ಯಾರೂ ಕ್ಷೇತ್ರ ಉಲ್ಲೇಖ ಮಾಡುವಂತಿಲ್ಲ: ಕಟೀಲ್
- ಬಳ್ಳಾರಿ ಗ್ರಾಮೀಣದಲ್ಲಿ ಸ್ಪರ್ಧೆ ರಾಮುಲು ಅಪೇಕ್ಷೆ ಅಷ್ಟೇ
Team Udayavani, Mar 17, 2023, 6:35 AM IST
ಕೂಡ್ಲಿಗಿ: ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಸಚಿವ ಶ್ರೀರಾಮುಲು ಹೇಳಿರುವುದು ಅವರ ಅಭಿಪ್ರಾಯ ಮಾತ್ರ. ಅಲ್ಲಿ ಸ್ಪರ್ಧಿಸುವ ಅಪೇಕ್ಷೆ ವ್ಯಕ್ತಪಡಿಸಿದ್ದಾರಷ್ಟೇ. ಮುಂದಿನದು ಹೈಕಮಾಂಡ್ ನಿರ್ಧರಿಸುತ್ತದೆ. ಹೀಗಾಗಿ ಯಾರೂ ಕ್ಷೇತ್ರ ಉಲ್ಲೇಖ ಮಾಡುವ ಹಾಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ ಎಚ್ಚರಿಕೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಯಾರು ಎಲ್ಲಿ ಸ್ಪರ್ಧೆ ಮಾಡಬೇಕೆಂದು ಸ್ಕ್ರೀನಿಂಗ್ ಕಮಿಟಿ ನಿರ್ಧಾರ ಮಾಡುತ್ತದೆ. ಹೀಗಾಗಿ ಯಾರೂ ಕ್ಷೇತ್ರ ಉಲ್ಲೇಖ ಮಾಡುವ ಹಾಗಿಲ್ಲ. ಬೇರೆ ಬೇರೆ ಹೇಳಿಕೆಗಳಿಂದ ಸಚಿವ ಸೋಮಣ್ಣ ಅವರಿಗೆ ನೋವಾಗಿದೆ. ಹೀಗಾಗಿ ಬಹಳ ಬೇಸರದಿಂದ ಕಣ್ಣೀರು ಹಾಕಿದ್ದಾರೆ. ರಾಜಕೀಯ ಜೀವನದಲ್ಲಿ ಅವರು ಬಹಳ ವರ್ಷ ಕೆಲಸ ಮಾಡಿದ್ದಾರೆ. ಭಾವನಾತ್ಮಕವಾಗಿ ಮಾತನಾಡಿದ್ದಾರೆಯೇ ಹೊರತು ಯಾವುದೇ ಕಾರಣಕ್ಕೂ ಸೋಮಣ್ಣ ಬಿಜೆಪಿ ಬಿಡುವುದಿಲ್ಲ. ಡಿಕೆಶಿ ಕರೆಂಟ್ ಮಂತ್ರಿ ಇದ್ದಾಗ, ಕರೆಂಟ್ ಬೇಕು ಅಂದವರನ್ನು ಅರೆಸ್ಟ್ ಮಾಡಿದ್ದರು. ದೇಶಕ್ಕೆ ಅಪಮಾನ ಮಾಡುವವರು ದೇಶದ ಬಗ್ಗೆ ಮಾತನಾಡುತ್ತಾರೆ ಎಂದು ರಾಹುಲ್ ವಿರುದ್ಧ ಹರಿಹಾಯ್ದರು.
ರಾಜ್ಯ ವಿಧಾನಸಭಾ ಚುನಾವಣೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆಯೇ ಕಾಂಗ್ರೆಸ್ನಲ್ಲಿ ರಂಪಾಟ, ಕಣ್ಣೀರು, ಜಗಳ ಆರಂಭವಾಗುತ್ತದೆ. ಬಿಜೆಪಿಯವರಿಗೆ ಕಾಂಗ್ರೆಸ್ನಷ್ಟು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಅವಸರ ಇಲ್ಲ.
-ನಳಿನ್ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ