ಕಾಸರಗೋಡು: ಹೊಸ ಪ್ರಕರಣವಿಲ್ಲ
ಕೋವಿಡ್19: 12 ಮಂದಿ ಗುಣಮುಖ
Team Udayavani, Apr 14, 2020, 5:30 AM IST
ಕಾಸರಗೋಡು: ಕೋವಿಡ್19 ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಕಾಸರಗೋಡು ಜಿಲ್ಲೆಯ 12 ಸಹಿತ ಕೇರಳ ರಾಜ್ಯದಲ್ಲಿ ಒಟ್ಟು 19 ಮಂದಿ ಸೋಮವಾರ ಗುಣಮುಖರಾಗಿದ್ದಾರೆ.
ಕಾಸರಗೋಡು-12, ಪತ್ತನಂತಿಟ್ಟ-3, ತೃಶ್ಶೂರು-3 ಮತ್ತು ಕಣ್ಣೂರು ಜಿಲ್ಲೆಯಲ್ಲಿ ಒಬ್ಬರು ಗುಣಮುಖರಾಗಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ರವಿವಾರ ಹಾಗೂ ಸೋಮವಾರ ಹೊಸ ಪ್ರಕರಣಗಳು ವರದಿಯಾಗದೆ ಜನ ಸಮಾಧಾನಪಡುವಂತಾಗಿದೆ.
ರಾಜ್ಯದಲ್ಲಿ ಸೋಮವಾರ ಹೊಸದಾಗಿ ಮೂವರಿಗೆ ಕೋವಿಡ್19 ಸೋಂಕು ದೃಢಪಟ್ಟಿದೆ. ಕಣ್ಣೂರು ಜಿಲ್ಲೆಯಲ್ಲಿ ಇಬ್ಬರು ಹಾಗೂ ಪಾಲಾ^ಟ್ ಜಿಲ್ಲೆಯಲ್ಲಿ ಒಬ್ಬರಿಗೆ ಸೋಂಕು ಬಾಧಿಸಿದೆ. ಈ ಪೈಕಿ ಓರ್ವರು ವಿದೇಶದಿಂದ ಬಂದವರು, ಇನ್ನಿಬ್ಬರಿಗೆ ಸೋಂಕು ಪೀಡಿತರಿಂದ ಹರಡಿದೆ. ರಾಜ್ಯದಲ್ಲಿ ಈ ವರೆಗೆ 378 ಮಂದಿ ಕೋವಿಡ್19 ಬಾಧಿಸಿದ್ದು, ಪ್ರಸ್ತುತ 178 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 198 ಮಂದಿ ಗುಣಮುಖರಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ.
ಸೋಮವಾರ 86 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟು 715 ಮಂದಿ ಆಸ್ಪತ್ರೆ ನಿಗಾದಲ್ಲಿದ್ದಾರೆ. ಕೇರಳದಲ್ಲಿ ರೋಗ ಬಾಧಿಸುವವರ ಸಂಖ್ಯೆ ಇಳಿಮುಖವಾಗುತ್ತಿದ್ದು, ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಸೋಮವಾರ 12 ಮಂದಿ ಸೋಂಕು ಮುಕ್ತರಾಗಿದ್ದು, ಕಾಸರಗೋಡಿನ ಒಟ್ಟು 166 ಕೋವಿಡ್19 ಸೋಂಕು ಬಾಧಿತರ ಪೈಕಿ 73 ಮಂದಿ ಗುಣಮುಖರಾದಂತಾಗಿದೆ. ಜಿಲ್ಲಾ ಆಸ್ಪತ್ರೆಯಿಂದ 10 ಮಂದಿ ಮತ್ತು ಜನರಲ್ ಆಸ್ಪತ್ರೆಯಿಂದ ಇಬ್ಬರು ಬಿಡುಗಡೆಗೊಂಡಿದ್ದಾರೆ. ಸೋಮವಾರ ಹೊಸದಾಗಿ ಒಬ್ಬರನ್ನು ಐಸೊಲೇಶನ್ ವಾರ್ಡ್ಗೆ ಕಳುಹಿಸಲಾಗಿದೆ.
39 ಕೇಸು ದಾಖಲು
ಲಾಕ್ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 39 ಕೇಸುಗಳನ್ನು ದಾಖಲಿಸಲಾಗಿದೆ. 95 ಮಂದಿಯನ್ನು ಬಂಧಿಸಲಾಗಿದೆ. 21 ವಾಹನಗಳನ್ನು ವಶಪಡಿಸಲಾಗಿದೆ.
ಕ್ಯಾಂಪ್ಕೋ ಕಾರ್ಯಾಚರಣೆ
ಕೃಷಿಕರಿಂದ ಅಡಕೆ ಸಂಗ್ರಹಿಸುವ ನಿಟ್ಟಿನಲ್ಲಿ ಕ್ಯಾಂಪ್ಕೋ ಸಂಸ್ಥೆಗೆ ಲಾಕ್ಡೌನ್ ಆದೇಶದಿಂದ ವಾರಕ್ಕೊಂದು ದಿನ ರಿಯಾಯಿತಿ ನೀಡಲಾಗಿದೆ. ಆರೋಗ್ಯ ಇಲಾಖೆಯ ಸಲಹೆ, ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿ, ಬುಧವಾರ ಬೆಳಗ್ಗೆ 11ರಿಂದ ಸಂಜೆ 5 ಗಂಟೆ ವರೆಗೆ ಈ ಸಂಸ್ಥೆ ಕಾರ್ಯಾಚರಿಸಬಹುದೆಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ತಿಳಿಸಿದ್ದಾರೆ.