ಚಿಕಿತ್ಸೆ ಸಿಗದೆ ಪರದಾಡಿದ ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ ಪಾಲಿಕೆ ಸದಸ್ಯ
Team Udayavani, Jul 14, 2020, 10:26 PM IST
ಬೆಂಗಳೂರು : ನಗರದಲ್ಲಿ ಕೋವಿಡ್ ಸೋಂಕಿತರ ಜೊತೆಗೆ ಕೋವಿಡ್ ಸೋಂಕು ಇಲ್ಲದವರಿಗೂ ಸಕಾಲದಲ್ಲಿ ಚಿಕಿತ್ಸೆ ಲಭ್ಯವಾಗುತ್ತಿಲ್ಲ.
ಮಹಾಲಕ್ಷ್ಮಿಲೇಔಟ್ ಕಮಲಾನಗರದ ನಿವಾಸಿಯಾಗಿರುವ ಗರ್ಭಿಣಿಯೊಬ್ಬರು ಸಕಾಲದಲ್ಲಿ ಚಿಕಿತ್ಸೆ ಸಿಗದೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿ ಕೊನೆಗೆ ಪಾಲಿಕೆ ಸದಸ್ಯರೊಬ್ಬರು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ.
ಈ ಕುರಿತು ಮಾತನಾಡಿದ ಪಾಲಿಕೆ ಸದಸ್ಯ ಎಂ. ಶಿವರಾಜ್ ಅವರು ಕಮಲಾನಗರದ ನಿವಾಸಿಯಾಗಿರುವ ಗರ್ಭಿಣಿ ಚಿಕಿತ್ಸೆಗಾಗಿ ಮೊದಲು ಕೆ.ಸಿ. ಜನರಲ್ ಆಸ್ಪತ್ರೆಗೆ ತೆರಳಿದ್ದಾರೆ ಆದರೆ ಆಸ್ಪತ್ರೆಯಲ್ಲಿ ಹಾಸಿಗೆ ಇಲ್ಲ ಎಂಬ ಕಾರಣ ಹೇಳಿ ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ, ಅಲ್ಲಿಂದ ಮತ್ತೆ ರಾಜಾಜಿನಗರದ ನಾಗರಾಜ್ ಹೆರಿಗೆ ಆಸ್ಪತ್ರೆಗೆ ಹೋಗಿದ್ದ ಮಹಿಳೆಗೆ ಅಲ್ಲಿಯೂ ಹಾಸಿಗೆ ಇಲ್ಲ ಎಂದು ಹೇಳಿ ವಾಪಸ್ ಕಳುಹಿಸಲಾಗಿದೆ. ಈ ಸಂದರ್ಭ ತುಂಬು ಗರ್ಭಿಣಿಯೊಬ್ಬರು ನನಗೆ ಕರೆ ಮಾಡಿ ಸಮಸ್ಯೆ ಹೇಳಿಕೊಂಡರು ಕೂಡಲೇ ಅವರನ್ನು ಶ್ರೀರಾಂಪುರ ಹೆರಿಗೆ ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದು ಹೇಳಿದ್ದಾರೆ.
ಜನರಿಗೆ ಸಕಾಲದಲ್ಲಿ ಚಿಕಿತ್ಸೆಗೆ ಸರ್ಕಾರ ಮತ್ತು ಪಾಲಿಕೆ ಆಡಳಿತ ಪಕ್ಷ ಕ್ರಮವಹಿಸಬೇಕು” ಎಂದು ಪಾಲಿಕೆ ಸದಸ್ಯ ಎಂ. ಶಿವರಾಜ್ ಅವರು ಆಗ್ರಹಿಸಿದ್ದಾರೆ.