Crime News ಕಾಸರಗೋಡು ಅಪರಾಧ ಸುದ್ದಿಗಳು
Team Udayavani, Dec 20, 2023, 12:02 AM IST
ಕಾರು ಢಿಕ್ಕಿ: ಬೈಕ್ ಸವಾರ ವಿದ್ಯಾರ್ಥಿ ಸಾವು
ಕಾಸರಗೋಡು: ಬೇಕಲ ಕೋಟಕುನ್ನು ಕೆಎಸ್ಟಿಪಿ ರಸ್ತೆಯಲ್ಲಿ ಕಾರು ಢಿಕ್ಕಿ ಹೊಡೆದು ಬೈಕ್ ಸವಾರ ಕೋಳಿಯಡ್ಕ ಆಯಿಷಾ ಮಂಜಿಲ್ನ ಮುಹಮ್ಮದ್ ಅಶ್ರಫ್ ಅವರ ಪುತ್ರ ಮಂಗಳೂರಿನ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಕಾಂ. ವಿದ್ಯಾರ್ಥಿ ಸಿ.ಎ. ಸಫ್ರಾಜ್ ಅಮಾನ್ (19) ಮೃತಪಟ್ಟರು.
ಸೋಮವಾರ ಅಪಘಾತ ಸಂಭವಿಸಿದ್ದು, ಗಂಭೀರ ಗಾಯಗೊಂಡ ಸಫ್ರಾಜ್ ನನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಬೇಕಲ ಪೊಲೀಸರು ಕಾರನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ.
ಕುಸಿದು ಬಿದ್ದು ಯುವಕನ ಸಾವು
ಕಾಸರಗೋಡು: ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಕುಸಿದು ಬಿದ್ದು ಚೆಮ್ನಾಡ್ ನೆಂಜಿಲ್ ಹೌಸ್ನ ಪಿ. ಚಂದ್ರನ್ ನಾಯರ್ ಅವರ ಪುತ್ರ ಶ್ಯಾಮ್ ಕುಮಾರ್ (32) ಸಾವಿಗೀಡಾದರು.
ಷಷ್ಠಿ ಮಹೋತ್ಸವದ ಅಂಗವಾಗಿ ದೇವಸ್ಥಾನಕ್ಕೆ ಹೋಗಿ ರಾತ್ರಿ ಕಾಸರಗೋಡು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದರು. ಅಲ್ಲಿ ಕುಸಿದು ಬಿದ್ದಿದ್ದು, ತತ್ಕ್ಷಣ ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ.
ಚಿನ್ನ ಸಹಿತ ವಶಕ್ಕೆ
ಕಾಸರಗೋಡು: ಕರಿಪ್ಪೂರ್ ವಿಮಾನ ನಿಲ್ದಾಣದಲ್ಲಿ ಚಿನ್ನ ಸಹಿತ ಕಾಸರಗೋಡು ನಿವಾಸಿಯನ್ನು ಕಸ್ಟಮ್ಸ್ ದಳ ವಶಪಡಿಸಿಕೊಂಡಿದೆ.
ದುಬಾೖಯಿಂದ ವಿಮಾನದಲ್ಲಿ ಆಗಮಿಸಿದ ಕಾಸರಗೋಡು ನಿವಾಸಿಮುಹಮ್ಮದ್ ಬಿಷಾರ್(24)ನಿಂದ 23 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದೆ.
ಶರ್ಟ್ನ ಬಟನ್ನೊಳಗೆ ಬಚ್ಚಿಟ್ಟು ಚಿನ್ನವನ್ನು ತರಲಾಗಿತ್ತು. ಚಿನ್ನ ಸಾಗಾಟದ ಬಗ್ಗೆ ರಹಸ್ಯ ಮಾಹಿತಿಯಂತೆ ಕಸ್ಟಮ್ಸ್ ದಳ ಕಾರ್ಯಾಚರಣೆ ನಡೆಸಿತ್ತು.