ಮನೆಯಲ್ಲಿದ್ದೇ ಕೋವಿಡ್ ಗೆಲ್ಲಬಹುದು! ಶೇ. 90ರಷ್ಟು ಮಂದಿ ನಿಯಮ ಪಾಲಿಸಿ ಗುಣಮುಖರಾಗಿದ್ದಾರೆ
Team Udayavani, Apr 26, 2021, 7:25 AM IST
ಹೊಸದಿಲ್ಲಿ : “ಸೋಂಕುಪೀಡಿತರಲ್ಲಿ ಶೇ. 90ರಷ್ಟು ಮಂದಿ ಆಸ್ಪತ್ರೆಗೆ ತೆರಳದೆ ಮನೆಯಲ್ಲೇ ಇದ್ದು ಗುಣಮುಖರಾಗಲು ಅವಕಾಶ ಇದೆ. ಆದರೆ ಅವರು ನಿಯಮ ಪಾಲನೆ ಮಾಡಬೇಕು…’
ಈ ಅಭಿಪ್ರಾಯವನ್ನು ಹೊಸದಿಲ್ಲಿಯ ಅಖೀಲ ಭಾರತೀಯ ವೈದ್ಯವಿಜ್ಞಾನಗಳ ಸಂಸ್ಥೆ (ಏಮ್ಸ್) ಮುಖ್ಯಸ್ಥ ಡಾ| ರಣದೀಪ್ ಗುಲೇರಿಯಾ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಅದೇ ಸಂಸ್ಥೆಯ ಔಷಧ ವಿಭಾಗದ ಮುಖ್ಯಸ್ಥ ಡಾ| ನವನೀತ್ ಶರ್ಮಾ, ಗುರುಗ್ರಾಮದ “ಮೇದಾಂತ-ದ ಮೆಡಿಸಿಟಿ’ ಆಸ್ಪತ್ರೆಯ ವೈದ್ಯ ಡಾ| ನರೇಶ್ ಟೆಹ್ರಾನ್ ಸಹಮತ ವ್ಯಕ್ತಪಡಿಸಿದ್ದಾರೆ. ಇಂಥ ಕ್ರಮಗಳನ್ನು ಅನುಸರಿಸುವ ಮೂಲಕ ಶೇ. 90ರಷ್ಟು ರೋಗಿಗಳು ಗುಣ ಹೊಂದಿದ್ದಾರೆ.
ವೈದ್ಯರ ಸೂಚನೆಯಂತೆ ನಿಯಮಿತವಾಗಿ ಔಷಧ ಸೇವನೆ, ಮಾರ್ಗಸೂಚಿ ಪಾಲನೆಯ ಜತೆಗೆ ಯೋಗ, ಅನುಲೋಮ- ವಿಲೋಮದಂಥ ಉಸಿರಾಟ ವ್ಯಾಯಮಗಳು ಕೊರೊನಾದಿಂದ ಶೀಘ್ರ ಗುಣಮುಖರಾಗಲು ನೆರವಾಗುತ್ತವೆ. ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮಗಳು ಶ್ವಾಸಕೋಶದ ಸಂಕುಚನ- ವಿಕಸನ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಅಲ್ಲದೆ ಆಮ್ಲಜನಕ ವಿನಿಮಯ ಉದ್ದೀಪನಗೊಳ್ಳುತ್ತದೆ ಎಂದು ಈ ಎಲ್ಲ ವೈದ್ಯರೂ ಹೇಳಿದ್ದಾರೆ.
ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು ಮತ್ತು ಇನ್ನಿತರ ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಸೋಂಕುಪೀಡಿತರ ಪ್ರಮಾಣವನ್ನು ಮುಂದಿನ ಮೂರು ವಾರಗಳಲ್ಲಿ ಶೇ. 5ಕ್ಕೆ ಇಳಿಸಬಹುದು ಎಂದು ಏಮ್ಸ್ ಆಸ್ಪತ್ರೆಯಲ್ಲಿ ಔಷಧ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಡಾ| ನವನೀತ್ ಸಿಂಗ್ ಹೇಳಿದ್ದಾರೆ.
7 ದಿನದಲ್ಲಿ ನಿವಾರಣೆ
ಪ್ರಸ್ತುತ ಉಲ್ಬಣಿಸಿರುವ ಆಮ್ಲಜನಕ ಕೊರತೆಯ ಬಗ್ಗೆ ಮಾತನಾಡಿರುವ ವೈದ್ಯರು, ಕೇಂದ್ರ ಸರಕಾರ ಸದ್ಯ ಕೈಗೊಂಡಿರುವ ಕ್ರಮಗಳಿಂದ 7 ದಿನಗಳಲ್ಲಿ ಸದ್ಯದ ಸ್ಥಿತಿ ನಿವಾರಣೆಯಾಗುವ ವಿಶ್ವಾಸವಿದೆ. ದೇಶದೆಲ್ಲೆಡೆ ಆಮ್ಲಜನಕದ ಬೇಡಿಕೆ ಸಾಮಾನ್ಯಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ. ಇದು ನಿಜಕ್ಕೂ ದೊಡ್ಡ ಸವಾಲು. ಉಕ್ಕು ಕೈಗಾರಿಕೆಗಳು ತಮ್ಮ ಬಳಕೆಗಾಗಿ ಅಗಾಧ ಪ್ರಮಾಣದಲ್ಲಿ ಆಮ್ಲಜನಕ ಉತ್ಪಾದಿಸುತ್ತವೆ. ಆ ಕ್ಷೇತ್ರದ ಕೈಗಾರಿಕಾ ಸಂಸ್ಥೆಗಳು ಆಮ್ಲಜನಕ ಸಾಗಣೆಗೆ ನೆರವು ನೀಡಬೇಕು. ಇದರಿಂದಾಗಿ ವಾರದಲ್ಲಿ ಆಮ್ಲಜನಕದ ಕೊರತೆ ನೀಗುವ ವಿಶ್ವಾಸವಿದೆ ಎಂದಿದ್ದಾರೆ.