ನಾಳೆ ಸಿಎಂ ದಿಲ್ಲಿಗೆ: ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಸಾಧ್ಯತೆ
Team Udayavani, Dec 13, 2022, 11:22 AM IST
ಬೆಂಗಳೂರು: ಮಹಾರಾಷ್ಟ್ರ ಜತೆಗಿನ ಗಡಿ ವಿವಾದಕ್ಕೆ ಸಂಬಂಧಪಟ್ಟಂತೆ ಚರ್ಚೆ ನಡೆಸುವುದಕ್ಕಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನಾಳೆ ದಿಲ್ಲಿಗೆ ಪ್ರಯಾಣ ಬೆಳೆಸಲಿದ್ದು, ಸಂಪುಟ ವಿಸ್ತರಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಜತೆಗೆ ಕರ್ನಾಟಕ ಹಾಗೂ ಮಹಾರಾಷ್ಟ್ರ ನಿಯೋಗ ನಾಳೆ ಸಂಜೆ ಗಡಿ ವಿವಾದ ಸಂಬಂಧ ಮಾತುಕತೆ ನಡೆಸಲಿದೆ. ಚುನಾವಣೆ ಹೊಸ್ತಿಲಲ್ಲಿ ಈ ವಿವಾದ ಬುಗಿಲೇಳದಂತೆ ತಡೆಯುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಈ ಸಭೆಯ ಬಳಿಕ ಸಿಎಂ ಬೊಮ್ಮಾಯಿ ಅಮಿತ್ ಶಾ ಜತೆಗೆ ಅನೌಪಚಾರಿಕವಾಗಿ ಸಂಪುಟ ವಿಸ್ತರಣೆ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಪ್ರಿಯತಮೆ ನೋಡಲು ನಡುರಾತ್ರಿ ಮನೆಗೆ ಹೋದ ಪ್ರಿಯಕರ: ಸಿಕ್ಕಿಬಿದ್ದು ಓಡುವಾಗ ಬಾವಿಗೆ ಬಿದ್ದ.!
ರಾಜ್ಯ ರಾಜಕೀಯ ವಿದ್ಯಮಾನಗಳ ಬಗ್ಗೆ ಸಂಘ-ಪರಿವಾರದ ಮುಖಂಡರಿಂದ ರಾಷ್ಟ್ರೀಯ ನಾಯಕರು ಈಗಾಗಲೇ ಮಾಹಿತಿ ಪಡೆದುಕೊಂಡಿದ್ದಾರೆ. ವಿಶೇಷವಾಗಿ ಪಂಚಮಸಾಲಿ ಮೀಸಲು ಹೋರಾಟ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಸಮುದಾಯದ ಮುಖಂಡರನ್ನು ಸಮಾಧಾನಪಡಿಸಲು ಕೆಲ ಮಹತ್ವದ ನಿರ್ಣಯ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಹೀಗಾಗಿ ಸಮುದಾಯದ ಇಬ್ಬರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡು ವಿವಾದವನ್ನು ತಾತ್ಕಾಲಿಕ ಶಮನ ಮಾಡುವ ಲೆಕ್ಕಾಚಾರವನ್ನು ಸಿಎಂ ಬೊಮ್ಮಾಯಿ ಹೊಂದಿದ್ದು, ಅಮಿತ್ ಶಾ ಎದುರು ಈ ವಿಚಾರ ಮಂಡಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಜತೆಗೆ ವಿಧಾನ ಪರಿಷತ್ ಸಭಾಪತಿ ಆಯ್ಕೆ ವಿಚಾರವನ್ನು ಈ ಭೇಟಿ ಸಂದರ್ಭದಲ್ಲಿ ಬಗೆಹರಿಸಿಕೊಂಡು ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.