ಶನಿವಾರಸಂತೆ ರಾಶಿ ರಾಶಿ ಆಲಿಕಲ್ಲು ಮಳೆ!
Team Udayavani, Feb 20, 2021, 1:39 AM IST
ಮಡಿಕೇರಿ: ಜನವರಿ ಮೊದಲ ವಾರದಲ್ಲಿ ಸುರಿದ ಅಕಾಲಿಕ ಮಳೆಯ ಕಷ್ಟ, ನಷ್ಟಗಳಿಂದ ಚೇತರಿಸಿಕೊಳ್ಳುವ ಮೊದಲೇ ಶನಿವಾರಸಂತೆ ಭಾಗದ ಗ್ರಾಮಸ್ಥರು ಹಾಗೂ ರೈತರಿಗೆ ಶುಕ್ರವಾರ ಸುರಿದ ಆಲಿಕಲ್ಲಿನ ಮಹಾಮಳೆ ಆಘಾತವನ್ನುಂಟು ಮಾಡಿದೆ.
ರಥಸಪ್ತಮಿಯ ದಿನವಾದ ಶುಕ್ರವಾರ ತಿಳಿ ಮೋಡದ ವಾತಾವರಣದ ನಡುವೆ ದಿಢೀರ್ ಆಗಿ ಮಳೆ ಸುರಿದಿದೆ. ಕೇವಲ ಮಳೆಯಾಗಿದ್ದರೆ ಜನತೆ ಸಮಾಧಾನ ಪಡುತ್ತಿದ್ದರು; ಆದರೆ ಸುರಿದದ್ದು ರಾಶಿ ರಾಶಿ ಆಲಿಕಲ್ಲು. ಆಲಿ ಕಲ್ಲುಗಳ ಹೊಡೆತದಿಂದಾಗಿ ಈ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುವ ಹಸಿ ಮೆಣಸಿನ ಫಸಲು ಸಂಪೂರ್ಣವಾಗಿ ನಾಶವಾಗಿದೆ.
ಪ್ರಕೃತಿಯ ಈ ವಿಸ್ಮಯದಿಂದ ಗ್ರಾಮದಲ್ಲಿ ಆತಂಕದ ವಾತಾವರಣ ಮೂಡಿದ್ದು, ರೈತರು ನಷ್ಟದಿಂದ ದುಃಖೀಸುವಂತಾಗಿದೆ. ಕೊಡಗಿನ ವಿವಿಧೆಡೆ ಮೋಡ ಕವಿದ ವಾತಾವರಣ ಮುಂದುವರಿದಿದೆ.