ಆಪರೇಷನ್ ತ್ರಿನೇತ್ರ: ನಾಲ್ವರು ಉಗ್ರರ ಹತ್ಯೆ
Team Udayavani, Jul 19, 2023, 7:12 AM IST
ಪೂಂಛ್: ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಮಂಗಳವಾರ ಭದ್ರತಾ ಪಡೆಗಳು ಶಸ್ತ್ರಸಜ್ಜಿತ ನಾಲ್ವರು ವಿದೇಶಿ ಉಗ್ರರನ್ನು ಹತ್ಯೆಗೈದಿವೆ. ಕೆಲವು ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿ ಬಳಿಕ ಉಗ್ರರ ಸಂಹಾರಗೈಯ್ಯುವಲ್ಲಿ ಯೋಧರು ಯಶಸ್ವಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ನಡೆಯಬಹುದಾಗಿದ್ದ ಸಂಭಾವ್ಯ ವಿಧ್ವಂಸಕ ಕೃತ್ಯವನ್ನು ತಡೆದಂತಾಗಿದೆ.
ಪೂಂಛ್ನ ಕೃಷ್ಣ ಘಾಟಿ ವಲಯದಲ್ಲಿನ ಎಲ್ಒಸಿಯಲ್ಲಿ ಉಗ್ರರ ಒಳನುಸುಳುವಿಕೆ ಯತ್ನವನ್ನು ಸೇನೆ ವಿಫಲಗೊಳಿಸಿದ ಮಾರನೇ ದಿನವೇ ಈ ಘಟನೆ ನಡೆದಿದೆ. ಏ.20ರಂದು ಪೂಂಛ್ನ ಮೆಂಧಾರ್ನಲ್ಲಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿ ಐವರು ಯೋಧರ ಸಾವಿಗೆ ಉಗ್ರರು ಕಾರಣವಾಗಿದ್ದರು. ಇದಾದ ನಂತರ ಉಗ್ರರ ಸಂಹಾರಕ್ಕೆಂದೇ ಭದ್ರತಾ ಪಡೆಗಳು “ಆಪರೇಷನ್ ತ್ರಿನೇತ್ರ’ವನ್ನು ಆರಂಭಿಸಿದ್ದವು.
ಮಂಗಳವಾರ ಉಗ್ರರ ಚಲನವಲನಗಳ ನಿಖರ ಸುಳಿವಿನ ಹಿನ್ನೆಲೆಯಲ್ಲಿ ಸಿಂದರಾಹ್ನಲ್ಲಿ ಕಾರ್ಯಾಚರಣೆ ತೀವ್ರಗೊಳಿಸಲಾಗಿತ್ತು. ಈ ವೇಳೆ ಅರಣ್ಯದಲ್ಲಿ ಅವಿತಿದ್ದ ಉಗ್ರರು ಏಕಾಏಕಿ ಗುಂಡಿನ ಮಳೆಗರೆಯಲು ಆರಂಭಿಸಿದರು. ಸ್ವಲ್ಪ ಹೊತ್ತು ಎರಡೂ ಕಡೆ ಗುಂಡಿನ ಚಕಮಕಿ ನಡೆದಿದ್ದು, ಕೊನೆಗೆ ನಾಲ್ವರು ಉಗ್ರರನ್ನು ಹತ್ಯೆಗೈಯ್ಯುವಲ್ಲಿ ಯೋಧರು ಯಶಸ್ವಿಯಾದರು ಎಂದು ಸೇನಾ ಮೂಲಗಳು ತಿಳಿಸಿವೆ.