ಕೇರಳ ಎಸೆಸೆಲ್ಸಿ ಗಣಿತ ಪ್ರಶ್ನೆಪತ್ರಿಕೆ ಸೋರಿಕೆ ಮಾ. 30: ಮರುಪರೀಕ್ಷೆ
Team Udayavani, Mar 27, 2017, 2:51 PM IST
ಕಾಸರಗೋಡು: ಕೇರಳ ಎಸ್ಎಸ್ಎಲ್ಸಿ ಪರೀಕ್ಷೆಯ ಗಣಿತ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ ಮಾ. 20ರಂದು ನಡೆದಿರುವ ಪರೀಕ್ಷೆಯನ್ನು ರದ್ದುಪಡಿಸಿ ಮಾ. 30ರಂದು ಅಪರಾಹ್ನ 1.30ಕ್ಕೆ ಮರುಪರೀಕ್ಷೆ ನಡೆಸಲು ರಾಜ್ಯ ಶಿಕ್ಷಣ ಇಲಾಖೆಯು ನಿರ್ಧರಿಸಿದೆ.
ಮಾ. 30ರಂದು ನಡೆಯಲಿದ್ದ ಇತರ ತರಗತಿಗಳ ಪರೀಕ್ಷೆಗಳನ್ನು ಮಾ. 31ರಂದು ಬೆಳಗ್ಗೆ 9.30ಕ್ಕೆ ನಡೆಯಲಿದೆ.
ಅಧ್ಯಾಪಕನ ಕೈವಾಡ ಕಣ್ಣೂರು ಹೈಯರ್ ಸೆಕೆಂಡರಿ ಶಾಲೆಯ ಓರ್ವ ಅಧ್ಯಾಪಕ ಎಸ್ಎಸ್ಎಲ್ಸಿ ಗಣಿತ ಪ್ರಶ್ನೆ ಪತ್ರಿಕೆ ತಯಾರಿಸಿದ್ದರು. ಇದೇ ಅಧ್ಯಾಪಕ ಮಲಪ್ಪುರಂ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಸ್ಪೆಷಲ್ ಕ್ಲಾಸ್ ನಡೆಸುತ್ತಿದ್ದಾರೆ.
ಸ್ಪೆಷಲ್ ಕ್ಲಾಸ್ಗಾಗಿ ಅವರು ಮಾದರಿ ಪರೀಕ್ಷೆ ನಡೆಸಿದ್ದರು. ಈ ಮಾದರಿ ಪ್ರಶ್ನೆಗಳನ್ನು ಪತ್ರಿಕೆಯೊಂದರಲ್ಲಿ ಪ್ರಕಟಿಸಲಾಗಿತ್ತು. ಅಲ್ಲಿ ಕೊಡಲಾದ ಬಹುತೇಕ ಪ್ರಶ್ನೆಗಳನ್ನು ಅವರು ಎಸ್ಎಸ್ಎಲ್ಸಿ ಪಬ್ಲಿಕ್ ಪರೀಕ್ಷೆಯ
ಪ್ರಶ್ನೆ ಪತ್ರಿಕೆಯಲ್ಲೂ ಅಳವಡಿಸಿ ದ್ದರು. ತಮ್ಮ ಟ್ಯೂಷನ್ ಸೆಂಟರ್ನ ವಿದ್ಯಾರ್ಥಿಗಳಿಗೆ ಅನುಕೂಲಕ್ಕಾಗಿ ಈ ರೀತಿ ಪ್ರಶ್ನೆ ಪತ್ರಿಕೆ ತಯಾರಿಸಿದ್ದರೆಂಬ ಆರೋಪ ವ್ಯಾಪಕವಾಗಿತ್ತು.
ಮಾ. 20ರಂದು ಗಣಿತ ಪರೀಕ್ಷೆ ನಡೆಸಿದಾಗಲೇ ಅದರಲ್ಲಿ ಕೇಳಲಾದ ಬಹುತೇಕ ಪ್ರಶ್ನೆಗಳು ಮಾದರಿ ಪ್ರಶ್ನೆಪತ್ರಿಕೆಯಲ್ಲಿ ಒಳಗೊಂಡಿದ್ದ ಅಂಶ ಬಯಲಿಗೆ ಬಂದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಆ ಹಿನ್ನೆಲೆಯಲ್ಲಿ ಅಂದು ನಡೆಸಲಾಗಿದ್ದ ಗಣಿತ ಪರೀಕ್ಷೆಯನ್ನು ರದ್ದುಪಡಿಸಿ ಮಾ. 30ರಂದು ಮರುಪರೀಕ್ಷೆ ನಡೆಸಲು ತುರ್ತು ಆದೇಶವನ್ನು ಶಿಕ್ಷಣ ಸಚಿವ ಪ್ರೊ| ಸಿ. ರವೀಂದ್ರ ನಾಥ್ ಹೊರಡಿಸಿದ್ದಾರೆ.
ಶಿಸ್ತುಕ್ರಮಕ್ಕೆ ನಿರ್ಣಯ
ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಶಿಕ್ಷಣ ಇಲಾಖೆಯು ಸಮಗ್ರ ತನಿಖೆ ಆರಂಭಿಸಿದೆ. ಮಾತ್ರವಲ್ಲದೆ ಪ್ರಶ್ನೆ ಪತ್ರಿಕೆ ನಡೆಸಿದ ಅಧ್ಯಾಪಕನ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆಯು ನಿರ್ಧರಿಸಿದೆ.