ಕಂದಾಯ ಸಚಿವರ ಜತೆಯಲ್ಲಿರುವಾಗಲೇ ಡಿಸಿಗೆ ವರ್ಗಾವಣೆ ಆದೇಶ !
Team Udayavani, Aug 26, 2020, 5:55 PM IST
ಯಾದಗಿರಿ: ಕಂದಾಯ ಸಚಿವ ಆರ್.ಅಶೋಕ್ ಅವರು ಯಾದಗಿರಿಯಲ್ಲಿ ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ಬಂದಿರುವ ಸಂದರ್ಭದಲ್ಲಿ ಸಚಿವರ ಜತೆಯಲ್ಲಿಯೇ ಇದ್ದ ಯಾದಗಿರಿ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ನೂತನ ಜಿಲ್ಲಾಧಿಕಾರಿಯಾಗಿ ಕರ್ನಾಟಕದ 2011ರ ಕೇಡರ್ ಐಎಎಸ್ ಅಧಿಕಾರಿ ಡಾ.ರಾಘಪ್ರೀಯ ಆರ್. ಅವರನ್ನು ನೇಮಿಸಿ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಜೇಮ್ಸ್ ಥಾರಕನ್ ಆದೇಶಿಸಿದ್ದಾರೆ. ರಾಘಪ್ರೀಯ ಅವರು ಈ ಹಿಂದೆ ಕಲಬುರಗಿ ವಿದ್ಯುತ್ಚ್ಛಕ್ತಿ ಸರಬರಾಜು (ಜೆಸ್ಕಾಂ) ಕಂಪನಿ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
ವರ್ಗವಾಗಿರುವ ಕೂರ್ಮಾರಾವ್, 2018ರ ಆಗಷ್ಟ್ 2ರಂದು ಯಾದಗಿರಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿದ್ದರು. ಬರೋಬ್ಬರಿ ಎರಡು ವರ್ಷ ಸೇವೆ ಸಲ್ಲಿಸಿದ ಜಿಲ್ಲಾಧಿಕಾರಿ ಕೂರ್ಮಾರಾವ್ ಪ್ರಾಮಾಣಿಕ ಸೇವೆಗೆ ಹೆಸರಾಗಿದ್ದರು. ಕಂದಾಯ ಇಲಾಖೆಯ ಭೂಮಿ ಯೋಜನೆಯಡಿ ರಾಜ್ಯಮಟ್ಟದ ಫೆಬ್ರವರಿ 2020ರಲ್ಲಿ 2ನೇ ಸ್ಥಾನ ಪಡೆದು ಉನ್ನತ ಅಧಿಕಾರಿಗಳಿಂದ ಶ್ಲಾಘನೆಗೂ ಪಾತ್ರವಾಗಿದ್ದರು. ಯಾದಗಿರಿಗೆ ಬರುವ ಮುನ್ನ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ ಉಪ ಕಾರ್ಯದರ್ಶಿಯಾಗಿ, ಭಟ್ಕಳದಲ್ಲಿ ಸಹಾಯಕ ಆಯುಕ್ತರಾಗಿ, ಕೊಡಗು ಮತ್ತು ರಾಯಚೂರು ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾಗಿಯೂ ಸೇವೆ ಸಲ್ಲಿಸಿದ್ದಾರೆ.