ಎಂಇಎಸ್ ನಿಷೇಧಿಸಿದರೆ ಸಮಸ್ಯೆ ಬಗೆಹರಿಯುವುದಿಲ್ಲ :ಬಿಜೆಪಿ ಸಂಸದ ಕಡಾಡಿ
Team Udayavani, Dec 23, 2021, 5:42 PM IST
ಬೆಳಗಾವಿ: ‘ಮಹಾರಾಷ್ಟ್ರ ಏಕೀಕರಣ ಸಮಿತಿ ನಿಷೇಧ ಮಾಡಿದರೆ ಸಮಸ್ಯೆ ಬಗೆಹರಿಯುವದಿಲ್ಲ. ಬದಲಾಗಿ ಅವರ ಮನಪರಿವರ್ತನೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಗುರುವಾರ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ‘ಸಮಿತಿ ನಿಷೇಧ ಮಾಡಿದ ಮಾತ್ರಕ್ಕೆ ಅದರ ಸದಸ್ಯರು ಬದಲಾಗುವದಿಲ್ಲ. ಒಂದು ಸಂಘಟನೆ ನಿಷೇಧ ಮಾಡಿದರೆ ಮತ್ತೊಂದು ಸಂಘಟನೆ ಕಟ್ಟುತ್ತಾರೆ. ಹೀಗಾಗಿ ನಿಷೇಧದ ಬದಲು ಅವರ ಮನಸ್ಸು ಪರಿವರ್ತನೆ ಮಾಡಬೇಕಾಗಿದೆ’ ಎಂದರು.
‘ಎಂಇಎಸ್ ನಲ್ಲಿ ಎಲ್ಲ ಸಮಾಜದ ಜನರಿದ್ದಾರೆ. ಆದರೆ ಕೆಲವರು ಮಾತ್ರ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಮಿತಿಯನ್ನು ಜೀವಂತವಾಗಿಟ್ಟುಕೊಂಡಿದ್ದಾರೆ. ಬೆಂಗಳೂರಿನಿಂದ ಕೆಲವರು ಬಂದು ಹೇಳಿಕೆ ನೀಡಿ ಹೋಗುತ್ತಾರೆ. ಕೇವಲ ಹೇಳಿಕೆಗಳಿಂದ ನಾಡದ್ರೋಹಿ ಚಟುವಟಿಕೆ ಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.
‘ಮತಾಂತರ ನಿಷೇಧ ಕಾಯ್ದೆ ಅರ್ ಎಸ್ ಎಸ್ ಕಾರ್ಯಸೂಚಿ’ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿ, ‘ಇದಕ್ಕೂ ಅರ್ ಎಸ್ ಎಸ್ ಗೂ ಯಾವುದೇ ಸಂಬಂಧ ಇಲ್ಲ. ಪದೆ ಪದೆ ಅವರ ಹೆಸರು ಪ್ರಸ್ತಾಪಿಸುವ ಮೂಲಕ ಕಾಂಗ್ರೆಸ್ ತನ್ನ ಬೌದ್ದಿಕ ದಿವಾಳಿತನ ತೋರಿಸುತ್ತಿದೆ’ ಎಂದು ತಿರುಗೇಟು ನೀಡಿದರು.