ಕನ್ನಡದ ಪುಸ್ತಕಗಳನ್ನು ಮಾರಾಟ ಮಾಡುವ ತೆಲುಗಿನವರ ಕನ್ನಡ ಪ್ರೇಮ
Team Udayavani, May 10, 2019, 10:27 AM IST
ಕನ್ನಡ ಪುಸ್ತಕ ಮಾರಾಟ ಮಾಡುತ್ತಿರುವ ತೆಲುಗಿಗರ ತಂಡ
ಶನಿವಾರಸಂತೆ ಮೇ 9: ಇಂದು ನಮ್ಮಲ್ಲಿ ಕನ್ನಡಿಗರೆ ಕನ್ನಡದ ಪುಸ್ತಕ, ಕಥೆ, ಕಾವ್ಯ ಕಾದಂಬರಿ, ಕೃತಿ, ಗ್ರಂಥಗಳನ್ನು ಓದುವುದನ್ನು ಅಲಕ್ಷ್ಯ ಮಾಡುತ್ತಿರುವ ದಿನದಲ್ಲಿ ಅನ್ಯ ಭಾಗರು ಕರ್ನಾಟಕಕ್ಕೆ ಬಂದು ಕನ್ನಡದ ಪುಸ್ತಕವನ್ನು ಕನ್ನಡಿಗರಿಗೆ ಮಾರಾಟ ಮಾಡುತ್ತಿರುವ ಮೂಲಕ ಕನ್ನಡ ಪ್ರೇಮ ಮೆರೆದಿದ್ದಾರೆ.
ಆಂದ್ರಪ್ರದೇಶದ ಹೈದರಾಬಾದ್ನ ಸರಕಾರಿ ಪ್ರೌಢಶಾಲೆಯೊಂದರಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಸುತ್ತಿರುವ ಸಾಯಿಶೇಖರ್ ಅವರ ಪತ್ನಿ ರಮಾದೇವಿ ಹಾಗೂ ಬೆಂಗಳೂರು ಕೃಷ್ಣ ಮಠದ ವಿದ್ಯಾರ್ಥಿಗಳಾದ ಪರ್ವತ ವಾಲು ಮತ್ತು ಪ್ರಣವ್ಕುಮಾರ್ ತಂಡ ರಾಜ್ಯದಲ್ಲಿ ಕನ್ನಡದ ಪುಸ್ತಕ, ಗ್ರಂಥಗಳನ್ನು ಮಾರಾಟ ಮಾಡುತ್ತಿರುವ ತೆಲುಗಿನ ಕನ್ನಡದ ಪ್ರೇಮಿಗಳು. ಸಾಯಿಶೇಖರ್-ರಮಾದೇವಿ ದಂಪತಿ ಹೈದರಾಬಾದ್ನಲ್ಲಿರುವ ಸಾಯಿಕೃಷ್ಣ ಮಠದ ಭಕ್ತರಾಗಿದ್ದಾರೆ, ಕನ್ನಡ ಭಾಷೆಯಲ್ಲಿ ಮುದ್ರ ಣಗೊಂಡ ಭಗವದ್ಗೀತೆ, ವೇದಾಪುರಣ ಸೇರಿದಂತೆ ಅದ್ಯಾತ್ಮಿಕ ಗ್ರಂಥಗಳು, ಪುಸ್ತಕ, ಕೃತಿಗಳ ಜೊತೆಯಲ್ಲಿ ಕನ್ನಡದಲ್ಲೆ ಮುದ್ರಣಗೊಂಡ ಕುರಾನ್, ಬೈಬಲ್ ಪುಸ್ತಕವನ್ನು ಮಾರಾಟ ಮಾಡುತ್ತಿದ್ದಾರೆ.
ವಿಶೇಷವಾಗಿ ಪುಸ್ತಕ, ಕೃತಿಗಳಲ್ಲಿ ಧರ್ಮದ ಕುರಿತು ಪ್ರಚಾರ ಮಾಡಿದರೆ ಓದುಗರು ಪುಸ್ತಕಗಳನ್ನು ಓದುತ್ತಾರೆ ಇದರಿಂದ ಪ್ರತಿಯೊಂದು ಧರ್ಮದ ಜನರಲ್ಲಿ ಧರ್ಮ ಮತ್ತು ಆದ್ಯಾತ್ಮಿಕ ಸಂಸ್ಕಾರ ಬೆಳೆಯುತ್ತದೆ ಸಮಾಜದಲ್ಲಿ ಸಾಮರಸ್ಯ ಬೆಳೆಯುತ್ತದೆ ಎಂಬ ಉದ್ದೇಶದಿಂದ ಸಾಯಿಶೇಖರ್ ದಂಪತಿ ಶಾಲೆಗಳಿಗೆ ರಜೆ ಇರುವ ಸಂದರ್ಭದಲ್ಲಿ ಪುಸ್ತಕಗಳನ್ನು ಮಾರಾಟ ಮಾಡುತ್ತಾರೆ. ಅದರಂತೆ ಕಳೆದ 10 ವರ್ಷಗಳಿಂದ ಶಾಲೆಗಳಿಗೆ 1 ತಿಂಗಳು ರಜೆ ಇರುವ ಸಂದರ್ಭದಲ್ಲಿ ಸಾಯಿಶೇಖರ್ ದಂಪತಿ ಕರ್ನಾಟಕಕ್ಕೆ ಬಂದು ಕನ್ನಡದ ಗ್ರಂಥ-ಪುಸ್ತಕಗಳನ್ನು ಮಾರಾಟ ಮಾಡುತ್ತಾರೆ ಈ ಮೂಲಕ ಕನ್ನಡಿಗರಲ್ಲಿ ಪುಸ್ತಕಗಳನ್ನು ಓದುವ ಹಾಗೂ ಧರ್ಮದ ಬಗ್ಗೆ ಅಭಿರುಚಿ ಬೆಳೆಸುವ ಪ್ರಚಾರವನ್ನು ನಡೆಸುತ್ತಿದ್ದಾರೆ. ಇವರ ಜೊತೆಯಲ್ಲಿ ಬೆಂಗಳೂರಿನಲ್ಲಿರುವ ಸಾಯಿಮಠದ ವಿದ್ಯಾರ್ಥಿಗಳನ್ನು ಪುಸ್ತಕ ಮಾರಾಟ ಪ್ರಚಾರಕ್ಕೆ ಕರೆತಂದಿದ್ದಾರೆ. ಈ ತಂಡ ಶನಿವಾರಸಂತೆ ಮೂಲಕ ಕೊಡಗು ಜಿಲ್ಲೆಯಲ್ಲಿ ಪುಸ್ತಕ ಮಾರಾಟ ಮಾಡಲು ಪ್ರವೇಶಿದ್ದಾರೆ.