ಕಾಸರಗೋಡು ಬಿಜೆಪಿ ಬೃಹತ್ ಪ್ರತಿಭಟನೆ
Team Udayavani, Aug 25, 2020, 11:00 PM IST
ಕುಂಬಳೆ: ಅಂತಾರಾಜ್ಯ ಪ್ರಯಾಣಕ್ಕೆ ಯಾವುದೇ ಅನುಮತಿ ಅಗತ್ಯವಿಲ್ಲ ಎಂಬ ಕೇಂದ್ರ ಸರಕಾರದ ನಿರ್ದೇಶವಿದ್ದರೂ ಕೇರಳ ಸರಕಾರವು ಕರ್ನಾಟಕಕ್ಕೆ ಹೋಗಲು ಪಾಸ್ ಮೂಲಕ ನಿಯಂತ್ರಿಸುತ್ತಿರುವುದರ ವಿರುದ್ಧ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ “ಪಾಸ್ ಉಲ್ಲಂಘನೆ ಆಂದೋಲನ’ವು ಮಂಗಳವಾರ ಬೆಳಗ್ಗೆ ತಲಪಾಡಿ ಗಡಿಯಲ್ಲಿ ಜರಗಿತು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಶ್ರೀಕಾಂತ್ ಅವರು ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿ, ಕೇರಳ ಸರಕಾರದ ನಿಯಂತ್ರಣ ಹೇರಿಕೆಯಿಂದಾಗಿ ನೂರಾರು ಮಂದಿ ಉದ್ಯೋಗ ಮತ್ತು ವ್ಯಾಪಾರ ನಡೆಸಲಾಗದೆ ಸಂಕಷ್ಟದಲ್ಲಿದ್ದಾರೆ. ಆದರೂ ಕರ್ನಾಟಕಕ್ಕೆ ಮುಕ್ತ ಪ್ರವೇಶ ನಿಷೇಧಿಸಿರುವ ಕೇರಳ ರಾಜ್ಯ ಸರಕಾರದ್ದು ಜನ ವಿರೋಧಿ ನೀತಿಯಾಗಿದೆ ಎಂದರು.
ಬಿಜೆಪಿ ಮಂಜೇಶ್ವರ ಮಂಡಲಾಧ್ಯಕ್ಷ ಮಣಿಕಂಠ ರೈ ಸಭೆಯ ಅಧ್ಯಕ್ಷತೆ ವಹಿಸಿದ್ದರು. ತಲಪಾಡಿ ಕೆಳಗಿನ ಪೆಟ್ರೋಲ್ ಬಂಕ್ ಬಳಿಯಿಂದ ಆರಂಭಗೊಂಡ ಪ್ರತಿಭಟನ ಮೆರವಣಿಗೆ ಕೆಳಗಿನ ಟೋಲ್ ಬೂತ್ಗೆ ಸುತ್ತುವರಿದು ಅಂತಾರಾಜ್ಯ ಗಡಿ ಸಂಪರ್ಕದ ಕೇರಳ ಪೊಲೀಸ್ ಕೇಂದ್ರದ ಮುಂಭಾಗದಲ್ಲಿ ಸಭೆ ನಡೆಸಲಾಯಿತು. ಗಡಿಭಾಗ ತೂಮಿನಾಡಿನಲ್ಲಿ ಸ್ಥಾಪಿಸಿರುವ ಕ್ವಾರಂಟೈನ್ ಪರಿಶೀಲನ ಕೇಂದ್ರ ಹಾಗೂ ಪೊಲೀಸ್ ಬ್ಯಾರಿಕೇಡ್ಗಳನ್ನು ತೆರವುಗೊಳಿಸಿ ಸರಕಾರದ ನೀತಿಯನ್ನು ಖಂಡಿಸಲಾಯಿತು.
ಬಿಜೆಪಿ ನೇತಾರರಾದ ಸುರೇಶ್ ಕುಮಾರ್ ಪೂಕಟ್ಟೆ, ಸುಧಾಮ ಗೋಸಾಡ, ನ್ಯಾಯವಾದಿ ನವೀನ್ ರಾಜ್ ಕೆ.ಜೆ., ಪದ್ಮನಾಭ ಕಡಪ್ಪರ, ಯಾದವ ಬಡಾಜೆ, ಆದರ್ಶ ಬಿ.ಎಂ., ರಾಜೇಶ್ ತೂಮಿನಾಡು, ಲೋಕೇಶ್ ಮಾಡ, ಯು.ಜಿ. ರೈ, ಡಾ| ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.