ಒಂದು ಪರಿಷತ್ ಸದಸ್ಯ ಸ್ಥಾನಕ್ಕೆ ಬಿಜೆಪಿಯೊಳಗೆ ಪೈಪೋಟಿ: ಬ್ರಾಹ್ಮಣ ಸಮುದಾಯದಿಂದಲೂ ಆಗ್ರಹ
Team Udayavani, Jul 30, 2022, 3:32 PM IST
ಬೆಂಗಳೂರು: ಸಿ.ಎಂ.ಇಬ್ರಾಹಿಂ ರಾಜೀನಾಮೆಯಿಂದ ತೆರವಾಗಿರುವ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕಾಗಿ ಈಗ ಭಾರಿ ಪೈಪೋಟಿ ಆರಂಭವಾಗಿದೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಬಹುಮತ ಲಭ್ಯವಿಲ್ಲದೇ ಇರುವುದರಿಂದ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ನಾಮಪತ್ರ ಸಲ್ಲಿಸುವುದಕ್ಕೆ ಸೋಮವಾರ ಕೊನೆಯ ದಿನವಾದರೂ ಬಿಜೆಪಿ ಯಾರ ಹೆಸರನ್ನೂ ಇನ್ನೂ ಅಂತಿಮಗೊಳಿಸಿಲ್ಲ.
ಮೋಹನ್ ಲಿಂಬಿಕಾಯಿ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಸೇರಿದಂತೆ ಹಲವು ಹೆಸರು ಕೇಳಿ ಬಂದಿದೆಯಾದರೂ ಬೊಮ್ಮಾಯಿ ಸರಕಾರದ ಒಂದು ವರ್ಷದ ಸಮಾವೇಶ ಮುಕ್ತಾಯವಾಗುವವರೆಗೆ ಯಾವುದೇ ನಿರ್ಧಾರ ಪ್ರಕಟವಾಗುವ ಸಾಧ್ಯತೆ ಕಡಿಮೆ.
ವಿಧಾನ ಪರಿಷತ್ತಿನಲ್ಲಿ ಬಿಜೆಪಿವತಿಯಿಂದ ಬ್ರಾಹ್ಮಣ ಸಮುದಾಯದವರಿಗೆ ಇತ್ತೀಚಿನ ವರ್ಷಗಳಲ್ಲಿ ಯಾವುದೇ ಪ್ರಾತಿನಿಧ್ಯ ಸಿಕ್ಕಿಲ್ಲ. ಹೀಗಾಗಿ ಬ್ರಾಹ್ಮಣರಿಗೆ ಅವಕಾಶ ನೀಡಬೇಕೆಂಬ ಆಗ್ರಹ ಹೆಚ್ಚಿದೆ.
ಇದನ್ನೂ ಓದಿ:ಇ.ಡಿ ತನಿಖೆಯ ಭಯ? ಶಿವಸೇನಾದ ಮತ್ತೊಬ್ಬ ಹಿರಿಯ ನಾಯಕ ಅರ್ಜುನ್ ಶಿಂಧೆ ಪಾಳಯಕ್ಕೆ
ದಶಕಗಳ ಕಾಲ ಬಿಜೆಪಿ ಮಾಧ್ಯಮ ವಿಭಾಗದಲ್ಲಿ ಸಕ್ರಿಯವಾಗಿ ಕೆಲಸ ಮಾಡಿರುವ ಎಸ್.ಪ್ರಕಾಶ್ ಪರವಾಗಿ ಬಲವಾದ ಧ್ವನಿ ಕೇಳಿ ಬಂದಿದೆ. ಇದರ ಜತೆಗೆ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸಚ್ಚಿದಾನಂದಮೂರ್ತಿ ಅವರ ಹೆಸರು ಪ್ರಸ್ತಾಪವಾಗುತ್ತಿದೆ. ಆದರೆ ಚುನಾವಣೆ ದೃಷ್ಟಿಯಿಂದ ಯಾರ ಹೆಸರು ಅಂತಿಮಗೊಳ್ಳುತ್ತದೆ ಎಂಬುದಕ್ಕೆ ದಿನಗಣನೆ ಆರಂಭವಾಗಿದೆ.