ಯುವತಿಗೆ ಕಿರುಕುಳ ನೀಡಿದ್ದನ್ನು ಪ್ರಶ್ನಿಸಿದ್ದಕ್ಕೆ ಕೊಲೆ
Team Udayavani, Jun 27, 2023, 5:05 AM IST
ಪೆರ್ಲ: ಕಜಂಪಾಡಿಯ ಕಾಲನಿಯೊಂದರಲ್ಲಿ ಕಲಹದ ನಡುವೆ ಯುವಕನೋರ್ವ ಗಂಭೀರ ಕತ್ತಿಯೇಟಿಗೆ ಮೃತಪಟ್ಟ ಘಟನೆ ನಡೆದಿದೆ. ಮಧೂರು ಅರಂತೋಡಿನ ಸಂಜೀವ ಅವರ ಪುತ್ರ ಸಂದೀಪ್ (30) ಸಾವಿಗೀಡಾದವರು.
ಕಜಂಪಾಡಿ ಕಾಲನಿಯ ಯುವತಿಯೋರ್ವಳಿಗೆ ಅದೇ ಕಾಲನಿಯ ನೆರೆಮನೆಯ ಯುವಕ ದೂರವಾಣಿಯಲ್ಲಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಆಕೆಯ ದೊಡ್ಡಮ್ಮನ ಮಗ ಸಂದೀಪ್ ರವಿವಾರ ಕಜಂಪಾಡಿಗೆ ಆಗಮಿಸಿ ಕಾಲನಿಯ ನಿವಾಸಿಗಳಾದ ಪ್ರಜಿತ್ ಹಾಗೂ ಪವನ್ರಾಜ್ ಅವರೊಂದಿಗೆ ಮಾತಿಗೆ ಮಾತು ಬೆಳೆಸಿ ಯದ್ವಾತದ್ವಾ ಹೊಡೆದಿದ್ದನೆನ್ನಲಾಗಿದೆ. ಈ ಸಂದರ್ಭದಲ್ಲಿ ಪವನ್ರಾಜ್ ತನ್ನ ಕೈಯಲ್ಲಿದ್ದ ಕತ್ತಿಯಿಂದ ಸಂದೀಪ್ಗೆ ಕಡಿದು ಗಂಭೀರವಾಗಿ ಗಾಯಗೊಳಿಸಿದ್ದ. ತತ್ಕ್ಷಣ ಸ್ಥಳೀಯರು ಸೇರಿ ಸಂದೀಪ್ನನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಹಾಗೂ ಪ್ರಜಿತ್ ಮತ್ತು ಪವನ್ರಾಜ್ ಅವರನ್ನು ಕಾಸರಗೋಡು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.
ಸೋಮವಾರ ಬೆಳಗ್ಗೆ ಚಿಕಿತ್ಸೆಗೆ ಸ್ಪಂದಿಸದೆ ಸಂದೀಪ್ ಸಾವಿಗೀಡಾದರು.
ಇದೇ ವೇಳೆ ಆರೋಪಿ ಪವನ್ರಾಜ್ (24)ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮೃತ ಸಂದೀಪ್ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಇತ್ತೀಚೆಗೆ ಊರಿಗೆ ಬಂದಿದ್ದರು. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.