ವಿಶ್ವಾಸಮತ ಯಾಚಿಸದೇ “ಚರ್ಚೆ, ಕೋಲಾಹಲ”ದಲ್ಲೇ ಕಲಾಪ ಮುಂದೂಡಿಕೆ, ಸದನದಲ್ಲಿ BJP ಠಿಕಾಣಿ
Team Udayavani, Jul 18, 2019, 6:59 PM IST
ಬೆಂಗಳೂರು:ಕಾಂಗ್ರೆಸ್, ಜೆಡಿಎಸ್ ಶಾಸಕರ ರಾಜೀನಾಮೆ ಪ್ರಹಸನದ ಹಿನ್ನೆಲೆಯಲ್ಲಿ ಗುರುವಾರ ವಿಧಾನಸಭೆಯಲ್ಲಿ ಸುದೀರ್ಘ ಚರ್ಚೆ, ಆಡಳಿತ, ವಿಪಕ್ಷ ಸದಸ್ಯರ ನಡುವೆ ಗದ್ದಲ ಕೋಲಾಹಲ ನಡೆಯಿತು. ಏತನ್ಮಧ್ಯೆ ಸ್ಪೀಕರ್ ರಮೇಶ್ ಕುಮಾರ್ ಕಲಾಪದಿಂದ ಎದ್ದು ಹೋಗಿದ್ದು, ಡೆಪ್ಯುಟಿ ಸ್ಪೀಕರ್ ಕೃಷ್ಣಾ ರೆಡ್ಡಿ ಅಧ್ಯಕ್ಷತೆಯಲ್ಲಿ ಕಲಾಪ ಮುಂದುವರಿದಿತ್ತು. ಆದರೆ ಕೋಲಾಹದಿಂದ ವಿಶ್ವಾಸಮತ ಯಾಚಿಸದೇ ಕಲಾಪ ಶುಕ್ರವಾರಕ್ಕೆ ಮುಂದೂಡಲ್ಪಟ್ಟಿದೆ.
ಬೆಳಗ್ಗೆ ಸ್ಪೀಕರ್ ರಮೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ವಿಧಾನಸಭೆ ಕಲಾಪ ಆರಂಭಗೊಂಡಿತ್ತು. ಸಿಎಂ ಕುಮಾರಸ್ವಾಮಿ ಪ್ರಸ್ತಾವನೆ ಮಾಡಿದ್ದರು. ತದನಂತರ ಮಾಜಿ ಸಿಎಂ ಸಿದ್ದರಾಮಯ್ಯ ಕ್ರಿಯಾಲೋಪದ ಪ್ರಶ್ನೆ ಎತ್ತಿ ಮಾತನಾಡಿದ್ದರು.
ಕಾಂಗ್ರೆಸ್ ನ ಹಲವು ಶಾಸಕರು ಕ್ರಿಯಾಲೋಪದ ಬಗ್ಗೆ ಮಾತನಾಡಿದ್ದರು. ಬಿಜೆಪಿ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ ಪಾಯಿಂಟ್ ಆಫ್ ಆರ್ಡರ್ ಬಗ್ಗೆ ಬಿಜೆಪಿಯ ಸುರೇಶ್ ಕುಮಾರ್, ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ಶಾಸಕರು ಇದು ಉದ್ದೇಶಪೂರ್ವಕ ವಿಳಂಬದ ತಂತ್ರ ಎಂದು ಆರೋಪಿಸಿದ್ದರು.
ಮಧ್ಯಾಹ್ನ 3ಗಂಟೆ ನಂತರ ಕಲಾಪ ಆರಂಭಗೊಂಡಾಗಲೂ ಗದ್ದಲ, ಕೋಲಾಹಲ ನಡೆದು ಅರ್ಧ ಗಂಟೆ ಕಾಲ ಕಲಾಪ ಮುಂದೂಡಿಕೆಯಾಗಿತ್ತು. ಮತ್ತೆ ಸಭೆ ಆರಂಭವಾದಾಗಲೂ ಆಡಳಿತ, ವಿಪಕ್ಷ ಸದಸ್ಯರ ನಡುವೆ ವಾಕ್ಸಮರ ಮುಂದುವರಿದಿತ್ತು. ಬಿಜೆಪಿ ನೇತೃತ್ವದ ನಿಯೋಗ ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಸಲ್ಲಿಸಿತ್ತು.
ಅದರಂತೆ ಇಂದೇ ವಿಶ್ವಾಸಮತ ಸಾಬೀತುಪಡಿಸಿ ಎಂದು ರಾಜ್ಯಪಾಲರು ಸ್ಪೀಕರ್ ಗೆ ಸೂಚನೆ ನೀಡಿದ್ದರು. ಬಿಜೆಪಿ ಸದಸ್ಯರು ಕೂಡಾ ವಿಶ್ವಾಸಮತ ಇಂದೇ ಸಾಬೀತುಪಡಿಸಿ ಎಂದು ಪಟ್ಟು ಹಿಡಿದಾಗ ಕೋಲಾಹಲ, ಗದ್ದಲದಿಂದಾಗಿ ಡೆಪ್ಯುಟಿ ಸ್ಪೀಕರ್ ಕಲಾಪವನ್ನು ನಾಳೆಗೆ ಮುಂದೂಡಿದ್ದರು. ವಿಧಾನಸಭಾ ಕಲಾಪ ನಾಳೆಗೆ ಮುಂದೂಡಿಕೆಯಾದ ಬಳಿಕ ನಾವು ಇಂದು ಸದನದಲ್ಲಿಯೇ ಉಳಿಯುತ್ತೇವೆ ಎಂದು ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.