ಹುಬ್ಬಳ್ಳಿ: ಚಲಿಸುವ ರೈಲಿಗೆ ಸಿಲುಕಿ ವ್ಯಕ್ತಿಯ ಎರಡೂ ಕಾಲು ತುಂಡು
ಕೈ ಮೇಲೆ ಹೆಂಡತಿ ಫೋನ್ ನಂಬರ್ ಬರೆದುಕೊಂಡಿದ್ದ ವ್ಯಕ್ತಿ: ಆತ್ಮಹತ್ಯೆ ಶಂಕೆ
Team Udayavani, May 5, 2022, 1:27 PM IST
ಹುಬ್ಬಳ್ಳಿ: ವ್ಯಕ್ತಿಯೋರ್ವ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಎರಡೂ ಕಾಲುಗಳನ್ನು ಕಳೆದುಕೊಂಡ ಘಟನೆ ಹುಬ್ಬಳ್ಳಿಯ ಕಿಮ್ಸ್ ಹಿಂಭಾಗ ಪ್ರವೇಶ ದ್ವಾರದ ರೈಲ್ವೆ ಮಾರ್ಗದಲ್ಲಿ ಗುರುವಾರ ನಡೆದಿದೆ.
ಶಾಲಿಮಾರ್- ವಾಸ್ಕೋಡಿಗಾಮಾ ರೈಲಿಗೆ ಹೆಗ್ಗೇರಿ ನಿವಾಸಿಯೊರ್ವ ಸಿಲುಕಿದ್ದು, ರೈಲು ಹುಬ್ಬಳ್ಳಿ ನಿಲ್ದಾಣದಿಂದ ಹೊರಟ ನಾಲ್ಕೈದು ನಿಮಿಷದಲ್ಲಿ ಈ ಘಟನೆ ನಡೆದಿದೆ.
ರೈಲು ಚಲಿಸುತ್ತಿದ್ದ ಹಳಿ ಮೇಲೆ ವ್ಯಕ್ತಿ ನಿಂತಿರುವುದನ್ನು ಲೋಕೋ ಪೈಲೆಟ್ ಗಮನಿಸಿ ಹಾರ್ನ್ ಮಾಡಿದ್ದಾರೆ. ಆದರೆ ವ್ಯಕ್ತಿ ಹಳಿಯ ಮೇಲಿಂದ ಆಚೆ ಸರಿಯದೇ ಅಲ್ಲೇ ನಿಂತಿದ್ದಾನೆ. ಕೂಡಲೇ ಎಚ್ಚೆತ್ತುಕೊಂಡ ರೈಲ್ವೆ ಸಿಬ್ಬಂದಿ ಚಲಿಸುತ್ತಿದ್ದ ರೈಲನ್ನು ನಿಲ್ಲಿಸಿದ್ದಾರೆ.
ಎಂಜಿನ್ ಹಾಗೂ ಮೂರ್ನಾಲ್ಕು ಬೋಗಿಗಳು ಕಾಲ ಮೇಲೆ ಹರಿದ ಕಾರಣ ಒಂದು ಕಾಲು ಸಂಪೂರ್ಣ ತುಂಡಾಗಿದ್ದು, ಇನ್ನೊಂದು ಕಾಲು ಅರ್ಧ ತುಂಡಾಗಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ.
ಇದನ್ನೂ ಓದಿ:ಮಂಗಳೂರು: ಡಿವೈಡರ್ ದಾಟಿ ಟ್ರಕ್ ಗೆ ಗುದ್ದಿದ ಕಾರು; ಓರ್ವ ಬಲಿ
ಆತ್ಮಹತ್ಯೆ ಶಂಕೆ: ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ವ್ಯಕ್ತಿಯನ್ನು ಪರಿಶೀಲಿಸಿದಾಗ ಕೈ ಮೇಲೆ ನನ್ನ ಹೆಂಡತಿ ನಂಬರ್ ಎಂದು ಬರೆದುಕೊಂಡಿರುವುದನ್ನು ಗಮನಿಸಿ ಕರೆ ಮಾಡಿದಾಗ ಹೆಗ್ಗೇರಿ ನಿವಾಸಿ ಎಂಬುವುದು ಗೊತ್ತಾಗಿದೆ. ಹೀಗಾಗಿ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಮಾನವೀಯತೆ ಮೆರೆದ ಯುವಕರು
ಘಟನೆ ತಿಳಿಯುತ್ತಿದ್ದಂತೆ ಕಿಮ್ಸ್ ಪ್ರವೇಶ ದ್ವಾರದಲ್ಲಿ ಯುವಕರು ಆಗಮಿಸಿ ರೈಲ್ವೆ ಹಳಿಯಡಿ ಸಿಲುಕಿದ ವ್ಯಕ್ತಿಯನ್ನು ಹೊರ ತೆಗೆದು ತುಂಡಾಗಿ ಬಿದ್ದಿದ್ದ ಎರಡು ಕಾಲುಗಳ ಸಮೇತ ಆಸ್ಪತ್ರೆಗೆ ಸಾಗಿಸಿದ್ದಾರೆ.