Wrestling ಅವ್ಯವಸ್ಥೆ ನೇರ್ಪುಗೊಳಿಸಲು ನಾಂದಿಯಾಗಲಿ ಅಮಾನತು ಕ್ರಮ
Team Udayavani, Dec 25, 2023, 5:31 AM IST
ನಾಲ್ಕು ದಿನಗಳ ಹಿಂದೆಯಷ್ಟೇ ಭಾರತೀಯ ಕುಸ್ತಿ ಫೆಡರೇಶನ್ಗೆ ನಡೆದ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ, ಫೆಡರೇಶನ್ನ ಸಾರಥ್ಯ ವಹಿಸಿಕೊಂಡಿದ್ದ ನೂತನ ಅಧ್ಯಕ್ಷ ಸಂಜಯ್ ಸಿಂಗ್ ನೇತೃತ್ವದ ಸಮಿತಿಯನ್ನು ಕೇಂದ್ರ ಕ್ರೀಡಾ ಸಚಿವಾಲಯ ತಾತ್ಕಾಲಿಕವಾಗಿ ಅಮಾನತು ಮಾಡಿದೆ. ದೇಶದ ಕುಸ್ತಿ ರಂಗಕ್ಕೆ ಆವರಿಸಿಕೊಂಡಿದ್ದ ಕರಿಮೋಡ ಚದುರಿ ಮತ್ತೆ ವಿಶ್ವ ಕುಸ್ತಿ ಅಖಾಡದಲ್ಲಿ ದೇಶದ ಕುಸ್ತಿ ಪಟುಗಳು ಮಿಂಚಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದ ದೇಶದ ಕ್ರೀಡಾಪ್ರೇಮಿಗಳಿಗೆ ಈ ಬೆಳವಣಿಗೆ ಭಾರೀ ನಿರಾಸೆ ಮೂಡಿಸಿದೆ.
ಭಾರತೀಯ ಕುಸ್ತಿ ಫೆಡರೇಶನ್ನ ನಿಕಟಪೂರ್ವ ಅಧ್ಯಕ್ಷ, ಸಂಸದ ಬೃಜ್ಭೂಷಣ್ ಶರಣ್ಸಿಂಗ್ ವಿರುದ್ಧ ದೇಶದ ಪ್ರಮುಖ ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಆರೋಪ ಹೊರಿಸಿ, ಅವರ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ ಆರಂಭಿಸಿದಾಗಿನಿಂದ ದೇಶದ ಕುಸ್ತಿ ಅಖಾಡದಲ್ಲಿ ಭಾರೀ ಬಿರುಗಾಳಿ ಎದ್ದಿತ್ತು. ಕ್ರೀಡಾ ಸಚಿವಾಲಯ ಮತ್ತು ಕುಸ್ತಿ ಪಟುಗಳ ನಡುವೆ ಹಲವು ಸುತ್ತಿನ ಮಾತುಕತೆ ನಡೆದ ಬಳಿಕ ಜೂನ್ ಮೊದಲ ವಾರದಲ್ಲಿ ಕುಸ್ತಿಪಟುಗಳು ತಮ್ಮ ಪ್ರತಿಭಟನೆ ಹಿಂಪಡೆದಿದ್ದರು. ಆದರೆ ಡಬ್ಲ್ಯುಎಫ್ಐಗೆ ವಿಶ್ವ ಕುಸ್ತಿ ಫೆಡರೇಶನ್ ನಿಷೇಧ ಹೇರಿದ್ದರಿಂದ ಭಾರತದ ಕುಸ್ತಿಪಟುಗಳು ವಿಶ್ವ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ತಟಸ್ಥರಾಗಿ ಸ್ಪರ್ಧಿಸುವಂತಾಗಿತ್ತು. ಇದರ ನಡುವೆ ಭಾರತೀಯ ಕುಸ್ತಿ ಫೆಡರೇಶನ್ಗೆ ಡಿ. 21ರಂದು ನಡೆದ ಚುನಾವಣೆಯಲ್ಲಿ ಬೃಜ್ಭೂಷಣ್ ಆಪ್ತ ಸಂಜಯ್ ಸಿಂಗ್ ನೇತೃತ್ವದ ಬಣ ಭರ್ಜರಿ ಬಹುಮತದಿಂದ ಜಯಶಾಲಿಯಾಗಿತ್ತು. ಇದು ಈ ಹಿಂದೆ ಪ್ರತಿಭಟನೆ ನಡೆಸಿದ್ದ ಕುಸ್ತಿಪಟುಗಳ ನಿರಾಶೆಗೆ ಕಾರಣವಾಗಿತ್ತಲ್ಲದೆ, ನೂತನವಾಗಿ ಆಯ್ಕೆಯಾದ ಸಮಿತಿಯು ತರಾತುರಿಯಲ್ಲಿ ಕಿರಿಯರ ಅಂದರೆ ಅಂಡರ್ 15, ಅಂಡರ್ 20 ರಾಷ್ಟ್ರೀಯ ಕುಸ್ತಿ ಪಂದ್ಯಾಟ ಆಯೋಜಿಸುವ ನಿರ್ಧಾರ ಕೈಗೊಂಡ ಬಗ್ಗೆಯೂ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಕುಸ್ತಿಪಟುಗಳ ಆಕ್ರೋಶಕ್ಕೆ ಮಣಿದಿರುವ ಕೇಂದ್ರ ಸರಕಾರ ನೂತನ ಸಮಿತಿಯನ್ನು ಸದ್ಯ ಅಮಾನತಿನಲ್ಲಿರಿಸಿ ಆದೇಶ ಹೊರಡಿಸಿದೆ. ಹೊಸ ಸಮಿತಿಯು ಈ ಹಿಂದಿನ ಕಾರ್ಯಕಾರಿ ಸಮಿತಿಯ ಪ್ರಭಾವಕ್ಕೊಳಗಾಗಿ ಕಿರಿಯರ ಕುಸ್ತಿ ಪಂದ್ಯಾ ಟವನ್ನು ತರಾತುರಿಯಲ್ಲಿ ಆಯೋಜಿಸುವ ನಿರ್ಧಾರ ಕೈಗೊಳ್ಳುವ ಮೂಲಕ ಫೆಡರೇಶನ್ನ ಎಲ್ಲ ನಿಯಮ, ನಿಬಂಧನೆಗಳನ್ನು ಗಾಳಿಗೆ ತೂರಿದೆ ಎಂದು ಸಚಿವಾಲಯ ತನ್ನ ಆದೇಶದಲ್ಲಿ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದೆ.
ಭಾರತೀಯ ಕುಸ್ತಿ ಫೆಡರೇಶನ್ ಈಗ ರಾಜಕೀಯ ಮೇಲಾಟದ ಅಖಾಡವಾಗಿ ಮಾರ್ಪಟ್ಟಿದ್ದು, ಕ್ರೀಡಾಪ್ರೇಮಿಗಳ ಆಕ್ರೋಶಕ್ಕೆ ಗುರಿಯಾಗಿದೆ. ಈ ರಾಜಕೀಯ ಹಣಾಹಣಿಯಲ್ಲಿ ಪ್ರತಿಭಾನ್ವಿತ ಕುಸ್ತಿ ಪಟುಗಳಿಗೆ ಅನ್ಯಾಯವಾಗುತ್ತಿದ್ದರೆ ಮತ್ತೂಂದೆಡೆ ದೇಶದ ಹೆಮ್ಮೆಯ ಕ್ರೀಡೆಯಲ್ಲೊಂದಾಗಿರುವ ಕುಸ್ತಿಯ ಘನತೆಗೂ ಕುಂದುಂಟಾಗುತ್ತಿದೆ. ಸದ್ಯ ಕ್ರೀಡಾ ಸಚಿವಾಲಯ ಕೈಗೊಂಡಿರುವ ನಿರ್ಧಾರ ಸ್ವಾಗತಾರ್ಹ ಮತ್ತು ಫೆಡರೇಶನ್ನ ಅವ್ಯವಸ್ಥೆ ಸರಿಪಡಿಸಿ ನೇರ್ಪುಗೊಳಿಸುವ ಭರವಸೆ ಮೂಡಿಸಿದೆ. ಕುಸ್ತಿ ಫೆಡರೇಶನ್ನಲ್ಲಿ ಸೃಷ್ಟಿಯಾಗಿರುವ ಸಮಸ್ಯೆಗೆ ತೇಪೆ ಹಚ್ಚುವ ಬದಲಾಗಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಕುಸ್ತಿ ಅಖಾಡದಲ್ಲಿ ಭಾರತದ ತ್ರಿವರ್ಣ ಧ್ವಜ ಮತ್ತೆ ಬಾನೆತ್ತರದಲ್ಲಿ ಹಾರಾಡುವಂತೆ ಮಾಡುವ ಹೊಣೆ ಕೇಂದ್ರ ಸರಕಾರದ್ದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ