Police Action: ಕಾಸರಗೋಡಿನಲ್ಲಿ ಖಾಸಗಿ ಬಸ್ಗಳಿಂದ ಮಿಂಚಿನ ಮುಷ್ಕರ
Team Udayavani, Nov 18, 2023, 8:36 PM IST
ಕಾಸರಗೋಡು: ಪೊಲೀಸರು ವಿನಾಕಾರಣ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಖಾಸಗಿ ಬಸ್ ನೌಕರರು ಕಾಸರಗೋಡಿನಲ್ಲಿ ಮಿಂಚಿನ ಮುಷ್ಕರ ನಡೆಸಿದರು. ಪೊಲೀಸರು ಸ್ಥಳಕ್ಕೆ ಧಾವಿಸಿ ನೌಕರರೊಂದಿಗೆ ಚರ್ಚಿಸಿದ ಬಳಿಕ ತಾತ್ಕಾಲಿಕ ಪರಿಹಾರ ಕಂಡುಕೊಂಡ ಹಿನ್ನೆಲೆಯಲ್ಲಿ ಮುಷ್ಕರ ಕೊನೆಗೊಳಿಸಲಾಯಿತು.
ಶನಿವಾರ ಬೆಳಗ್ಗೆ ಕಾಸರಗೋಡು ಹೊಸ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ನ. 17ರಂದು ಕಾಸರಗೋಡು ರೈಲು ನಿಲ್ದಾಣ ಪರಿಸರದಲ್ಲಿ ಡಿವೈಎಸ್ಪಿಯವರು ಅಸಭ್ಯವಾಗಿ ನಿಂದಿಸಿದ್ದು, ಅಲ್ಲದೆ ಬಸ್ ಸಂಚಾರಕ್ಕೆ ಪ್ರತಿಕೂಲ ಸ್ಥಿತಿ ಸೃಷ್ಟಿಸಿದರೆಂದು ಆರೋಪಿಸಿ ನೌಕರರು ಬೆಳಗ್ಗೆ ಹೊಸ ಬಸ್ ನಿಲ್ದಾಣದಲ್ಲಿ ಮಿಂಚಿನ ಮುಷ್ಕರ ನಡೆಸಿದರು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಅಂಗವಾಗಿ ನಡೆಯುವ ಮೇಲ್ಸೇತುವೆ ನಿರ್ಮಾಣದಿಂದ ಸಾರಿಗೆ ಅಡಚಣೆ ನಿತ್ಯ ಉಂಟಾಗುತ್ತಿದೆ ಎಂದೂ, ಇದರ ಹೊಣೆಗಾರಿಕೆಯನ್ನು ಬಸ್ ನೌಕರರ ಮೇಲೆ ಹೊರಿಸುವ ಕ್ರಮವನ್ನು ಅಂಗೀಕರಿಸಲು ಸಾಧ್ಯವಿಲ್ಲವೆಂದು ನೌಕರರು ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಇನ್ಸ್ಪೆಕ್ಟರ್ ಪಿ.ಅಜಿತ್ ಕುಮಾರ್ ನೇತೃತ್ವದಲ್ಲಿ ನೌಕರರೊಂದಿಗೆ ಮಾತನಾಡಿದ ಬಳಿಕ ಮುಷ್ಕರವನ್ನು ತಾತ್ಕಾಲಿಕವಾಗಿ ಕೊನೆಗೊಳಿಸಲಾಯಿತು.
ಸಿಡಿಲು ಬಡಿದು ಮನೆಗೆ ಹಾನಿ
ಕಾಸರಗೋಡು: ಆದೂರು ಆಲಂತಡ್ಕದ ಜನಾರ್ದನನ್ ಅವರ ಮನೆಗೆ ನ. 17ರಂದು ರಾತ್ರಿ ಸಿಡಿಲು ಬಡಿದು ಹಾನಿಗೀಡಾಗಿದೆ. ಮನೆ ಸಮೀಪದ ಎರಡು ತೆಂಗಿನ ಮರ ಸುಟ್ಟು ಹೋಗಿದೆ. ಮನೆಯ ಮೈನ್ ಸ್ವಿಚ್ ಉರಿದಿದ್ದು ವಯರಿಂಗ್ ನಾಶವಾಗಿದೆ. ಗೋಡೆ ಬಿರುಕು ಬಿಟ್ಟಿವೆ.