IPL 2023: ಮರಳಿ ಅಗ್ರಸ್ಥಾನ ಅಲಂಕರಿಸಿದ ಗುಜರಾತ್: ಜಯ ತಂದಿತ್ತ ವಿಜಯ್ ಶಂಕರ್
Team Udayavani, Apr 30, 2023, 6:18 AM IST
ಕೋಲ್ಕತಾ: ಕೋಲ್ಕತಾ ನೈಟ್ರೈಡರ್ ತಂಡವನ್ನು ಅವರದೇ ಈಡನ್ ಗಾರ್ಡನ್ಸ್ ಅಂಗಳದಲ್ಲಿ 7 ವಿಕೆಟ್ಗಳಿಂದ ಮಣಿಸಿದ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮರಳಿ ಅಗ್ರಸ್ಥಾನ ಅಲಂಕರಿಸಿದೆ.
ಪ್ರತಿಕೂಲ ಹವಾಮಾನದಿಂದ ವಿಳಂಬವಾಗಿ ಆರಂಭಗೊಂಡ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್ 7 ವಿಕೆಟಿಗೆ 179 ರನ್ ಪೇರಿಸಿತು. ತವರಿನ ಅಂಗಳದಲ್ಲಿ ಈ ಸ್ಕೋರ್ ನಿರೀಕ್ಷೆಗೂ ಕಡಿಮೆಯಾಗಿತ್ತು. ದಿಟ್ಟ ರೀತಿಯಲ್ಲಿ ಜವಾಬಿತ್ತ ಗುಜರಾತ್ 17.5 ಓವರ್ಗಳಲ್ಲಿ ಮೂರೇ ವಿಕೆಟಿಗೆ 180 ರನ್ ಬಾರಿಸಿತು. ಇದರೊಂದಿಗೆ ಮೊದಲ ಸುತ್ತಿನಲ್ಲಿ ಅನುಭವಿಸಿದ 3 ವಿಕೆಟ್ ಸೋಲಿಗೆ ಸೇಡು ತೀರಿಸಿಕೊಂಡಿತು. ಜತೆಗೆ 2023ರ ಐಪಿಎಲ್ನಲ್ಲಿ 6 ಪಂದ್ಯಗಳನ್ನು ಗೆದ್ದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು.
179 ರನ್ ಚೇಸಿಂಗ್ ವೇಳೆ ಗುಜರಾತ್ ಯಾವುದೇ ರೀತಿಯ ಒತ್ತಡಕ್ಕೆ ಸಿಲುಕಲಿಲ್ಲ. ವೃದ್ಧಿಮಾನ್ ಸಾಹಾ (10) ಅವರನ್ನು ಬೇಗನೇ ಕಳೆದುಕೊಂಡರೂ ಮತ್ತೋರ್ವ ಆರಂಭಕಾರ ಶುಭಮನ್ ಗಿಲ್, ಮಧ್ಯಮ ಕ್ರಮಾಂಕದ ಆಟಗಾರರಾದ ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ನಾಯಕ ಹಾರ್ದಿಕ್ ಪಾಂಡ್ಯ ಸೇರಿಕೊಂಡು ಕೋಲ್ಕತಾ ಬೌಲರ್ಗಳ ಮೇಲೆ ಆಕ್ರಮಣಗೈಯುತ್ತ ಹೋದರು.
ಇವರಲ್ಲಿ ವಿಜಯ್ ಶಂಕರ್ ಆಟ ಅತ್ಯಂತ ಸ್ಫೋಟಕವಾಗಿತ್ತು. 24 ಎಸೆತ ಎದುರಿಸಿದ ಅವರು 51 ರನ್ ಬಾರಿಸಿ ಅಜೇಯರಾಗಿ ಉಳಿದರು. ಸಿಡಿಸಿದ್ದು 5 ಸಿಕ್ಸರ್, 2 ಫೋರ್. ಮಿಲ್ಲರ್ 18 ಎಸೆತಗಳಿಂದ ಅಜೇಯ 32 ರನ್ (2 ಬೌಂಡರಿ, 2 ಸಿಕ್ಸರ್), ಗಿಲ್ 35 ಎಸೆತಗಳಿಂದ 49 ರನ್ (5 ಬೌಂಡರಿ) ಹೊಡೆದರು. ಪಾಂಡ್ಯ ಕೊಡುಗೆ 26 ರನ್.
ಗುಜರಾತ್ಗೆ ನಿಯಂತ್ರಣ ಹೇರಲು ಕೋಲ್ಕತಾದ ಯಾವ ಬೌಲರ್ಗಳಿಗೂ ಸಾಧ್ಯವಾಗಲಿಲ್ಲ. ಒಂದೇ ಓವರ್ನಲ್ಲಿ ವೆಂಕಟೇಶ್ ಅಯ್ಯರ್ ಮತ್ತು ನಿತೀಶ್ ರಾಣಾ ವಿಕೆಟ್ ಕೆಡವಿದ ಜೋಶುವ ಲಿಟ್ಲ ಅವರಿಗೆ ಪಂದ್ಯಶ್ರೇಷ್ಠ ಗೌರವ ಒಲಿಯಿತು.
ಆಧಾರವಾದ ಗುರ್ಬಜ್
ಕೋಲ್ಕತಾ ಸರದಿಯನ್ನು ಆಧರಿಸಿ ನಿಂತವರು ಆರಂಭಕಾರ ರೆಹಮಾನುಲ್ಲ ಗುರ್ಬಜ್. ಬೆನ್ನುನೋವಿನಿಂದಾಗಿ ಜೇಸನ್ ರಾಯ್ ಹೊರಗುಳಿದ ಕಾರಣ ಗುರ್ಬಜ್ ಅವಕಾಶ ಪಡೆದರು. ಇದನ್ನು ಚೆನ್ನಾಗಿಯೇ ಬಳಸಿಕೊಂಡು 81 ರನ್ ಬಾರಿಸಿದರು. ಎನ್. ಜಗದೀಶನ್ (19), ಭಡ್ತಿ ಪಡೆದು ಬಂದ ಶಾದೂìಲ್ ಠಾಕೂರ್ (0) ಬಹಳ ಬೇಗ ಪೆವಿಲಿಯನ್ ಸೇರಿಕೊಂಡ ಕಾರಣ ಕೆಕೆಆರ್ ಒತ್ತಡಕ್ಕೆ ಸಿಲುಕಿತ್ತು. ವೆಂಕಟೇಶ್ ಅಯ್ಯರ್ (11), ನಾಯಕ ನಿತೀಶ್ ರಾಣ (4) ಔಟಾಗುವುದನ್ನೂ ಗುರ್ಬಜ್ ಅಸಹಾಯಕರಾಗಿ ಕಾಣುತ್ತ ನಿಲ್ಲಬೇಕಾಯಿತು. 11ನೇ ಓವರ್ ವೇಳೆ 88 ರನ್ನಿಗೆ ಕೆಕೆಆರ್ನ 4 ಪ್ರಮುಖ ವಿಕೆಟ್ ಹಾರಿ ಹೋಯಿತು.
ರೆಹಮಾನ್ ಗುರ್ಬಜ್ 16ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡು ಗುಜರಾತ್ ಬೌಲಿಂಗ್ ಮೇಲೆ ಪ್ರಹಾರ ನಡೆಸುತ್ತ ಹೋದರು. ಶತಕದ ನಿರೀಕ್ಷೆಯನ್ನೂ ಮೂಡಿಸಿದರು. ಆದರೆ ಈ ಅಫ್ಘಾನ್ ಕ್ರಿಕೆಟಿಗನ ಆಟ ಅಫ್ಘಾನ್ ಜೋಡಿಯಿಂದಲೇ ಕೊನೆಗೊಂಡದ್ದು ಕಾಕತಾಳೀಯ. ನೂರ್ ಅಹ್ಮದ್ ಎಸೆತವನ್ನು ರಶೀದ್ ಖಾನ್ಗೆ ಕ್ಯಾಚ್ ನೀಡಿದ ಗುರ್ಬಜ್ ನಿರಾಶರಾಗಿ ಮರಳಬೇಕಾಯಿತು.
ಗುರ್ಬಜ್ ಪ್ರಚಂಡ ಬೀಸುಗೆಯಲ್ಲಿ 81 ರನ್ ಕೊಡುಗೆ ಸಲ್ಲಿಸಿದರು. ಸಿಡಿಸಿದ್ದು 7 ಸಿಕ್ಸರ್ ಹಾಗೂ 5 ಬೌಂಡರಿ. 81ರಲ್ಲಿ 62 ರನ್ ಬೌಂಡರಿ ಹೊಡೆತಗಳ ಮೂಲಕವೇ ಬಂತು.
ಡೆತ್ ಓವರ್ ಆರಂಭವಾಗುತ್ತಲೇ ಗುರ್ಬಜ್ ನಿರ್ಗಮಿಸಿದ್ದು ಕೆಕೆಆರ್ಗೆ ಹಿನ್ನಡೆಯಾಗಿ ಪರಿಣಮಿಸಿತು. ಕಳೆದ ಸಲ ಗುಜರಾತ್ ಚಳಿ ಬಿಡಿಸಿದ್ದ ರಿಂಕು ಸಿಂಗ್ ಅವರಿಗೆ ಈ ಬಾರಿ ಸಿಡಿದು ನಿಲ್ಲಲಾಗಲಿಲ್ಲ. 19 ರನ್ನಿಗೆ ಅವರು 20 ಎಸೆತ ತೆಗೆದುಕೊಂಡರು. ಇದರಲ್ಲಿ ಒಂದೇ ಸಿಕ್ಸರ್ ಸೇರಿತ್ತು.
ರಸೆಲ್ಗೆ ಅವಳಿ ಸಂಭ್ರಮ
ಆಲ್ರೌಂಡರ್ ಆ್ಯಂಡ್ರೆ ರಸೆಲ್ ಇಂದು ಅವಳಿ ಸಂಭ್ರಮದಲ್ಲಿದ್ದರು. 34ನೇ ಜನ್ಮದಿನದ ಸಡಗರದ ಜತೆಗೆ ಕೆರಿಬಿಯನ್ ಕ್ರಿಕೆಟಿಗನಿಗೆ ಇದು 100ನೇ ಐಪಿಎಲ್ ಪಂದ್ಯವಾಗಿತ್ತು. ಇದರ ಸವಿನೆನಪಿಗಾಗಿ ಈಡನ್ ಗಾರ್ಡನ್ಸ್ನಲ್ಲಿ ಗಂಟೆ ಬಾರಿಸಿ ಪಂದ್ಯದ ಆರಂಭವನ್ನು ಸಾರುವ ಅವಕಾಶವನ್ನು ರಸೆಲ್ಗೆ ಕಲ್ಪಿಸಲಾಯಿತು.
ರಸೆಲ್ ನೂರರ ಖುಷಿಯನ್ನು ಸಾಧ್ಯವಾದಷ್ಟು ಮಟ್ಟಿಗೆ ಅನುಭವಿಸಿದರು. ಬ್ಯಾಟಿಂಗ್ ವೇಳೆ ಕೇವಲ 19 ಎಸೆತಗಳಿಂದ 34 ರನ್ ಮಾಡಿದರೆ (2 ಬೌಂಡರಿ, 3 ಸಿಕ್ಸರ್), ಬೌಲಿಂಗ್ ದಾಳಿಗಿಳಿದು ಸಾಹಾ ವಿಕೆಟ್ ಕೀಳುವಲ್ಲಿ ಯಶಸ್ವಿಯಾದರು. ಆದರೆ ಗೆಲುವಿನ ಉಡುಗೊರೆ ಮಾತ್ರ ಅವರಿಗೆ ದಕ್ಕಲಿಲ್ಲ.
ಗುಜರಾತ್ ಪರ ಶಮಿ 3, ಜೋಶುವ ಲಿಟ್ಲ ಮತ್ತು ನೂರ್ ಅಹ್ಮದ್ ತಲಾ 2 ವಿಕೆಟ್ ಉರುಳಿಸಿದರು. ಪ್ರಧಾನ ಸ್ಪಿನ್ನರ್ ರಶೀದ್ ಖಾನ್ ಇಲ್ಲಿ ಘೋರ ವೈಫಲ್ಯ ಕಂಡರು. ಅವರ 4 ಓವರ್ಗಳಲ್ಲಿ 54 ರನ್ ಸೋರಿ ಹೋಯಿತು.