ಹಣತೆ, ಗಣೇಶ ಮೂರ್ತಿ ಸ್ವದೇಶದಲ್ಲೇ ನಿರ್ಮಾಣ: ಯೋಗಿ ಮೆಚ್ಚುಗೆ
Team Udayavani, Nov 15, 2020, 6:45 AM IST
ಗೋರಖ್ಫುರ: ಈ ಸಲದ ದೀಪಾವಳಿ ಹಣತೆ, ಗೌರಿ- ಗಣೇಶ ಮೂರ್ತಿಗಳಾವುವೂ ಚೀನಾದಿಂದ ಬರಲಿಲ್ಲ. ಭಾರತದ ಕುಂಬಾರರು, ಗೋಶಾಲೆ ಮಂದಿ ಇವನ್ನು ಪೂರೈಸಿದ್ದಾರೆ ಎಂದು ಉ.ಪ್ರ. ಸಿಎಂ ಯೋಗಿ ಆದಿತ್ಯನಾಥ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ವಂಟಾಂಗಿಯಾ ಹಳ್ಳಿಗೆ ಭೇಟಿ ನೀಡಿದ್ದ ಯೋಗಿ, “ನಾವೆಲ್ಲರೂ ಪ್ರಧಾನಿ ನರೇಂದ್ರ ಮೋದಿ ಅವರು ಕಂಡ ಕನಸನ್ನು ನನಸು ಮಾಡಬೇಕಿದೆ. ಕೊರೊನಾ ಕಾರಣದಿಂದಾಗಿ ಹಣತೆ, ಗಣೇಶ ಮೂರ್ತಿಗಳು ಈ ಬಾರಿ ಚೀನಾದಿಂದ ಬರಲಿಲ್ಲ. ಆದರೂ ಇವುಗಳ ಕೊರತೆ ಉಂಟಾಗಲಿಲ್ಲ. ಸ್ವದೇಶಿಗರೇ ನಿರ್ಮಿಸಿ ಯಶಸ್ವಿಯಾಗಿದ್ದಾರೆ’ ಎಂದರು. ಅಲ್ಲದೆ, ಹುತಾತ್ಮ ಯೋಧರ ಹೆಸರಿನಲ್ಲಿ ಒಂದು ಹಣತೆ ಹಚ್ಚಲು ಜನತೆಗೆ ಕರೆಕೊಟ್ಟಿದ್ದಾರೆ.
ಬಡವನ ಮಗಳಿಗೆ ಗಿಫ್ಟ್;
ಪೊಲೀಸರಿಂದ ಅಮಾನುಷ ಹಿಂಸೆಗೆ ಗುರಿಯಾಗಿದ್ದ ಬಡವನನ್ನು ಬಿಡುಗಡೆಗೊಳಿಸಿ, ಆತನ ಪುಟಾಣಿ ಮಗಳಿಗೆ ಸಿಎಂ ಯೋಗಿ ದೀಪಾವಳಿ ಉಡುಗೊರೆ- ಸಿಹಿ ನೀಡಿ ಮಾನವೀಯತೆ ಮೆರೆದಿದ್ದಾರೆ. ಬುಲಂದ್ಶಹರ್ನಲ್ಲಿ ಅಕ್ರಮವಾಗಿ ಪಟಾಕಿ ಮಾರುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು. ಈ ವೇಳೆ ಆಕೆ ಜೋರಾಗಿ ಅಳುತ್ತಾ, ಪೊಲೀಸ್ ವ್ಯಾನ್ಗೆ ತಲೆ ಚಚ್ಚಿಕೊಂಡು ಅವರ ಪುತ್ರಿ ಆಕ್ರೋಶ ಹೊರಹಾಕಿದ್ದಳು. ಈ ಮನಕಲುಕುವ ದೃಶ್ಯದ ವಿಡಿಯೊ ಗಮನಿಸಿದ ಯೋಗಿ, ಕೂಡಲೇ ಬಡವನನ್ನು ಬಂಧನದಿಂದ ವಿಮುಕ್ತಗೊ ಳಿಸಿದ್ದಲ್ಲದೆ, ದೀಪಾವಳಿ ಗಿಫ್ಟ್- ಸಿಹಿಯನ್ನು ಮಗಳಿಗೆ ನೀಡುವಂತೆ ಬೀಳ್ಕೊಟ್ಟಿದ್ದಾರೆ.