ಪಂಜಾಬ್ ಬೆನ್ನಲ್ಲೇ ಉತ್ತರಾಖಂಡ್ ಕಾಂಗ್ರೆಸ್ ನಲ್ಲಿ ಭಿನ್ನಮತ; ವರಿಷ್ಠರ ವಿರುದ್ಧ ರಾವತ್ ಕಿಡಿ
ಕಾಂಗ್ರೆಸ್ ಟ್ರಬಲ್ ಶೂಟರ್ ಎಂದೇ ಖ್ಯಾತರಾಗಿದ್ದ ರಾವತ್ ಈಗ ಕಾಂಗ್ರೆಸ್ ಗೆ ಟ್ರಬಲ್ ಸೃಷ್ಟಿ ಮಾಡಿದ್ದಾರೆ.
Team Udayavani, Dec 22, 2021, 3:38 PM IST
ನವದೆಹಲಿ: ಪಂಜಾಬ್ ಬೆನ್ನಲ್ಲೇ ಉತ್ತರಖಂಡ್ ಕಾಂಗ್ರೆಸ್ ನಲ್ಲಿ ಭಿನ್ನಮತ ಭುಗಿಲೆದಿದ್ದು, ಪಕ್ಷದ ಹಿರಿಯ ಮುಖಂಡ ಹಾಗೂ ಮಾಜಿ ಸಿಎಂ ಹರೀಶ್ ರಾವತ್ ಹೈಕಮಾಂಡ್ ವಿರುದ್ಧ ಸಿಡಿದೆದ್ದಿದ್ದಾರೆ. ಚುನಾವಣೆ ಹೊಸ್ತಿಲಲ್ಲೇ ನಡೆದಿರುವ ಈ ಬೆಳವಣಿಗೆ ಕಾಂಗ್ರೆಸ್ ವರಿಷ್ಢರನ್ನು ಚಿಂತೆಗೀಡು ಮಾಡಿದೆ.
ಇದನ್ನೂ ಓದಿ:ಎಂ.ಇ.ಎಸ್. ಜೊತೆ ಕಾಂಗ್ರೆಸ್ ಸೇರಿರುವ ಗುಮಾನಿ ಇದೆ : ಶೋಭಾ ಕರಂದ್ಲಾಜೆ ವಾಗ್ದಾಳಿ
ಕಾಂಗ್ರೆಸ್ ರಾಷ್ಟ್ರೀಯ ನಾಯಕರನ್ನೇ ಗುರಿಯಾಗಿಸಿಕೊಂಡು ರಾವತ್ ಹಿಂದಿಯಲ್ಲಿ ಸರಣಿ ಟ್ವೀಟ್ ಮಾಡುವ ಮೂಲಕ ತಮ್ನ ಆಕ್ಷೇಪವನ್ನು ಹೊರ ಹಾಕಿದ್ದಾರೆ. ಒಂದು ಕಾಲದಲ್ಲಿ ಕಾಂಗ್ರೆಸ್ ಟ್ರಬಲ್ ಶೂಟರ್ ಎಂದೇ ಖ್ಯಾತರಾಗಿದ್ದ ರಾವತ್ ಈಗ ಕಾಂಗ್ರೆಸ್ ಗೆ ಟ್ರಬಲ್ ಸೃಷ್ಟಿ ಮಾಡಿದ್ದಾರೆ.
“ಇದು ವಿಚಿತ್ರ ಎನ್ನಿಸುತ್ತಿಲ್ಲವೇ ? ನಾವೆಲ್ಲ ಚುನಾವಣಾ ಸಾಗರದಲ್ಲಿ ಈಜಬೇಕಿದೆ. ಆದರೆ ಪಕ್ಷ ನಮಗೆ ಬೆಂಬಲ ನೀಡುವ ಬದಲು ಬೆನ್ನು ತೋರಿಸುತ್ತಿದೆ. ನನ್ನ ಜತೆಗೆ ಋಣಾತ್ಮಕ ಆಟ ಆಡುತ್ತಿದೆ ” ಎಂದು ಹೈಕಮಾಂಡ್ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಾಗರದಲ್ಲಿರುವ ಹಲವು ಮೊಸಳೆಗಳ ವಿರುದ್ಧ ನಾವು ಸೆಣೆಸಿ ಸೋಲಿಸಬೇಕಿದೆ. ಆದರೆ ನಾವು ಯಾರನ್ನು ಅನುಸರಿಸಬೇಕಿತ್ತೋ ಅವರೇ ನನ್ನ ಕೈ ಕಾಲುಗಳನ್ನು ಕಟ್ಟಿ ಹಾಕಿದ್ದಾರೆ. ಹರೀಶ್ ರಾವತ್ ನೀನು ಬಹುದೂರ ಸಾಗಿದ್ದೀಯಾ, ನೀನು ಸಾಕಷ್ಟು ಕೆಲಸ ಮಾಡಿದ್ದೀಯಾ , ಈಗ ವಿಶ್ರಾಂತಿಯ ಸಮಯ ಎಂಬ ಭಾವನೆ ಈಗ ನನ್ನನ್ನು ಕಾಡುತ್ತಿದೆ. ನಾನೀಗ ಗೊಂದಲದಲ್ಲಿ ಇದ್ದೇನೆ. ಹೊಸ ವರ್ಷ ಹೊಸ ದಾರಿ ತೋರಬಹುದು. ಕೇದಾರನಾಥ ಪ್ರಭು ಯಾವುದಾದರೂ ಮಾರ್ಗ ತೋರಬಹುದೆಂಬ ವಿಶ್ವಾಸ ನನಗೆ ಇದೆ ” ಎಂದು ಟ್ವೀಟ್ ನಲ್ಲಿ ಹೇಳಿದ್ದಾರೆ.
ರಾವತ್ ಅವರ ಈ ನಡೆಯ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಸದ್ಯಕ್ಕೆ ತಟಸ್ಥವಾಗಿದೆ. ಚುನಾವಣೆಗೆ ಇನ್ನೂ ಒಂದು ವರ್ಷ ಇರುವಾಗಲೇ ನಡೆದ ಈ ಘಟನೆಯನ್ನು ಹೇಗೆ ಸುಖಾಂತ್ಯಗೊಳಿಸಬೇಕೆಂಬ ಬಗ್ಗೆ ಸದ್ಯದಲ್ಲೇ ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ.