ಕಾಸರಗೋಡು ಅಪರಾಧ ಸುದ್ದಿಗಳು: ಬಸ್ ಸಿಬಂದಿ, ವಿದ್ಯಾರ್ಥಿಗಳ ಮಧ್ಯೆ ಹೊಡೆದಾಟ
Team Udayavani, Nov 12, 2022, 11:58 AM IST
ಕುಂಬಳೆ: ತಲಪ್ಪಾಡಿ ಕಾಸರಗೋಡು ಖಾಸಗಿ ಬಸ್ ಸಿಬಂದಿ ಮತ್ತು ಶಿರಿಯ ಸರಕಾರಿ ಶಾಲಾ ವಿದ್ಯಾರ್ಥಿಗಳ ನಡುವಣ ಹೊಡೆದಾಟದಿಂದ ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ವಿದ್ಯಾರ್ಥಿಗಳನ್ನು ಬಸ್ಗಳಲ್ಲಿ ಕರೆದುಕೊಂಡು ಹೋಗದೇ ಬಿಟ್ಟು ಹೋದ ನೆಪದಲ್ಲಿ ಪರಸ್ಪರ ವಾಗ್ವಾದದಿಂದ ಹಲ್ಲೆ ನಡೆದು ಮೂವರು ವಿದ್ಯಾರ್ಥಿಗಳು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಓರ್ವ ವಿದ್ಯಾರ್ಥಿ ಕಾಸರಗೋಡು ಖಾಸಗೀ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಟ್ಯಾಂಕರ್ ಲಾರಿ ಢಿಕ್ಕಿ: ಬೈಕ್ ಸವಾರ ಸಾವು
ಕಾಸರಗೋಡು: ವೆಳ್ಳೂರು ಕೊಟ್ಟಣಚ್ಚೇರಿ ರಾ.ಹೆದ್ದಾರಿಯಲ್ಲಿ ಟ್ಯಾಂಕರ್ ಲಾರಿ ಢಿಕ್ಕಿ ಹೊಡೆದು ಬೈಕ್ ಸವಾರ ಮಂಗಳೂರಿನಲ್ಲಿ ಬಿ.ಟೆಕ್ ವಿದ್ಯಾರ್ಥಿ ತೃಕ್ಕರಿಪುರ ಎಡಾಟುಮ್ಮಲ್ ನಿವಾಸಿ ಸಿ. ಗಣೇಶನ್ ಅವರ ಪುತ್ರ ಎಂ.ವಿ. ಅರ್ಜುನ್ (20) ಮೃತಪಟ್ಟಿದ್ದಾರೆ.
ಹಾವು ಕಡಿದು ಯುವಕನ ಸಾವು
ಮಂಜೇಶ್ವರ: ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಹಾವು ಕಡಿದು ಉದ್ಯಾವರಗುತ್ತು ಅಂಬೇಡ್ಕರ್ ನಗರ ನಿವಾಸಿ ಚೌಕಾರು ಅವರ ಪುತ್ರ ಉಮೇಶ (42) ಸಾವಿಗೀಡಾದರು.
ನ.10 ರಂದು ರಾತ್ರಿ ಅಂಬಿತ್ತಾಡಿಗೆ ಹೋಗುತ್ತಿದ್ದಾಗ ರಸ್ತೆಯಲ್ಲಿ ಹಾವು ಕಡಿದಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ.
ಬಾಲಕಿಗೆ ಲೈಂಗಿಕ ಕಿರುಕುಳ : ಬಂಧನ
ಕಾಸರಗೋಡು: ಹದಿನೇಳರ ಹರೆಯದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ನಾಯಮ್ಮಾರಮೂಲೆ ನಿವಾಸಿ ಅಬ್ದುಲ್ ಹಕೀಂ ಆಲಿಯಾಸ್ ಹಕೀಂ(34) ನನ್ನು ಜಿಲ್ಲಾ ಕ್ರೈಂ ಬ್ರಾಂಚ್ ಡಿವೈಎಸ್ಪಿ ಎ.ಸತೀಶ್ ಕುಮಾರ್ ಬಂಧಿಸಿದ್ದಾರೆ.
ಕಳವು ಪ್ರಕರಣ : ವ್ಯಕ್ತಿಯ ಬಂಧನ
ಕಾಸರಗೋಡು: ಬೇಕಲ ಎಎಲ್ಪಿ ಶಾಲೆ ಮತ್ತು ತರಕಾರಿ ಅಂಗಡಿಯಿಂದ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರಗಿಂಡೆವಿಡ ರಾಧಾಕೃಷ್ಣನ್ ಆಲಿಯಾಸ್ ರಾಧಾಕೃಷ್ಣನ್(52)ನನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ. ನ.8 ರಂದು ಪಾಲನುನ್ನಿನ ತರಕಾರಿ ಅಂಗಡಿಯಿಂದ 500 ರೂ. ನಗದು ಮತ್ತು 5000 ರೂ. ಮೌಲ್ಯದ ಸ್ಮಾರ್ಟ್ ಫೋನ್ ಕಳವುಗೈಯ್ಯಲಾಗಿತ್ತು. ಬೇಕಲ ಎಎಲ್ಪಿ ಶಾಲೆಯಿಂದ 20 ಸಾವಿರ ರೂ. ಕಳವು ಮಾಡಲಾಗಿತ್ತು.
ಗಾಂಜಾ ಸಹಿತ ವ್ಯಕ್ತಿಯ ಬಂಧನ
ಕಾಸರಗೋಡು: ಪಳ್ಳಿಕೆರೆ ಚೇಟುಕುಂಡ್ನಿಂದ 4 ಕಿಲೋ ಗಾಂಜಾ ವಶಪಡಿಸಿಕೊಂಡ ಬೇಕಲ ಪೊಲೀಸರು ಈ ಸಂಬಂಧ ಮಂಜೇಶ್ವರ ಕುಂಜತ್ತೂರು ನಿವಾಸಿ ಮೊಹಮ್ಮದ್ (49)ನನ್ನು ಬಂಧಿಸಿದ್ದಾರೆ.
ಲಾರಿ ಢಿಕ್ಕಿ: ಬೈಕ್ ಸವಾರನಿಗೆ ಗಾಯ
ಕುಂಬಳೆ: ಕೈಕಂಬ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಢಿಕ್ಕಿ ಹೊಡೆದು ಬೈಕ್ ಸವಾರ ಕುಂಬಳೆ ಸಿ.ಎಚ್.ಸಿ. ರಸ್ತೆ ನಿವಾಸಿ ಹರೀಶ್(28) ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳುವನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರು ಢಿಕ್ಕಿ: ವ್ಯಕ್ತಿಗೆ ಗಾಯ
ಉಪ್ಪಳ: ಸೋಂಕಾಲಿನಲ್ಲಿ ರಸ್ತೆ ದಾಟುತ್ತಿದ್ದಾಗ ಕಾರು ಢಿಕ್ಕಿ ಹೊಡೆದು ಪುಳಿಕುತ್ತಿ ನಿವಾಸಿ ವೆಂಕಟ್ರಮಣ ಆಚಾರ್ಯ (68) ಅವರು ತೀವ್ರ ಗಾಯಗೊಂಡಿದ್ದಾರೆ. ಗಾಯಗೊಂಡ ವೆಂಕಟ್ರಮಣ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸೇರಿಸ ಲಾಗಿದೆ.