ಜಾಗದ ಸರ್ವೆಗೆ ನೀವೇ ಬನ್ನಿ ಹೂಗುಚ್ಛ ನೀಡಿ ಸ್ವಾಗತಿಸುವೆ :ಆಯುಕ್ತರಿಗೆ ಸಾ.ರಾ.ಮಹೇಶ್ ಹೇಳಿಕೆ
Team Udayavani, Sep 6, 2021, 12:56 PM IST
ಮೈಸೂರು : ಕಲ್ಯಾಣ ಮಂಟಪದ ಜಾಗ ಒತ್ತುವರಿಯಾಗಿದೆ ಅದರ ಸರ್ವೆ ಕಾರ್ಯ ಆಗಬೇಕಿದೆ ಎಂದ ಭೂಮಾಪನ ಇಲಾಖೆ ಆಯುಕ್ತ ಮನೀಶ್ ಮೌದ್ಗಿಲ್ ವಿರುದ್ಧ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಕೆಂಡಾಮಂಡಲವಾಗಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ನಾನು ಗೊಮ್ಮಟೇಶ್ವರನ ಭಕ್ತ, ಆಂಜನೇಯನ ಭಕ್ತ. ಆದ್ದರಿಂದ ಸರ್ವೇ ಕಮಿಷನರ್ ಆದೇಶವನ್ನು ಸ್ವಾಗತ ಮಾಡುತ್ತೇನೆ. ರೋಹಿಣಿ ಸಿಂಧೂರಿ ಅವರು ಸಾ.ರಾ.ಚೌಲ್ಟ್ರಿ ರಾಜಕಾಲುವೆ ಮೇಲೆ ನಿರ್ಮಾಣವಾಗಿದೆ, ಅದು ಗೋಮಾಳ ಅಂತ ಹೇಳಿದ್ದರು. ನಾನೇ ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಧರಣಿ ಮಾಡಿ ತನಿಖೆಗೆ ಆಗ್ರಹಿಸಿದ್ದೆ. ನನ್ನ ಒತ್ತಡ, ಹೋರಾಟದ ಮೇಲೆ ಸರ್ವೇ ಕಾರ್ಯ ನಡೆದಿತ್ತು.
ಆದರೆ ಈಗ ಸರ್ವೇ ಆಯುಕ್ತರು ಒಂದು ಪತ್ರ ಬರೆದಿದ್ದಾರೆ. ಜೆಡಿಎಲ್ಆರ್ 3-4 ಜಿಲ್ಲೆಗಳ ಹೆಡ್ ಆಗಿರುತ್ತಾರೆ ಪ್ರಾದೇಶಿಕ ಆಯುಕ್ತರಿಗೆ ಜ್ಯುಡಿಷಿಯಲ್ ಪವರ್ ಇರುತ್ತೆ ಎಂದು.
ಇದನ್ನೂ ಓದಿ :ಅನಂತನಾಗ್ ಬರ್ತ್ಡೇಗೆ ‘ವಿಜಯಾನಂದ’ ಲುಕ್ ಹೊರಕ್ಕೆ
ಆರ್ಟಿಸಿ ಎಲ್ಲಿ ತೆಗೆದರೂ ದಾಖಲೆಗಳು ಸಿಗುತ್ತವೆ. ಒಂದು ವೇಳೆ ಚೌಲ್ಟ್ರಿ ಜಾಗದಲ್ಲಿ ಒಂದೇ ಒಂದು ಗುಂಟೆ ಜಾಗ ಒತ್ತುವರಿ ಆಗಿದ್ದರೆ ಅದನ್ನ ರಾಜ್ಯಪಾಲರಿಗೆ ಬರೆದುಕೊಡುವೆ ಅಲ್ಲದೆ ಸಾರ್ವಜನಿಕ ಬದುಕು, ರಾಜಕೀಯ ಬದುಕಿನಿಂದ ನಿವೃತ್ತಿ ತೆಗೆದುಕೊಳ್ಳುವೆ ಎಂದರು.
8 ವರ್ಷದಿಂದ ಅಲ್ಲೇ ಇದ್ದೀರಲ್ಲ, ಎಷ್ಟು ಸಾಗುವಳಿ ದಾಖಲೆ ಕೊಟ್ಟಿದ್ದೀರಿ ಮನೀಶ್ ಮೌದ್ಗಿಲ್ ಅವರೇ ? ಎಂದು ಪ್ರಶ್ನಿಸಿದರು.
ಸಾ.ರಾ.ಕಲ್ಯಾಣ ಮಂಟಪದ ಸುತ್ತ ಸರ್ವೇ ಮಾಡಲು ಅಧಿಕಾರಿಗಳು ಬೇಡ. ಖುದ್ದು ಮನೀಷ್ ಮುದ್ಗಲ್ ಅವರೇ ಬಂದು ಸರ್ವೇ ಮಾಡಲಿ ನಾನು ಬೊಕ್ಕೆ ಹಿಡಿದು ಸ್ವಾಗತಿಸುತ್ತೇನೆ. ರಾಜ ಕಾಲುವೆ ಒತ್ತುವರಿ ಮಾಡಿಲ್ಲ ಇದು ಗೋಮಾಳ ಅಲ್ಲ ಇದಕ್ಕೆ ನಾನು ಈಗಲೂ ಬದ್ದ. ಕಾನೂನು ಪ್ರಕಾರವೇ ಕಲ್ಯಾಣ ಮಂಟಪ ನಿರ್ಮಾಣ ಮಾಡಲಾಗಿದೆ. ಒತ್ತುವರಿಯಾಗಿದ್ದರೆ ಬಂದು ಪರಿಶೀಲನೆ ಮಾಡಿ. ಗೋಮಾಳ ಆಗಿದ್ದರೆ ನಿಮ್ಮ ಬಳಿಯೇ ದಾಖಲೆ ಇದೆ ನೀವೊಬ್ಬ ಪ್ರಾಮಾಣಿಕ ಅಧಿಕಾರಿ ಎಂದು ಹೇಳಿದ್ದಾರೆ.