ರೆಸಾರ್ಟ್ ನಿಂದ ಹೊರಹೋಗಿದ್ದು ಊಟ ಮಾಡಲು: ಕಾಂಗ್ರೆಸ್ ಶಾಸಕ ಮುನಿಯಪ್ಪ
Team Udayavani, Jul 18, 2019, 9:34 AM IST
ಬೆಂಗಳೂರು: ಬುಧವಾರ ರಾತ್ರಿ ರೆಸಾರ್ಟ್ ನಿಂದ ಹೊರಹೋಗಿ ಕುತೂಹಲ ಮೂಡಿಸಿದ್ದ ಶಿಡ್ಲಘಟ್ಟ ಕಾಂಗ್ರೆಸ್ ಶಾಸಕ ವಿ.ಮುನಿಯಪ್ಪ ಇಂದು ದೇವನಹಳ್ಳಿ ರೆಸಾರ್ಟ್ ಗೆ ಮರಳಿದ್ದು ಹಲವು ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ದೇವನಹಳ್ಳಿಯ ರೆಸಾರ್ಟ್ ನಲ್ಲಿ ಕಾಂಗ್ರೆಸ್ ಶಾಸಕರು ಒಟ್ಟಾಗಿದ್ದು, ಯಾರಿಗೂ ಹೊರಹೋಗಲು ಅವಕಾಶವಿಲ್ಲ. ಆದರೆ ಶಿಡ್ಲಘಟ್ಟ ಶಾಸಕರಾದ ವಿ . ಮುನಿಯಪ್ಪ ನಿನ್ನೆ ರಾತ್ರಿ ಹೊರಹೋಗಿರುವ ಬಗ್ಗೆ ವರದಿಯಾಗಿತ್ತು. ಇದರ ಬಗ್ಗೆ ಗುರುವಾರ ಬೆಳಗ್ಗೆ ಪ್ರತಿಕ್ರಿಯೆ ನೀಡಿದ ಮುನಿಯಪ್ಪ,” ನನಗೆ ಮನೆಯೂಟ ಮಾಡಿ ಅಭ್ಯಾಸ. ರೆಸಾರ್ಟ್ ಊಟ ಸರಿಯಾಗುತ್ತಿರಲಿಲ್ಲ. ಹಾಗಾಗಿ ಊಟ ಮಾಡಲು ಮನೆಗೆ ಹೋಗಿದ್ದೇನೆ” ಎಂದಿದ್ದಾರೆ.
ಮುನಿಯಪ್ಪ ಅವರು ಕಾಂಗ್ರೆಸ್ ರೆಸಾರ್ಟ್ ನಿಂದ ಹೊರಹೋಗಿದ ವಿಚಾರಕ್ಕೆ ಹಲವು ಊಹಾಪೋಹಗಳು ಎದ್ದಿದ್ದವು. ಶಿಡ್ಲಘಟ್ಟ ಶಾಸಕರು ಮೈತ್ರಿ ತೊರೆದು ಅತೃಪ್ತರ ಜೊತೆ ಕಾಣಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಗುರುವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ವಿಶ್ವಾಸಮತ ಯಾಚನೆ ನಿರ್ಣಯ ಮಂಡಿಸಲಿದ್ದಾರೆ. ಹೀಗಾಗಿ ಕರ್ನಾಟಕದ ಇಂದಿನ ರಾಜಕೀಯ ಬೆಳವಣಿಗೆಯ ಬಗ್ಗೆ ಇಡೀ ದೇಶವೇ ಕಾತರದಿಂದ ನೋಡುತ್ತಿದೆ.