ಸೋನಿಯಾ ಗಾಂಧಿ ಜತೆ ದೇವೇಗೌಡ ಮಾತುಕತೆ: ಪ್ರಾದೇಶಿಕ ಪಕ್ಷವನ್ನು ಬೆಂಬಲಿಸಿ ಎಂದ ರೇವಣ್ಣ
Team Udayavani, May 31, 2022, 12:28 PM IST
ಬೆಂಗಳೂರು: ತಮ್ಮ ಅಭ್ಯರ್ಥಿಯನ್ನು ಬೆಂಬಲಿಸಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ.
ಇದರಿಂದ ರಾಜ್ಯಸಭಾ ಚುನಾವಣೆ ಈಗ ಮತ್ತೆ ಕುತೂಹಲ ಸೃಷ್ಟಿಸಿದೆ. ಜೆಡಿಎಸ್ ಗೆ ಕೇವಲ ಹದಿಮೂರು ಮತಗಳ ಅವಶ್ಯಕತೆ ಇರುವುದರಿಂದ ನಿಮ್ಮ ಹೆಚ್ಚುವರಿ ಮತವನ್ನು ತಮಗೆ ನೀಡುವಂತೆ ಜೆಡಿಎಸ್ ಮನವಿ ಮಾಡಿದೆ. ದೇವೇಗೌಡರ ಜತೆಗೆ ಮಾಜಿ ಸಿಎಂ ಕುಮಾರಸ್ವಾಮಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಜತೆ ಮಾತುಕತೆ ನಡೆಸಿದ್ದಾರೆ.
ಇಷ್ಟಾದ ಮೇಲೂ ಕಾಂಗ್ರೆಸ್ ಎರಡನೇ ಅಭ್ಯರ್ಥಿ ಹಾಕಿರುವುದರ ಉದ್ದೇಶ ಏನು ? ಎಂದು ಜೆಡಿಎಸ್ ನಾಯಕರು ಪ್ರಶ್ನಿಸಿದ್ದಾರೆ.
ಬಿಜೆಪಿ ಗೆಲ್ಲಿಸಬೇಕೆಂದು ಕಾಂಗ್ರೆಸ್ ಪಣತೊಟ್ಟಂತೆ ಕಾಣುತ್ತಿದೆ. ಸಿದ್ದರಾಮಯ್ಯ ಹಾಗೂ ಉಳಿದ ಕಾಂಗ್ರೆಸ್ ನಾಯಕರ ಮಧ್ಯೆ ಹೊಂದಾಣಿಕೆ ಇಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಟೀಕಿಸಿದ್ದಾರೆ.
ಇದನ್ನೂ ಓದಿ:ಸಿದ್ದರಾಮಯ್ಯ ಒಂದು ವಾರ ಸುಮ್ಮನಿದ್ದರೆ ರಾಜ್ಯ ಶಾಂತವಾಗಿರುತ್ತದೆ: ಪ್ರತಾಪ್ ಸಿಂಹ
ಹೆಚ್.ಡಿ ರೇವಣ್ಣ ಮಾತನಾಡಿ, ನಮ್ಮ ಬಳಿ 32 ಮತವಿದೆ. ಎರಡು ರಾಷ್ಟ್ರೀಯ ಪಕ್ಷಗಳಿವೆ. ಒಂದು ಕೋಮುವಾದಿ ಪಕ್ಷ, ಮತ್ತೊಂದು ಕೋಮುವಾದದ ವಿರುದ್ಧವಿರುವ ರಾಷ್ಟ್ರೀಯ ಪಕ್ಷ. ನಮ್ಮ ಅಭ್ಯರ್ಥಿ ಕುಪೇಂದ್ರ ರೆಡ್ಡಿಯನ್ನು ಕಣಕ್ಕಿಳಿಸಿದ್ದೇವೆ. ನಮ್ಮ ಅಭ್ಯರ್ಥಿ ಬೆಂಬಲಿಸಲು ಸೋನಿಯಾಗಾಂಧಿ ಜೊತೆ ಚರ್ಚೆ ಮಾಡಿದ್ದೇವೆ. ಕುಪೇಂದ್ರ ರೆಡ್ಡಿ ಕೂಡ ಡಿಕೆಶಿ ಅವರನ್ನ ಭೇಟಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಅವಕಾಶ ಕೇಳಿದ್ದೇವೆ. ಆದರೆ ನಿನ್ನೆ ಕಾಂಗ್ರೆಸ್ ದಿಢೀರಾಗಿ ತಮ್ಮ ಬಳಿ ಅಗತ್ಯ ಮತ ಇಲ್ಲದಿದ್ದರೂ ಎರಡನೇ ಅಭ್ಯರ್ಥಿ ಹಾಕಿದ್ದಾರೆ ಎಂದರು.
ಶುಕ್ರವಾರವೇ ಸೋನಿಯಾ ಗಾಂಧಿ ಜೊತೆ ದೇವೇಗೌಡರು ಮಾತನಾಡಿದ್ದರು. ಜೆಡಿಎಸ್ ಮತವೇ ಬೇಡ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಪ್ರಾದೇಶಿಕ ಪಕ್ಷವನ್ನ ಬೆಂಬಲಿಸಿ, ಕೋಮುವಾದಿ ಪಕ್ಷವನ್ನು ದೂರ ಇಡಲು ಕಾಂಗ್ರೆಸ್ ನಮ್ಮನ್ನ ಬೆಂಬಲಿಸಬೇಕು ಎಂದು ಸೋನಿಯಾ, ಖರ್ಗೆ, ಸಿದ್ದರಾಮಯ್ಯ, ಡಿಕೆಶಿ ಅವರಿಗೂ ಮನವಿ ಮಾಡುತ್ತೇನೆ ಎಂದರು.