ಜ್ಞಾನವಾಪಿ ಮಸೀದಿ ವಿಡಿಯೋ ಚಿತ್ರೀಕರಣಕ್ಕೆ ವಾರಾಣಸಿ ಕೋರ್ಟ್ ಆದೇಶ; ಮೇ 17 ಅಂತಿಮ ಗಡುವು
ವಾರಾಣಸಿ ಜಿಲ್ಲಾಧಿಕಾರಿ ಮೇಲುಸ್ತುವಾರಿಯಲ್ಲಿ ಸಮೀಕ್ಷೆ ನಡೆಸಲು ನಿರ್ದೇಶನ ನೀಡಿದೆ.
Team Udayavani, May 12, 2022, 2:39 PM IST
ನವದೆಹಲಿ: ಕಾಶಿ ವಿಶ್ವನಾಥ ಮಂದಿರದ ಸಮೀದಲ್ಲಿ ಇರುವ ಜ್ಞಾನವಾಪಿ ಮಸೀದಿಯೊಳಗೆ ವಿಡಿಯೋ ಸಮೀಕ್ಷೆ ಮುಂದುವರಿಸುವಂತೆ ತಿಳಿಸಿರುವ ಉತ್ತರಪ್ರದೇಶದ ಸ್ಥಳೀಯ ನ್ಯಾಯಾಲಯ, ಮೇ 17ರೊಳಗೆ ಸರ್ವೆ ಕಾರ್ಯ ಮುಕ್ತಾಯಗೊಳಿಸುವಂತೆ ಗುರುವಾರ (ಮೇ 12) ಮಹತ್ವದ ತೀರ್ಪು ನೀಡಿದೆ. ಇದರಿಂದ ಹಿಂದೂಪರ ಅರ್ಜಿದಾರರಿಗೆ ಗೆಲುವು ಸಿಕ್ಕಂತಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಶಿರಸಿ : ಯಕ್ಷಗಾನ ಬಾಲ ಕಲಾವಿದೆ ತುಳಸಿಗೆ ಇಂಡಿಯನ್ ಸ್ಟಾರ್ ಐಕಾನ್ ಅವಾರ್ಡ್
ವಿಡಿಯೋ ಚಿತ್ರೀಕರಣ ಸಹಿತ ಸಮೀಕ್ಷೆಗೆ ಕೋರ್ಟ್ ಆದೇಶ ನೀಡಿದ್ದು, ಮೇ 17ರಂದು ಸಮೀಕ್ಷೆಯ ವರದಿಯನ್ನು ವಾರಾಣಸಿ ಕೋರ್ಟ್ ಗೆ ಸಲ್ಲಿಸುವಂತೆ ಸೂಚನೆ ನೀಡಿದೆ. ವಾರಾಣಸಿ ಜಿಲ್ಲಾಧಿಕಾರಿ ಮೇಲುಸ್ತುವಾರಿಯಲ್ಲಿ ಸಮೀಕ್ಷೆ ನಡೆಸಲು ನಿರ್ದೇಶನ ನೀಡಿದೆ.
ಮಸೀದಿಯೊಳಗೆ ಹಿಂದ ದೇವರ ವಿಗ್ರಹ ಇದ್ದು, ಅವುಗಳ ಪೂಜೆಗೆ ಅವಕಾಶ ನೀಡಬೇಕು ಎಂದು ಸ್ಥಳೀಯ ಕೋರ್ಟ್ ನಲ್ಲಿ ಪಿಐಎಲ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟ್ ನ ಹಿಂದಿನ ಆದೇಶದಂತೆ ಅಧಿಕಾರಿಗಳ ತಂಡ ಮಸೀದಿಯ ಸಮೀಕ್ಷೆಗೆ ತೆರಳಿತ್ತು. ಆದರೆ ಮಸೀದಿ ಒಳಗೆ ವಿಡಿಯೋ ಚಿತ್ರೀಕರಣ ಮಾಡಲು ಆಡಳಿತ ಮಂಡಳಿ ತಡೆಯೊಡ್ಡಿತ್ತು. ಅಲ್ಲದೇ ಮೇಲುಸ್ತುವಾರಿ ಅಧಿಕಾರಿಯನ್ನು ಬದಲಾಯಿಸಬೇಕು ಎಂದು ಕೋರ್ಟ್ ಗೆ ಮನವಿ ಮಾಡಿತ್ತು.
ಈ ಅರ್ಜಿಯ ಕುರಿತು ಸತತ ಮೂರು ದಿನಗಳಿಂದ ವಾದ, ಪ್ರತಿವಾದ ಆಲಿಸಿದ ವಾರಾಣಸಿ ಕೋರ್ಟ್ ಗುರುವಾರ ಮಸೀದಿಯೊಳಗಿನ ವಿಡಿಯೋ ಚಿತ್ರೀಕರಣದ ಕುರಿತು ಅಂತಿಮ ತೀರ್ಪನ್ನು ಪ್ರಕಟಿಸಿದೆ.