಡಿಸಿ ಉಳಿದ ಸೇವೆಗಳನ್ನು ತತ್ಕ್ಷಣ ಅಥವಾ ಅದೇ ದಿನ ಅಥವಾ ಸಂಕೀರ್ಣ ಪ್ರಕರಣಗಳಲ್ಲಿ ವಾರದೊಳಗೆ ಸಾರ್ವಜನಿಕರಿಗೆ ಒದಗಿಸಲು ಇ-ಆಡಳಿತ ಇಲಾಖೆಯ ಐಟಿ ಸೌಲಭ್ಯಗಳನ್ನು ಬಳಸಿಕೊಳ್ಳಲಿರುವುದೂ ಸೂಕ್ತ. ಇದಕ್ಕೆ ಜಿಲ್ಲೆಯ ಬಂಟ್ವಾಳವನ್ನು ಆಯ್ಕೆ ಮಾಡಿರುವುದು ಸೂಕ್ತ.
ವೇಣುವಿನೋದ್ ಕೆ.ಎಸ್.