17ರಲ್ಲಿ ಇಬ್ಬರು ಶಾಸಕರಿಗೆ ತ್ರಿಶಂಕು ಸ್ಥಿತಿ! ಉಪಚುನಾವಣೆಯೂ ಇಲ್ಲ, ಶಾಸಕ ಸ್ಥಾನವೂ ಇಲ್ಲ
Team Udayavani, Nov 13, 2019, 12:57 PM IST
ಬೆಂಗಳೂರು/ನವದೆಹಲಿ: ಅನರ್ಹ ಶಾಸಕರ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನ ತ್ರಿಸದಸ್ಯ ಪೀಠ ಬುಧವಾರ ತೀರ್ಪನ್ನು ಪ್ರಕಟಿಸಿದೆ. 17 ಶಾಸಕರು ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ತಿಳಿಸಿದೆ. ಆದರೆ ಇದೀಗ ರಾಜರಾಜೇಶ್ವರಿ ನಗರದ ಮುನಿರತ್ನ ಹಾಗೂ ಮಸ್ಕಿ ಕ್ಷೇತ್ರದ ಪ್ರತಾಪ್ ಗೌಡ ಪಾಟೀಲ್ ಸ್ಥಿತಿ ತ್ರಿಶಂಕುವಾಗಿದೆ.
ಚುನಾವಣಾ ಆಯೋಗ ಈಗಾಗಲೇ ರಾಜ್ಯದ 15 ಕ್ಷೇತ್ರಗಳಿಗೆ ಡಿಸೆಂಬರ್ 5ರಂದು ಉಪಚುನಾವಣೆ ನಡೆಸುವುದಾಗಿ ಘೋಷಿಸಿದೆ. ಹಿಂದಿನ ಸ್ಪೀಕರ್ ರಮೇಶ್ ಕುಮಾರ್ ಅವರ ಅನರ್ಹತೆ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.
ಏತನ್ಮಧ್ಯೆ ಚುನಾವಣಾ ಆಯೋಗ ಮಸ್ಕಿ ಮತ್ತು ಆರ್ ಆರ್ ನಗರ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆಯನ್ನೇ ಘೋಷಣೆ ಮಾಡಿಲ್ಲ. ಎರಡೂ ಕ್ಷೇತ್ರಗಳಲ್ಲಿ 2018ರ ವಿಧಾನಸಭಾ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ಚುನಾವಣಾ ಫಲಿತಾಂಶ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಆಯೋಗ ಚುನಾವಣೆ ಘೋಷಣೆ ಮಾಡಿರಲಿಲ್ಲ.
ಈ ಹಿನ್ನೆಲೆಯಲ್ಲಿ ಮುನಿರತ್ನ ಮತ್ತು ಪ್ರತಾಪ್ ಗೌಡ ಪಾಟೀಲ್ ಸದ್ಯ ಮಂತ್ರಿಯಾಗುವ ಅವಕಾಶವೂ ಇಲ್ಲ. ಚುನಾವಣೆಗೂ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಚುನಾವಣಾ ಆಯೋಗ ಈ ಎರಡು ಕ್ಷೇತ್ರಗಳಿಗೆ ಚುನಾವಣೆ ನಡೆಸುವ ಬಗ್ಗೆ ಘೋಷಣೆ ಮಾಡುವವರೆಗೆ ಕಾಯಬೇಕಾಗಿದ್ದು, ಇಬ್ಬರು ಶಾಸಕರ ಸ್ಥಿತಿ ಡೋಲಾಯಮಾನವಾದಂತಾಗಿದೆ.