ಕೊನೆಗೂ ಗೋಭಕ್ಷಕ ಹುಲಿ ಸೆರೆ; 2 ತಿಂಗಳು ಸತಾಯಿಸಿದ್ದ ವ್ಯಾಘ್ರ!
40ಕ್ಕೂ ಅಧಿಕ ಹಸು ಬಲಿ
Team Udayavani, May 21, 2020, 6:02 AM IST
ಮಡಿಕೇರಿ: ಸೆರೆಯಾಗಿರುವ ಹುಲಿ.
ಮಡಿಕೇರಿ: ದಕ್ಷಿಣ ಕೊಡಗಿನ ವಿವಿಧ ಭಾಗಗಳಲ್ಲಿ ಎರಡು ತಿಂಗಳಿಂದ 40ಕ್ಕೂ ಹೆಚ್ಚು ಜಾನುವಾರುಗಳನ್ನು ಕೊಂದು ತಿಂದ ಹುಲಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಫಲವಾಗಿದೆ.
ಮಂಗಳವಾರ ಮಧ್ಯರಾತ್ರಿ ಹುದಿಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳೂರು ಗ್ರಾಮದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಅರಣ್ಯ ಅಧಿಕಾರಿಗಳು ಹಾಗೂ ಸಿಬಂದಿ ಅರಿವಳಿಗೆ ನೀಡಿ ಹುಲಿಯನ್ನು ಸೆರೆ ಹಿಡಿದರು. ಗ್ರಾಮದ ಕಳ್ಳೇಂಗಡ ದಿನೇಶ್ ದೇವಯ್ಯ ಅವರ ಹಾಲು ಕರೆಯುವ ಹಸುವನ್ನು ರವಿವಾರ ಹಾಡಹಗಲೇ ದಾಳಿ ನಡೆಸಿದ ಹುಲಿ ಕೊಂದು ಭಾಗಶಃ ತಿಂದು ಹಾಕಿತ್ತು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಶಾಸಕ ಕೆ.ಜಿ. ಬೋಪಯ್ಯ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸುವುದರೊಂದಿಗೆ ಹುಲಿಯನ್ನು ಸೆರೆ ಹಿಡಿಯುವಂತೆ ಇಲಾಖೆ ಮೇಲೆ ಒತ್ತಡ ಹೇರಿದ್ದರು. ನಿರಂತರ ಪ್ರಯತ್ನದ ಬಳಿಕ ಮಂಗಳವಾರ ರಾತ್ರಿ ವೇಳೆಗೆ ದಿನೇಶ್ ಅವರ ತೋಟದ ಹಿಂಭಾಗದಿಂದ ಸೆರೆಹಿಡಿಯಲಾಯಿತು.
ಪ್ರಭಾರ ಡಿಎಫ್ಒ ಕೋಣೇರಿರ ರೋಶಿನಿ, ಎಸಿಎಫ್ ಶ್ರೀಪತಿ, ಅರ್ಎಫ್ಒ ಅರಮಣಮಾಡ ತೀರ್ಥ, ಅರಿವಳಿಕೆ ತಜ್ಞ ಸನತ್, ಕುಶಾಲನಗರ ಡಿವೈಆರ್ಎಫ್ಒ ಹಾಗೂ ಶಾರ್ಪ್ ಶೂಟರ್ ಖ್ಯಾತಿಯ ಕನ್ನಂಡ ರಂಜನ್ ದೇವಯ್ಯ ಹಾಗೂ ಇಲಾಖೆಯ 40 ಸಿಬಂದಿ ಪಾಲ್ಗೊಂಡಿದ್ದರು. ಹುಲಿ ಸುಮಾರು 6 ವರ್ಷ ಪ್ರಾಯದ್ದೆಂದು ಅಂದಾಜಿಸಲಾ ಗಿದ್ದು, ಮೈಸೂರು ಮೃಗಾಲಯದ ಕೂರ್ಗಳ್ಳಿ ಯಲ್ಲಿರುವ ರೆಸ್ಕ್ಯೂ ಸೆಂಟರ್ಗೆ ಬಿಡಲಾಗಿದೆ.