ಕೇರಳ: ವಿಧಾನಸಭಾ ಚುನಾವಣೆ ಹಿನ್ನಲೆ; ರಾಜ್ಯಸಭಾ ಚುನಾವಣೆ ಮುಂದೂಡಿಕೆ
ಚುನಾವಣಾ ಆಯೋಗದ ತೀರ್ಮಾನವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಖಂಡಿಸಿದ್ದಾರೆ
Team Udayavani, Apr 1, 2021, 1:32 PM IST
ಕಾಸರಗೋಡು: ಕೇರಳದಲ್ಲಿ ಖಾಲಿಯಿರುವ ಮೂರು ರಾಜ್ಯಸಭಾ ಸೀಟುಗಳಿಗೆ ಎಪ್ರಿಲ್ 12ರಂದು ನಡೆಯಬೇಕಿದ್ದ ಚುನಾವಣೆಯನ್ನು ಆಯೋಗವು ಮುಂದೂಡಿದೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ವೇಳೆ ರಾಜ್ಯಸಭಾ ಚುನಾವಣೆ ಅಗತ್ಯವಿಲ್ಲವೆಂಬ ಕಾನೂನು ತಜ್ಞರ ಸಲಹೆಯ ಹಿನ್ನೆಲೆಯಲ್ಲಿ ರಾಜ್ಯಸಭಾ ಚುನಾವಣೆಯನ್ನು ಮುಂದೂಡಲಾಗಿದೆ.
ಕಾಂಗ್ರೆಸ್ ನೇತಾರ ವಯಲಾರ್ ರವಿ, ಮುಸ್ಲಿಂ ಲೀಗ್ನ ಪಿ.ಎ.ಅಬ್ದುಲ್ ವಹಾಬ್, ಸಿಪಿಎಂನ ಕೆ.ಕೆ.ರಾಜೇಶ್ ಅವರು ರಾಜ್ಯಸಭೆಯಿಂದ ನಿವೃತ್ತರಾಗಿದ್ದಾರೆ. ಈ ಮೂರು ಸ್ಥಾನಗಳಿಗೆ ಎಪ್ರಿಲ್ 12ರಂದು ಚುನಾವಣೆ ನಡೆಯುವುದೆಂದು ಈ ಹಿಂದೆ ಘೋಷಿಸಲಾಗಿತ್ತು. ಎಪ್ರಿಲ್ 6ರಂದು ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.
ಮುಂಬರುವ ಮೇ 2ರಂದು ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಎಪ್ರಿಲ್ 6ರಂದು ಹೊಸ ಸರಕಾರಕ್ಕಾಗಿ ಚುನಾವಣೆ ನಡೆಯಲಿದ್ದು, ಆದರೆ ಮತದಾನದ ನಂತರ ಹಳೆಯ ಶಾಸಕರು ರಾಜ್ಯಸಭೆಗೆ ಮತ ಹಾಕುವುದು ಎಷ್ಟು ಸರಿ ಎಂದು ಕಾನೂನು ತಜ್ಞರು ಪ್ರಶ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಸಭಾ ಚುನಾವಣೆ ರದ್ದುಪಡಿಸಲು ಚುನಾವಣಾ ಅಯೋಗವು ನಿರ್ಧರಿಸಿದೆ.
ಚುನಾವಣಾ ಆಯೋಗದ ತೀರ್ಮಾನವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಖಂಡಿಸಿದ್ದಾರೆ. ಚುನಾವಣೆ ಮುಂದೂಡಲು ಒತ್ತಡ ಹಾಕಿದವರು ಯಾರು ಎಂದವರು ಪ್ರಶ್ನಿಸಿದ್ದಾರೆ. ಆಯೋಗದ ಇಂತಹ ನಿರ್ಧಾರವನ್ನು ಸಿಪಿಎಂ ಪಕ್ಷವು ಒಪ್ಪಿಕೊಳ್ಳುವುದಿಲ್ಲ ಎಂದು ಕೇರಳ ಸಿಎಂ ತಿರುವನಂತಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.