ಚುನಾವಣೆ : ದೇಶದ ಕಣ್ಣು ಗೋವಾ ರಾಜಧಾನಿ ಪಣಜಿಯತ್ತ!
ಬಿಜೆಪಿ ಶಾಸಕ ಬಾಬೂಶ್ ಮೊನ್ಸೆರಾತ್ ಮತ್ತು ಉತ್ಪಲ್ ನಡುವೆ ನೇರ ಹಣಾಹಣಿ
Team Udayavani, Feb 12, 2022, 5:07 PM IST
ಪಣಜಿ: ಗೋವಾದಲ್ಲಿ ಫೆ.14 ರಂದು ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ದೇಶದ ಕಣ್ಣು ಗೋವಾ ರಾಜಧಾನಿ ಪಣಜಿಯತ್ತ ನೆಟ್ಟಿದೆ. ಪಣಜಿ ಕ್ಷೇತ್ರವು ಕಳೆದ 25 ವರ್ಷಗಳ ಕಾಲ (1994-2019) ಬಿಜೆಪಿ ಮತ್ತು ಮಾಜಿ ಮುಖ್ಯಮಂತ್ರಿ ದಿ. ಮನೋಹರ್ ಪರ್ರಿಕರ್ ವಷದಲ್ಲಿತ್ತು. ಅವರ ನಿಧನದ ನಂತರ ಉಪ ಚುನಾವಣೆಯಲ್ಲಿ ಪ್ರಪ್ರಥಮ ಬಾರಿಗೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು.
ಆದರೆ ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿಯಿಂದ ಪಣಜಿ ಕ್ಷೇತ್ರದಲ್ಲಿ ಸ್ಫರ್ಧಿಸಿರುವ ಹಾಲಿ ಶಾಸಕ ಬಾಬೂಶ್ ಮೊನ್ಸೆರಾತ್ಗೆ ಪಕ್ಷೇತರರಾಗಿ ಸ್ಫರ್ಧಿಸಿರುವ ಪರ್ರಿಕರ್ ಪುತ್ರ ಉತ್ಪಲ್ ಪರ್ರಿಕರ್ ನೇರ ಸ್ಫರ್ಧೆಯೊಡ್ಡಿದ್ದಾರೆ. ಬಿಜೆಪಿಯಿಂದ ಟಿಕೆಟ್ ಲಭಿಸದಿದ್ದರೂ ಕೂಡ ತಮ್ಮ ತಂದೆ ಮನೋಹರ್ ಪರ್ರಿಕರ್ ರವರ ಅಭಿವೃದ್ಧಿ ಕನಸು ಮತ್ತು ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವುದಾಗಿ ಜನತೆಗೆ ಭರವಸೆ ನೀಡಿದ್ದಾರೆ. ಪಣಜಿ ಕ್ಷೇತ್ರದಲ್ಲಿ ಉತ್ಪಲ್ ಪಕ್ಷೇತರರಾಗಿ ಸ್ಫರ್ಧಿಸಿರುವುದು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.
ತಮ್ಮ ತಂದೆ ಸುಮಾರು 25 ವರ್ಷಗಳ ಕಾಲ ಶಾಸಕರಾಗಿದ್ದ ಕ್ಷೇತ್ರದಲ್ಲಿ ಬಿಜೆಪಿ ಬಲದ ವಿರುದ್ಧ ಬಂಡಾಯವೆದ್ದಿರುವ ಉತ್ಪಲ್ ಪರ್ರಿಕರ್ ರವರ ನಿರ್ಧಾರ ರಾಷ್ಟ್ರದ ಗಮನ ಸೆಳೆದಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಕೂಡ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಆದರೆ ಈ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಶಾಸಕ ಬಾಬೂಶ್ ಮೊನ್ಸೆರಾತ್ ಮತ್ತು ಉತ್ಪಲ್ ನಡುವೆ ನೇರ ಹಣಾಹಣಿ ಏರ್ಪಟ್ಟಿರುವುದು ಗೋಚರಿಸುತ್ತಿದೆ.
ಮತ ವಿಭಜನೆಯಿಂದ ಗೆಲುವು ನಮ್ಮದೇ !
ಚುನಾವಣೆಯಲ್ಲಿ ಟಿಎಂಸಿ ಮತ್ತು ಆಮ್ ಆದ್ಮಿ ಪಕ್ಷಗಳು ಕಾಂಗ್ರೆಸ್ ಮತಗಳನ್ನು ಒಡೆಯುವ ಮೂಲಕ ಬಿಜೆಪಿಗೆ ಸಹಾಯ ಮಾಡಲಿದೆ. ಬಿಜೆಪಿಯು ತನ್ನ ಬಹುಮತದ ಗಡಿ ದಾಟಲಿದೆ. ಬಿಜೆಪಿ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಣಜಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಎಂಸಿ ಮತ್ತು ಆಮ್ ಆದ್ಮಿ ಪಕ್ಷಗಳು ಬಿಜೆಪಿಗೆ ಹೆಚ್ಚು ಸಹಾಯ ಮಾಡುತ್ತಿವೆ. ಈ ಪಕ್ಷಗಳು ಕಾಂಗ್ರೆಸ್ ಪಕ್ಷಕ್ಕೆ ಬೀಳತ್ತಿದ್ದ ಮತಗಳನ್ನು ಕಡಿಮೆ ಮಾಡಲಿವೆ. ಗೋವಾದಲ್ಲಿ ಬಿಜೆಪಿಗೆ ಕಾಂಗ್ರೆಸ್ ಮಾತ್ರ ವಿರೋಧ ಪಕ್ಷವಾಗಿದೆ. ಎಂದರು.
2017 ರ ಗೋವಾ ವಿಧಾನಸಭಾ ಚುನಾವಣೆಯ ನಂತರ ಬಿಜೆಪಿ ಕುದುರೆ ವ್ಯಾಪಾರ ಮಾಡಿದೆ ಎಂದು ಟಿಎಂಸಿ ಆರೋಪಿಸಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿದ ನಿತಿನ್ ಗಡ್ಕರಿ, ಯಾವುದೇ ಕುದುರೆ ವ್ಯಾಪಾರ ನಡೆದಿಲ್ಲ. ಇವೆಲ್ಲವೂ ಕೇವಲ ಊಹಾಪೋಹಗಳು. ಯಾವ ಪಕ್ಷವು ರಾಜ್ಯದಲ್ಲಿ ಸರ್ಕಾರ ರಚಿಸಲು ವಿಫಲವಾಗಿದೆ ಅಂತಹ ಪಕ್ಷಗಳು ಈ ರೀತಿಯ ಆರೋಪ ಮಾಡುತ್ತಿವೆ ಎಂದರು.
ಗೋವಾದಲ್ಲಿ ಅನುಕೂಲ ರಾಜಕಾರಣ ನಡೆಯುತ್ತಿದ್ದು ಯಾವುದೇ ಪಕ್ಷ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳಬಹುದು. ರಾಜಕೀಯವು ರಾಜಿ, ಬಲವಂತ, ಮಿತಿ ಮತ್ತು ವಿರೋಧಾಭಾಸದ ಆಟವಾಗಿದೆ. ಯಾವುದೇ ಹಂತದಲ್ಲಿ ಸಂಖ್ಯೆಗಳ ಆಧಾರದ ಮೇಲೆ ಪರ್ಯಾಯ ಮತ್ತು ಪರಿಹಾರಗಳನ್ನು ಕಂಡುಕೊಳ್ಳಬಹುದು. ಚುನಾವಣೋತ್ತರ ಮೈತ್ರಿ ಏನೇ ಇರಲಿ, ಪ್ರಸಕ್ತ ಚುನಾವಣೆಯ ನಂತರ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.
ಫೆ. 14 ರಂದು ರಾಜ್ಯದಲ್ಲಿ ಮತದಾನ ನಡೆಯಲಿದ್ದು, ಮಾರ್ಚ 10 ರಂದು ಫಲಿತಾಂಶ ಹೊರಬೀಳಲಿದೆ.