ಇ.ಡಿ. ನಿರ್ದೇಶಕರ ಮುಂದುವರಿಕೆಗೆ ಮನವಿ
Team Udayavani, Jul 27, 2023, 12:21 AM IST
ಹೊಸದಿಲ್ಲಿ: ಜಾರಿ ನಿರ್ದೇಶನಾಲಯ (ಇ.ಡಿ.)ದ ಹಾಲಿ ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ ಅವರನ್ನು ಅ.15ರವರೆಗೆ ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ನೀಡಬೇಕು. ಇದರಿಂದ ದೇಶದ ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣಗಳ ತನಿಖಾ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಆರ್ಥಿಕ ವ್ಯವಹಾರಗಳ ಕಾರ್ಯಪಡೆ(ಎಫ್ಎಟಿಎಫ್)ಯ ಪರಿಶೀಲನೆಯು ಸುಗಮವಾಗಿ ನಡೆಯಲಿದೆ ಎಂದು ಕೇಂದ್ರ ಸರಕಾರ ಬುಧವಾರ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದೆ.
ಪ್ರಸ್ತುತ ಅವರನ್ನು ಬದಲಾವಣೆ ಮಾಡುವುದು ರಾಷ್ಟ್ರೀಯ ಹಿತಾಸಕ್ತಿಗಳಿಗೆ ವಿರುದ್ಧವಾಗುತ್ತದೆ, ದೇಶದ ಹಿತವನ್ನಿಟ್ಟುಕೊಂಡೇ ಅವರ ಅವಧಿಯನ್ನು ಮುಂದುವರಿಸಲು ಮನವಿ ಮಾಡಲಾಗಿದೆ ಎಂದು ಕೇಂದ್ರ ಹೇಳಿದೆ. ಜು.31ರೊಳಗೆ ನೂತನ ಇ.ಡಿ. ನಿರ್ದೇಶಕರನ್ನು ನೇಮಿಸಬೇಕು ಎಂದು ಜು.11ರ ವಿಚಾರಣೆಯಲ್ಲಿ ಸುಪ್ರೀಂ ಆದೇಶಿಸಿತ್ತು. ಈ ದಿನಾಂಕವನ್ನು ವಿಸ್ತರಿಸಬೇಕು ಎಂದು ಕೋರಿ ಸರಕಾರ ಬುಧವಾರ ಅರ್ಜಿ ಸಲ್ಲಿಸಿದೆ. “ಈ ಹಂತದಲ್ಲಿ ಜಾರಿ ನಿರ್ದೇಶನಾಲಯದಲ್ಲಿ ನಾಯಕತ್ವ ಬದಲಾವಣೆಯು, ಎಫ್ಎಟಿಎಫ್ ಮೌಲ್ಯಮಾಪನ ತಂಡಕ್ಕೆ ಅಗತ್ಯ ನೆರವು ಮತ್ತು ಸಹಕಾರವನ್ನು ಒದಗಿಸುವ ಇ.ಡಿ . ಯ ಸಾಮರ್ಥ್ಯವನ್ನು ಗಮನಾರ್ಹವಾಗಿ ಕುಂಠಿತಗೊಳಿಸುತ್ತದೆ, ಅವರ ಮುಂದುವರಿಕೆ ಅಗತ್ಯ’ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.